Saturday, June 25, 2011

Rishikesh, Haridwar and Ramdev, a deadly threesome

ಹೃಷಿಕೇಶ್ ಬಹದೂರ್ ಹರಿದ್ವಾರದಿಂದ ಬರೆದ ರಾಮದೇವಾಯಣ
ಹೃಷಿಕೇಶ್ ಬಹದ್ದೂರ್ ದೇಸಾಯಿ
ಶುಕ್ರವಾರ, 24 ಜೂನ್ 2011 (02:53 IST)


ಪಕ್ಕದ ಮನೆಗೆ ಸಕ್ಕರೆ ಕಡ ತರಲು ಸಹ ಮನೆಯಿಂದ ಹೊರ ಹೋಗದ ನಮ್ಮವ್ವ “ನಾನು ಇರೋದರಾಗ ಹರಿದ್ವಾರಕ್ಕೆ ಹೋಗಬೇಕು. ಕರಕೊಂಡು ಹೋಗ, ಬ್ಯಾರೆ ದಾರಿನ ಇಲ್ಲಾ ಈಗ” ಅಂತ ಕೂತಾಗ ನನಗೆ ಬೇರೆ ದಾರಿ ಕಾಣಲಿಲ್ಲ. ಕೊನೆಗೂ ಅವಳನ್ನು ಕರೆದುಕೊಂಡು ನಡೆದೆ. ಆಟೋ, ಬಸ್ಸು, ಟ್ರೇನು, ಜಟಕಾ, ಕುದುರೆ ಸವಾರಿ, ಡೋಲಿ ಇತ್ಯಾದಿ ನೂರಾ ಎಂಟು ವಾಹನಗಳನ್ನು ಏರಿ, ಇಳಿದು ಕೊನೆಗೆ ಹರಿದ್ವಾರದಲ್ಲಿ ನಿಂತೆವು.

ಬೆಳಗಿನ ಚಳಿಯಲ್ಲಿ ಸಣ್ಣ ಹೋಟೆಲ್ ಒಂದರಲ್ಲಿ ಎರಡು ರೂಪಾಯಿಗೆ ಚಹಾ ಕುಡಿಯುತ್ತಿದ್ದಾಗ--- ಅಲ್ಲೇ, ಅಲ್ಲೇ ನೋಡಿ ನನಗೆ ಜ್ಞಾನೋದಯವಾಗಿದ್ದು.

ಅಲ್ಲಿ ಸಿಕ್ಕ ಕೆಲವು ಜನರಿಂದ ನನಗೆ ಭಾರಿ ಕುತೂಹಲಕರ ಮಾಹಿತಿ ದೊರೆಯಿತು. ಅದರಿಂದ ನನಗೆ ನಮ್ಮ ದೇಶವನ್ನು ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎಂದು ಏಕೆ ಡಿವೈಡ್ ಮಾಡಿದ್ದಾರೆ ಎಂದು ನನಗೆ ಅರ್ಥವಾಯಿತು. ಅಷ್ಟೇ ಅಲ್ಲ, ಸಾವಿರಾರು ವರುಷಗಳಿಂದ ಮಹಾನ್ ಪಂಡಿತರ ಲೆವಲ್ಲಿನಲ್ಲಿ ನಡೆಯುತ್ತಿರುವ ಹರ ಹೆಚ್ಚೋ, ಹರಿ ಹೆಚ್ಚೋ ಎನ್ನುವ ವಾದವೂ ನನ್ನ ಮನಸ್ಸಿನಲ್ಲಿ ಕೊನೆಗೊಂಡಿತು.

ನಾವೆಲ್ಲ ಅದಕ್ಕೆ ‘ಹರಿದ್ವಾರ’ ಎಂದರೆ ಉತ್ತರದವರು ಅದಕ್ಕೆ ‘ಹರದ್ವಾರ’ ಎನ್ನುತ್ತಾರೆ. ಇನ್ನು ಹರಿದ್ವಾರ ಎನ್ನುವ ಹೆಸರಿರುವ ಊರಿನಲ್ಲಿ ಹರಿಯ ದೇವಸ್ಥಾನಗಳಿಗಿಂತ ಹರ ಮಂದಿರಗಳೇ ಹೆಚ್ಚು. ಹರನನ್ನು ನೋಡಲು ಹರಿದ್ವಾರದ ಮೂಲಕವೇ ಹೋಗಬೇಕು ಎಂತಲೋ ಅಥವಾ ಹರನನ್ನು ನೋಡಿದರೆ ಹರಿಯನ್ನು ನೋಡಿದಂತೆಯೇ ಎಂತಲೋ ಈ ಊರಿಗೆ ಆ ಹೆಸರನ್ನು ಇಟ್ಟಿರಬಹುದು ಅಂದುಕೊಂಡೆ.

ಅಲ್ಲೇ ಪಕ್ಕದ ಬೆಂಚಿನಲ್ಲಿ ಇದ್ದ ಇಬ್ಬರು ಹಿರಿಯರು ಅವಾಗಿವಾಗ ಮಾತಾಡುತ್ತಿದ್ದರು. ಅದು ಕನ್ನಡದಂತೆ ಕೇಳಿತು. ಮದುವೆಯಾಗಿ ಸುಮಾರು ವರ್ಷವಾಗಿರಬೇಕು. ತುಂಬ ಅಂಡರ್ ಸ್ಟ್ಯಾಂಡಿಗ್ ಇದೆ. ಕೇವಲ ಒಬ್ಬರನ್ನೊಬ್ಬರು ನೋಡಿಯೇ ತಿಳಿದುಕೊಳ್ಳುತ್ತಾರೆ. ಮಾತು ಬೇಕೆಂತೇ ಇಲ್ಲ ಅಂದುಕೊಂಡೆ. ಹತ್ತಿರಕ್ಕೆ ಹೋಗಿ ಮಾತಾಡಿಸಿದೆ. ಆಗ ಗೊತ್ತಾಯಿತು. ಇಬ್ಬರಿಗೂ ಕಿವಿ ಕೇಳುವುದು ಅಷ್ಟಕ್ಕಷ್ಟೇ.

ಅನೇಕ ಸಾರಿ ಪ್ರಯತ್ನ ಮಾಡಿದ ನಂತರ ಬಿಎಸ್ಸೆನ್ನೆಲ್ ಮೊಬೈಲ್ ಲೈನ್ ಸಿಕ್ಕಂತೆ ನಾನು ನೀವು ಕನ್ನಡದವರಾ ಅಂತ ಹದಿಮೂರು ನೂರು ಸಾರಿ ಕೇಳಿದ ಮೇಲೆ ಅವರು ನನ್ನ ಮಾತಿಗೆ ಉತ್ತರ ಕೊಟ್ಟರು. “ನೋ ಹಿಂದಿ, ಓನ್ಲಿ ಇಂಗ್ಲಿಷ್. ವಿ ಆರ್ ಫ್ರಂ ಮೈಸೋರ್” ಅಂತ ಅಂದರು. ಇಷ್ಟು ಚೆನ್ನಾಗಿ ಬೇರೆ ಭಾಷೆ ಮಾತಾಡುತ್ತಾರೆ ಎಂದರೆ ಇವರು ಕನ್ನಡಿಗರೇ ಅಂತ ಖಾತ್ರಿಯಾಯಿತು. ತಮಗೆ ಕೇಳುವುದು ಕಡಿಮೆ ಆದರೂ ಅವರು ಹೇಳುವುದು ಕಡಿಮೆ ಅಲ್ಲ ಅಂತ ನಂತರ ಗೊತ್ತಾಯಿತು.

ಅವರ ಹೆಸರು ತೆರಕಣಾಂಬಿ ಮಹೇಶ ರಾವ್. ಅವರೂ ಅವರ ಹೆಂಡತಿ ಮಹೇಶ್ವರಿ ರಾವ್ ಅವರು ಇಬ್ಬರೂ ಟೆಲಿಫೋನ್ ಇಲಾಖೆಯಲ್ಲಿ ಇದ್ದವರು. ಇವರ ಮಾವನಿಗೆ ಮೈಸೂರಿನ ಒಂಟೀಕೊಪ್ಪಲಿನ ಮೂಲೆಯಲ್ಲಿ ಮಹಾರಾಜರು ಕೊಟ್ಟ ೧೨೦ ಬೈ ೧೦೦ ಸೈಟಿನಲ್ಲಿ ಇವರು ಮೊನ್ನೆ ಮೊನ್ನೆ ಮನೆ ಕಟ್ಟಿದ್ದರು. ಇದ್ದ ಇಬ್ಬರು ಮಕ್ಕಳನ್ನು ಸಾಫ್ಟವೇರ್ ಓದಿಸಿದರು. ಅವರು ಅಮೆರಿಕೆಗೆ ಹೋದಾಗ ಖುಷಿಪಟ್ಟರು. ಒಬ್ಬ ಪಂಜಾಬಿ ಹುಡುಗಿಯನ್ನೂ, ಇನ್ನೊಬ್ಬ ಅದಕ್ಕಿಂತ ದೂರದ ಫ್ರಾನ್ಸಿನ ಹುಡುಗಿಯನ್ನೂ ಮದುವೆಯಾದಾಗ ಬೇಜಾರು ಮಾಡಿಕೊಂಡರು. ಮರು ವರ್ಷದ ಹಿಂದೆ ರಾವ್ ಆಂಟಿಗೆ ಆರ್ಥರೈಟಿಸ್ ಆರಂಭವಾದಾಗ ಯಾರೋ ಅವರಿಗೆ ಬಾಬಾ ಅವರ ಬಗ್ಗೆ ಹೇಳಿದರು. ಇವರು ತಲಾ ಎರಡೂವರೆ ಸಾವಿರ ರೂಪಾಯಿ ಕೊಟ್ಟು ಬಾಬಾ ಅವರ ಬೆಂಗಳೂರು ಕ್ಯಾಂಪ್‌ನಲ್ಲಿ ಭಾಗವಹಿಸಿದರು. ಆಗಿನಿಂದ ಅವರ ಬೆನ್ನು ಹತ್ತಿದ ಇವರು ಇನ್ನೂ ಬಿಟ್ಟೇ ಇಲ್ಲ. ಮೈಸೂರಿನ ಮನೆಯನ್ನೂ ಮಾರಿ ಈಗ ಹರಿದ್ವಾರದಲ್ಲಿ ಸೆಟ್ಲ್ ಆಗಿದ್ದಾರೆ. “ಇಲ್ಲೆಲ್ಲ ಇದೆ, ಆದರೆ ಒಂದೊಳ್ಳೆ ಫಿಲ್ಟರ್ ಕಾಫಿ ಸಿಗಲ್ಲ” ಅಂತ ಅನುಲೋಮ-ವಿಲೋಮ ಮಾಡುವಾಗಲೆಲ್ಲ ಮೈಸೂರಿನ ದಿನಗಳನ್ನು ನೆನೆಸಿಕೊಳ್ಳುತ್ತಾರೆ. ವ್ಯಾಯಾಮ ಮಾಡದೇ ಶತಮಾನಗಳೇ ಕಳೆದಿರುವುದರಿಂದ ಕಪಾಲಭಾತಿ ಮಾಡುವಾಗ
ನಿಟ್ಟುಸಿರು ಬಿಡುತ್ತಾರೆ.

ಅವರು ಮಾತು ಆರಂಭಿಸಿದರು. “ನೋಡಿ, ಬಾಬಾ ಹೇಳ್ತಾರೆ, ಭಾರತದ ೪೦೦ ಲಕ್ಷ ಕೋಟಿ ರೂಪಾಯಿ ಸ್ವಿಸರ್ ಲ್ಯಾಂಡಿನಲ್ಲಿ ಬಿದ್ದಿದೆ. ಅದನ್ನು ಬಳಸಿ ೩೦ ವರ್ಷ ಯಾವುದೇ ತೆರಿಗೆ ಹಾಕದೇ ಸರಕಾರ ನಡೆಸಬಹುದು, ೬೦ ಕೋಟಿ ಜನರಿಗೆ ಕೆಲಸ ಕೊಡಬಹುದು, ಉಳಿದ ೬೦ ಕೋಟಿ ಜನರಿಗೆ ಮನೆಯಲ್ಲಿಯೇ ಕೂಡಿಸಿ ತಿಂಗಳಿಗೆ ೨೦೦೦ ರೂಪಾಯಿ ಕೊಡಬಹುದು, ಯಾವುದೇ ಹಳ್ಳಿಯಿಂದ ದೆಹಲಿಗೆ ನಾಲ್ಕು ಲೇನ್ ರಸ್ತೆ ಮಾಡಬಹುದು, ವಿಶ್ವಬ್ಯಾಂಕ್ ಸಾಲ ವಾಪಸು ಕೊಡಬಹುದು,” ಅಂತ ಕಣ್ಣು ಹೊಡೆದರು. “ಅಲ್ಲ ಸಾರ್ ನಮ್ಮ ಕಪ್ಪು ಹಣವನ್ನು ಇಲ್ಲಿ ತಂದು, ಅದಕ್ಕೆ ಬ್ಲೀಚಿಂಗ್ ಪೌಡರ್ ಹಾಕಿ ಬಿಳಿ ಮಾಡಲಿಕ್ಕೆ ಲೇಟ್ ಆಗುತ್ತೆ. ಆದರೆ ನೀವು ಈಗ ಹೇಳಿದ ಇತರ ಒಳ್ಳೆ ಕೆಲಸ ಯಾಕೆ ಬೇಗ ಶುರುಮಾಡಬಾರದು?” ಅಂದೆ. “ಹೇಗೆ ಮಾಡೋಣ, ದುಡ್ಡು ಎಲ್ಲಿದೆ?” ಎಂದರು ಅವರು. “ನಿಮ್ಮ ಬಾಬಾ ಹತ್ತಿರ ಇರೋ ಒಂದು ಸಾವಿರ ಕೋಟಿಯಿಂದಲೇ ಶುರುಮಾಡಬಹುದಲ್ಲವಾ,” ಅಂದೆ ಸುಮ್ಮನಾದರು. ಎರಡು ಸಾರಿ ಕಣ್ಣು ಹೊಡಕೊಂಡರು.

ನಾನು ಮೊದಲು ಅವರು ಏನೋ ಸೀಕ್ರೆಟ್ ಪಾಯಿಂಟ್ ಹೇಳಿದಾಗ ಮಾತ್ರ ಕಣ್ಣು ಹೊಡೆಯುತ್ತಾರೆ ಅಂತ ಅಂದುಕೊಂಡಿದ್ದೆ. ಆದರೆ ಅವರು ಹುಡುಗಿಯರಿಗೆ ಕೂಡ ಕಣ್ಣು ಹೊಡೆಯುವುದು ಕಂಡಮೇಲೆ ಕನ್ ಫ್ಯೂಸ್ ಆಯಿತು. ಅವರು ನಮ್ಮ ನಿತ್ಯಾನಂದನ ಕಸಿನ್ ಅಂತೂ ಅಲ್ಲ. ಹೀಗೇಕೆ ಅಂತ ಅವರನ್ನೇ ಕೇಳಿದೆ. “ಅಯ್ಯೋ ಅದು ಹಾಗಲ್ಲ ಅಂತ ಕಣ್ಣು ಮಿಟುಕಿಸಿದರು. ನೋಡಿ, ಅದು ಬಾಬಾ ಅವರು ಕಲಿಸಿದ್ದು. ಅವರು ಬೇಕಂತ ಮಾಡೋದಲ್ಲ. ಆ ದೇವರು ಅವರ ಮೂಲಕ ಮಾಡಿಸುವುದು. ಅದಕ್ಕೆ ಲೌಕಿಕ ಅರ್ಥ ಇಲ್ಲ. ಅದು ಪವಿತ್ರವಾದದ್ದು. ಬಾಬಾ ಅವರು ಕಣ್ಣು ಮಿಟುಕಿಸಿದಾಗಲೆಲ್ಲ ಈ ದೇಶಕ್ಕೆ ಒಳ್ಳಯದಾಗಿದೆ. ಅದಕ್ಕೇ ನಾವೆಲ್ಲ ಕಲಿತುಕೊಂಡಿದ್ದು. ಈಗ ಈ ಆಶ್ರಮದೊಳಗೆ ಬರಬೇಕು, ಇಲ್ಲಿರಬೇಕು, ಹೊರಗೆ ಹೋಗಬೇಕು ಅಂದರೆ ಅದನ್ನು ಬಳಸಲೇಬೇಕು. ಅದೊಂದು ಪಾಸವರ್ಡ ಇದ್ದಂಗೆ,” ಅಂತ ಅಂದರು.

ಅವರು ಆಶ್ರಮಕ್ಕೆ ಕರೆದುಕೊಂಡು ಹೋದರು. ಅಲ್ಲಿ ಹೆಂಗಸರ ಹಾಲಿನಲ್ಲಿ ಅವ್ವನನ್ನು ಕಳಿಸಲು ಹೋದೆವು. ಅಲ್ಲಿ ಒಬ್ಬರು ಹಿರೀ ಹೆಂಗಸು ಕೂತಿದ್ದರು. ಅವರು ಹಿಂದಿಯಲ್ಲಿ ಏನೋ ಪುರಾಣದ ಕತೆ ಹೇಳುತ್ತಿದ್ದರು. ಇತರ ಹೆಂಗಸರೆಲ್ಲ ಅವರ ಸುತ್ತ ಕೂತಿದ್ದರು.

ಬಾಬಾ ಅವರನ್ನು ನೋಡಬೇಕೆಂದಿರಲ್ಲ, ಇಲ್ಲೇ ಹೊರಗೆ ಕೂಡೋಣ ಬನ್ನಿ. ಬರ‍್ತಾರೆ, ಅಂತ ರಾವ್ ಹೇಳಿದರು. ಅಲ್ಲೇ ಗಿಡದ ಕೆಳಗೆ ಕೂತೆವು.

ಅರ್ಧ ಗಂಟೆಯ ನಂತರ ಆ ಪುರಾಣ ಹೇಳುವ ಸಾಧ್ವಿ ಇನ್ನಿಬ್ಬರು ಹೆಂಗಸರ ಹೆಗಲ ಮೇಲೆ ಕೈಹಾಕಿಕೊಂಡು ಈಚೆ ಬಂದರು. ಬಿಳೀ ಬಣ್ಣದ ಚೂಡಿ ದಾರ್ ಹಾಕಿ, ತಲೆ ಮೇಲೆ ಸೆರಗು ಹೊದ್ದುಕೊಂಡ ಅವರು ಪಂಜಾಬಿನವರು ಇರಬೇಕು ಎಂದುಕೊಂಡೆ. ರಾವ್ ಅವರು ಎದ್ದು ಹೋಗಿ ಅವರ ಹತ್ತಿರ ಮಾತಾಡಿ ಬಂದರು. ಆ ಸಾಧ್ವಿ ಅವರು ನನ್ನನ್ನು ನೋಡಲು ಈ ಕಡೆ ತಿರುಗಿದರು. ಆಗ ನನಗೆ ಯಾರೋ ಸಂತೆಯಲ್ಲಿ ನಿಲ್ಲಿಸಿ ಕಪಾಳಕ್ಕೆ ಹೊಡೆದಂತೆ ಶಾಕ್ ಆಯಿತು. ಹರಿದ್ವಾರದ ಚಳಿಯಲ್ಲೂ ಬೆವರು ಕಿತ್ತು ಬಂತು. ಯಾಕೆಂದರೆ ನಾನು ಯಾರನ್ನು ಸಾಧ್ವಿ ಎಂದು ತಿಳಿದು ಕೊಂಡಿದ್ದೇನೋ ಅವರೇ ಬಾಬಾ! “ನಮ್ಮ ಡ್ರೆಸ್ ನೋಡಿ ಗಾಬರಿಯಾಗಿದ್ದೀರಾ? ಆ ದೆಹಲಿ ಪೊಲೀಸರು ನಮ್ಮನ್ನು ರಾತ್ರಿ ಎಬ್ಬಿಸಲು ಬಂದಾಗ ಈ ಡ್ರೆಸ್ ನಿಂದಾಗಿ ಅರ್ಧ ಬಚಾವ್ ಆದೆವು. ಅದಕ್ಕೇ ಇದನ್ನು ಹಾಕಿಕೊಂಡು ಅಭ್ಯಾಸ ಮಾಡುತ್ತಿದ್ದೇವೆ. ಮತ್ತೆ ಯಾವಾಗಲಾದರೂ ದೆಹಲಿಗೆ ಹೋದರೆ ಬೇಕಾದೀತು. ಇನ್ನು ಶಿವ ಅರ್ಧನಾರೀಶ್ವರ ಆದದ್ದು ಹೇಗೆ? ಅದನ್ನು ತಿಳಿಯಲು ತಪಸ್ಸು ಮಾಡೋದಾದರೆ ಅದಕ್ಕೆ ಬೇಕಾದ ಡ್ರೆಸ್ ಹಾಕದಿದ್ದರೆ ಹೇಗೆ” ಎಂದರು.

ಅವರ ಪೀಎ ಮರುದಿನಕ್ಕೆ ಸಂದರ್ಶನ ನಿಗದಿಗೊಳಿಸಿದರು. ಅವರ ಭೇಟಿಗೆ ಹೊರಡುವ ಮೊದಲು ಅವರ ಬಗ್ಗೆ ಓದಬೇಕು ಎಂದು ಕೂತೆ. ಈ ‘ಬಾಬಾ’ ರಾಮದೇವ್ ಹೆಸರು ರಾಮಕಿಷನ್ ಯಾದವ್ ಅಂತ. ಹರಿದ್ವಾರದ ಹತ್ತಿರದ ಹಳ್ಳಿಯ ಬಡ ರೈತನ ಮಗನಾದ ಅವರು ಎಂಟನೇ ಈಯತ್ತೆಗಿಂತ ಮುಂದೆ ಓದಲಿಲ್ಲ. ಅವರೇ ಹೇಳುವಂತೆ ಅವರಿಗೆ ೧೫ ವರ್ಷದವರಿದ್ದಾಗ ಅವರ ಮನೆಗೆ ಒಬ್ಬ ವೈರಾಗಿ ಬಂದ. ಅಂಥವರನ್ನು ಉತ್ತರ ಭಾರತದವರು ‘ಬೈರಾಗಿ’ ಅಂತ ಕರೀತಾರೆ. (ಅದೇ ಉಚ್ಛಾರವೇ ಕರೆಕ್ಟು. ತುಮ್ ಬಿಸ್ವಾಸ್ ನಹಿ ಕರೋಗೆ!). ಅವನು “ನೀನು ನನ್ನ ಜೊತೆ ಬರ‍್ತೀಯಾ. ನಾಳೆಯಾದರೂ ಬರ‍್ತೀಯಾ ಅಥವಾ ಇನ್ನು ಇಪ್ಪತ್ತು ವರ್ಷವಾದರೂ ಬರ‍್ತೀಯಾ,” ಅಂತ ಅಂದು ಅವರ ತಲೆ ಮೇಲೆ ಕೈಇಟ್ಟ.

ಅವರು ಮರುದಿನ ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ ಮಾಡಿ, ಯಾವ ಟೀಸಿ ಕೈಗೂ ಸಿಗದೇ ಹಿಮಾಲಯ ತಲುಪಿದರು. ಅಲ್ಲಿ ಅವರಿಗೆ ಆ ಬೈರಾಗಿ ಸಿಕ್ಕನೋ ಇಲ್ಲವೋ ಗೊತ್ತಿಲ್ಲ. ಆದರೆ ಅವರು ಯೋಗ ಕಲಿತರು. ತಮಗೆ ೩೨ ವರ್ಷವಾದಾಗ ಹರಿದ್ವಾರಕ್ಕೆ ಬಂದರು. ಶಾಲೆ ಕಾಲೇಜುಗಳಲ್ಲಿ ಯೋಗ ಶಿಬಿರ ಏರ್ಪಡಿಸತೊಡಗಿದರು. ಹಿಮಾಲಯದಲ್ಲಿ ಕಲಿತ ಆರ್ಯುವೇದ ಔಷಧಿ ಪ್ರಯೋಗಗಳನ್ನೂ ಮಾಡಿದರು. ಈ ರೀತಿಯ ಶಿಬಿರಗಳು ಸಾರ್ವಜನಿಕರಿಗೂ ಆರಂಭವಾದವು. ಅವು ಹರಿದ್ವಾರ ಬಿಟ್ಟು ಹೊರಗೂ ನಡೆದವು. ಅಷ್ಟರಲ್ಲಿ ಒಮ್ಮೆ ಅವರಿಗೆ ಬೆಲ್ಸ್ ಪಾಲ್ಸಿ ರೋಗ ಬಂತು. ಅವರ ಮುಖಕ್ಕೆ ಲಕ್ವ ಹೊಡೆಯಿತು. ಅದು ಬಹುಮಟ್ಟಿಗೆ ಗುಣವಾಯಿತಾದರೂ ಅವರ ಅರಿವಿಲ್ಲದೇ ಒಂದು ಕಣ್ಣು ಮಿಟುಕಿಸುವ ಲಕ್ಷಣ ಮಾತ್ರ ಉಳಿದುಕೊಂಡಿತು.

ಇನ್ನು ಅವರ ನೂರಾರು ಯೋಗ ಕ್ಯಾಂಪುಗಳಲ್ಲಿ ಸಾವಿರಾರು ಜನ ಭಾಗವಹಿಸತೊಡಗಿದರು. ಅವರಲ್ಲಿ ಅನೇಕರು ಖುಷಿಯಿಂದ ಇವರ ಆಶ್ರಮಕ್ಕೆ ದಾನ ಮಾಡಿದರು. ಒಮ್ಮೆ ಅವರಿಂದ ಗುಣವಾದ ಜಮೀನುದಾರನೊಬ್ಬ ಅವರಿಗೆ ದೊಡ್ಡ ಜಮೀನು ದಾನ ಮಾಡಿದ.

ಉತ್ತರಾಖಂಡ ಸರಕಾರದ ಮಂತ್ರಿಗಳಲ್ಲೊಬ್ಬ ಅವರಿಗೆ ಆರ್ಯುವೇದ ಔಷಧಿಯ ಕಾರ್ಖಾನೆ ತೆರೆಯಲು ಅನುಕೂಲ ಮಾಡಿಕೊಟ್ಟರು.

ಅಷ್ಟರಲ್ಲಿ ಖಾಸಗಿ ಟಿವಿ ಚಾನೆಲ್ ತೆರೆಯಲು ಮುಕ್ತ ಅವಕಾಶ ನೀಡುವ ಕಾಯಿದೆ ಜಾರಿಗೆ ಬಂದಿದ್ದರಿಂದ ಧಾರ್ಮಿಕ ಚಾನೆಲ್‌ಗಳು ಶುರುವಾದವು. ಮೊದಲಿಗೆ ಇತರ ಚಾನೆಲ್‌ಗಳಲ್ಲಿ ಮಾತ್ರ ಯೋಗ ಶಿಬಿರ ಬಿತ್ತರಿಸಲಾಗುತ್ತಿತ್ತು. “ನಾವು ಯಾಕೆ ಇತರರ ಮರ್ಜಿಗೆ ಬೀಳಬೇಕು” ಎಂದು ಬಾಬಾ ಅವರು ತಮ್ಮದೇ ಕಂಪನಿ ತೆಗೆದರು. ಇತರ ಚಾನೆಲ್‌ಗಳಿಗೆ ಕಂಟೆಂಟ್ (ಯೋಗ ಶಿಬಿರದ ಚಿತ್ರೀಕರಣದ ವಿಡಿಯೋಗಳು) ಮಾರಾಟ ಮಾಡಲು ಶುರು ಮಾಡಿದರು.

ಭಾರತೀಯರು ಮೈಮುರಿದು ದುಡಿಯುವುದನ್ನು ಕಡಿಮೆ ಮಾಡಿದ ಮೇಲೆ ಅವರಲ್ಲಿ ಆರ್ಥರೈಟಿಸ್, ಯಾಸಿಡಿಟಿ, ಡಯಾಬಿಟಿಸ್ ಹೆಚ್ಚಾಯಿತು. ಸಕ್ಕರೆ ತಿನ್ನಬೇಡಿ ಎಂದು ಹೇಳುವ ಡಾಕ್ಟರಿಗಿಂತ ಜೇನುತುಪ್ಪ ತಿನ್ನಿ ಎಂದು ಹೇಳುವ ಡಾಕ್ಟರು ನಮಗೆ ಇಷ್ಟವಾಗತೊಡಗಿದರು. ಅಲೋಪಥಿ ಡಾಕ್ಟರನ್ನು ಬೈಯ್ಯುವ, ಆಯುರ್ವೇದದಿಂದ ಎಲ್ಲವನ್ನೂ ಗುಣಪಡಿಸಬಹುದು, ಮನೆಯ ಸುತ್ತ ಕುಂಬಳಕಾಯಿ (ಲೋಕಿ) ಬೆಳೆಯಿರಿ, ನೀವೇ ಸ್ವಂತ ಆಯುರ್ವೇದ ಡಾಕ್ಟರ್ ಆಗಿ ಎಂದು ಹೇಳುವ ಬಾಬಾ ಎಲ್ಲರಿಗೂ ಪ್ರಿಯವಾಗತೊಡಗಿದರು.

ಅವರ ಭಕ್ತರು, ಭಕ್ತರ ಕಿಸೆಯಲ್ಲಿನ ರೊಕ್ಕ ಹೆಚ್ಚಾದಂತೆ ಹರಿದ್ವಾರದಲ್ಲಿ ಒಂದು ಯೋಗ, ಆಯುರ್ವೇದ ಯುನಿವರ್ಸಿಟಿ ಬಂತು. ಕೇಂದ್ರ ಸರಕಾರದ ಮಾಜಿ ಐಎಎಸ್ ಅಧಿಕಾರಿಯೊಬ್ಬರು ಅದಕ್ಕೆ ಆಡಳಿತಾಧಿಕಾರಿಯಾಗಿ ಬಂದರು. ಉತ್ತರ ಪ್ರದೇಶದ ವಿಶ್ವವಿದ್ಯಾಲಯದ ಮಾಜಿ ವೀಸಿಯೊಬ್ಬರು ಅದಕ್ಕೆ ವೀಸಿಯಾಗಿ ನಿಂತರು.

ಅಮೆರಿಕದ ಎನ್ನಾರಾಯಿಗಳೊಬ್ಬರು ಬಾಬಾರಿಗೆ ಕ್ಯಾಲಿಫೋರ್ನಿಯಾದಲ್ಲಿ ೧೦೦ ಎಕರೆ ಜಮೀನು ದಾನ ಮಾಡಿದರು. ಅವರೊಂದಿಗೆ ಸ್ಪರ್ಧೆಗೆ ಬಿದ್ದ ಲಂಡನ್ನಿನ ಗುಜರಾತಿ ಭಕ್ತರು ಯಾರೋ ಬಾಬಾರಿಗೆ ಸ್ಕಾಟ್‌ಲ್ಯಾಂಡಿನಲ್ಲಿ ಒಂದು ದ್ವೀಪವನ್ನೇ ದಾನ ಮಾಡಿದರು. ಈ ಎರಡೂ ಕಡೆಗಳಲ್ಲಿ ಯೋಗಾ ಸೆಂಟರ್ ಮಾಡುವುದಾಗಿ ಬಾಬಾ ಹೇಳಿದ್ದಾರೆ.

ನಮ್ಮ ಹಾವೇರಿ, ಸವಣೂರುಗಳಷ್ಟು ಸಣ್ಣದಾದ, ಯಾತ್ರೆಗೆ ಬರುವ ಧಾರ್ಮಿಕರಿಂದಾಗಿಯೇ ನಡೆಯುತ್ತಿದ್ದ ಹರಿದ್ವಾರ ಈಗ ಬದಲಾಗಿದೆ. ಬಾಬಾ ಅವರ ಹೆಸರು ದೊಡ್ಡ ಬ್ರ್ಯಾಂಡ್ ಆಗಿ ಪರಿಣಮಿಸಿದೆ. ಅವರ ಔಷಧಿಯ ಕಾರ್ಖಾನೆ ನಡೆಸಲು ಅಮೆರಿಕದಲ್ಲಿ ಎಂಬಿಎ ಕಲಿತು ಬಂದ ಯುವಕರ ಸೈನ್ಯವೇ ಇದೆ. ಅವರ ಯೋಗ ಶಿಬಿರ, ಆಯುರ್ವೇದ ಆಸ್ಪತ್ರೆ ಎಲ್ಲ ದೊಡ್ಡ ಉದ್ದಿಮೆಗಳಾಗಿವೆ.

ಬಾಬಾ ಅವರು ಇರುವ ಮನೆ ಅರಮನೆಯಂತೆ ಇದೆ. ಹರಿದ್ವಾರದ ಚಳಿಯಲ್ಲೂ ಅವರನ್ನು ತಂಪಾಗಿ ಇಡಲು ಹೆವಿ ಡ್ಯೂಟಿ ಏಸಿಗಳು ೨೪ ತಾಸು ಕೆಲಸ ಮಾಡುತ್ತಿವೆ.

ಇನ್ನು ದೇಶದ ಇತರ ಸ್ವಾಮಿಗಳು ಹೊಟ್ಟೆಕಿಚ್ಚು ಪಡುವಷ್ಟು ಸ್ವಯಂಸೇವಕರಿದ್ದಾರೆ. ಅವರ ಸೇವೆಯಲ್ಲಿಯೇ ಪ್ರಾಮಾಣಿಕ ಖುಷಿ ಕಾಣುವ ಯುವಕ-ಯುವತಿ, ಮುದುಕ-ಮುದುಕಿಯರ ದಂಡೇ ಇದೆ.

ಇವರೆಲ್ಲ ಬಾಬಾ ಅವರ ಸೇವೆಗಾಗಿ ತುಂಬಿದ ಕುಟುಂಬ, ದೊಡ್ಡ ಸಂಬಳದ ಕೆಲಸ ಎಲ್ಲ ಬಿಟ್ಟು ಬಂದವರು, ಇಷ್ಟೆಲ್ಲಾ ಪಡೆದವರು ಇನ್ನೇನು ಸಾಧಿಸಲು ದೆಹಲಿಗೆ ಹೋಗಿ ಊಟ ಬಿಟ್ಟರು? ತಮ್ಮ ೪೬ ನೇ ವಯಸ್ಸಿನಲ್ಲಿ ಅವರನ್ನು ಯಾವ ಮನಮೋಹನ ಮುರಳಿ ಕರೆಯಿತು? ಅದನ್ನೆಲ್ಲ ಅವರನ್ನು ಭೇಟಿಯಾದಾಗ ಕೇಳಬೇಕು ಎಂದುಕೊಂಡೆ. ಮರುದಿನ ತಮ್ಮ ಕೇಸರಿ ಟ್ರ್ಯಾಕ್ ಸೂಟಿನಲ್ಲಿ ಸಿಕ್ಕರು. ನೋಡಿ, ಇದೆಲ್ಲಾ ತುಂಬಾ ಸಿಂಪಲ್. ಈಗ ಅಣ್ಣಾ ಅವರು ಉಪವಾಸ ಮಾಡಿಹೋದಮೇಲೆ ದೆಹಲಿಯ ಆ ಜಾಗ ಬಿಕೋ

“ನೋಡಿ ನಮ್ಮ ದೇಶದ ಹಣ- ಕಪ್ಪೋ, ಬಿಳಿಯೋ -ನಮ್ಮಲ್ಲಿಯೇ ಇರಬೇಕು. ಆ ವಿದೇಶಿ ಬ್ಯಾಂಕಿನಲ್ಲಿ ಕಪ್ಪು ಹಣ ಏಕೆ ಇಡಬೇಕು? ನಾವಿಲ್ಲವೇ? ನಮ್ಮಂಥ ನೂರಾರು, ಸಾವಿರಾರು ಆಶ್ರಮಗಳಿಲ್ಲವೇ? ಭಕ್ತರು ಪ್ರೀತಿಯಿಂದ ದಾನ ಕೊಟ್ಟರೆ ನಾವು ಬೇಡ ಎನ್ನುತ್ತೇವೆಯೇ? ಸ್ವಿಜರ್ ಲ್ಯಾಂಡಿನವರು ನಮಗಿಂತ ಬೆಳ್ಳಗೆ ಇದ್ದಾರೆ ಅಂದ ಮಾತ್ರಕ್ಕೆ ಜಗತ್ತಿನ ಕಪ್ಪು ಹಣವೆಲ್ಲ ಅವರಿಗೇ ಸೇರಬೇಕೆ? ಇದು ವರ್ಣಭೇದವಲ್ಲದಿದ್ದರೆ ಇನ್ಯಾವುದು?” ಅಂದರು. ಅಚ್ಛಾ, ಠೀಕ ಹೈ ಅಂದೆ.

“ಇನ್ನು ಸಾವಿರ, ಐನೂರು ರೂಪಾಯಿಯ ನೋಟು ಬ್ಯಾನ್ ಮಾಡಿ ಅಂತ ಹೇಳಿದ್ದೇವೆ. ಅದು ಕೇವಲ ಅರ್ಧ ಡಿಮಾಂಡ್ ಅಷ್ಟೇ. ನಿಜವಾಗಿ ಹೇಳಬೇಕೆಂದರೆ ಕರೆನ್ಸಿ ನೋಟನ್ನೇ ಬ್ಯಾನ್ ಮಾಡಬೇಕು. ನಮ್ಮ ಸಾಯಿಬಾಬಾ ಅವರು ಕೇವಲ ಬಂಗಾರದ ಗಟ್ಟಿಗಳಿಂದಲೆ ಪ್ರಪಂಚದ ವ್ಯವಹಾರ ಮುಗಿಸಲಿಲ್ಲವೇ?” ಅಂದರು. ಠೀಕ ಹೈ, ಠೀಕ ಹೈ ಅಂದೆ.

“ಇನ್ನು ಪ್ರಧಾನ ಮಂತ್ರಿ, ನ್ಯಾಯಾಧೀಶರು, ಅವರು ಇವರು ಎಲ್ಲರೂ ಲೋಕಪಾಲ್ ವ್ಯಾಪ್ತಿಗೆ ಬರಬೇಕು ಅಂದೆವು. ಸ್ವಾಮೀಜಿಗಳು, ಬಾಬಾಗಳು, ಮುಲ್ಲಾಗಳು, ಪಾದ್ರಿಗಳು ಬರಬೇಕು ಅಂತ ಅಂದೆವಾ? ಇಲ್ಲ. ಇದನ್ನು ನಮ್ಮನ್ನು ಟೀಕಿಸುತ್ತಿರುವ ಧರ್ಮಗುರುಗಳು ತಿಳಿದುಕೊಳ್ಳಬೇಕು” ಅಂತ ಅಂದರು. ಇದೂ ಕೂಡ ಠೀಕ ಹೈ ಬಿಡಿ, ಅಂದೆ.

“ಕೊನೆಯದಾಗಿ ಈ ದೇಶದ ಪ್ರಧಾನ ಮಂತ್ರಿಯನ್ನು ಜನ ನೇರವಾಗಿ ಚುನಾಯಿಸಬೇಕು ಅಂತ ಬೇಡಿಕೆ ಇಟ್ಟೆವು. ಅದು ಯಾಕೆ ಅಂತ ನಿಮ್ಮಂತ ರಾಜಕೀಯ ವರದಿಗಾರಿಕೆ ಮಾಡಿದವರಿಗೆ ಗೊತ್ತಾಗಲ್ವಾ” ಅಂದು ಕಣ್ಣು ಮಿಟಿಕಿಸಿದರು. ಅದು ತಿಳಿಯಲಿಲ್ಲ. ಇನ್ನೊಮ್ಮೆ ಹೇಳಿ ಎಂದೆ. “ಸರಿ ನಿಮಗೆ ರಾಜಕಾರಣದ ಭಾಷೆ ತಿಳಿಯೋದಿಲ್ಲ ಅನ್ನಿಸುತ್ತದೆ, ಧರ್ಮದ ಭಾಷೆಯಲ್ಲಿ ಹೇಳ್ತೇನೆ,” ಅಂತ ಶುರು ಮಾಡಿದರು.

“ಅಲ್ಲರೀ ಮನಮೋಹನ ಸಿಂಗ್‌ಗೆ ಎಂಬತ್ತಾಗುತ್ತಾ ಬಂತು. ಸೋನಿಯಾ ಗಾಂಧಿ ಪ್ರಧಾನಿ ಆಗಲ್ಲ. ರಾಹುಲ್ ಕೈಲಾಗಲ್ಲ. ಪ್ರಿಯಾಂಕಾ ಆಗಬೇಕಂದರೆ ವಾಡ್ರಾ ಬಿಡಲ್ಲ. ಇನ್ನು ಬಿಜೆಪಿಯಲ್ಲಿ ಉಳಿದಿರೋರು ಇಬ್ಬರೇ- ನಾತಿನ್ ಯಡಿಯೂರಪ್ಪ, ನೀತಿನ್ ಗಡಕರಿ. ಕುಮಾರಸ್ವಾಮಿ ಪ್ರಧಾನಿ ಅಗೋಕೆ ಹೋದರೆ ದೊಡ್ಡ ಗೌಡರು ನಾನಿನ್ನೂ ಇದ್ದೀನಪ್ಪಾ ಅಂತ ಯಾಂಟಿ ಚೇಂಬರ್ ನಿಂದ ಗುಟುರು ಹಾಕ್ತಾರೆ. ಆ ಎಡರಂಗದವರನ್ನೆಲ್ಲ ಮಮತಾ ದೀದಿ ದುರಂತೋ ಎಕ್ಸ್‌ಪ್ರೆಸ್‌ನಲ್ಲಿ ತುಂಬಿ ತ್ರಿಪುರಾಕ್ಕೆ ಪಾರ್ಸಲ್ ಮಾಡಿಬಿಟ್ಟಿದ್ದಾರೆ. ಇನ್ನು ಈ ಭಾರತದಲ್ಲಿ ಉಳಿದ ನಾಯಕರು ಯಾರು? ಯಾರಿಲ್ಲ. ಯದಾ ಯದಾ ಹಿ ಧರ್ಮಸ್ಯ ಅನ್ನೋ ಡಯಲಾಗ್ ನ ಲಾಸ್ಟ್ ಲೈನ್ ಏನಿದೆ? ಸಂಭವಾಮಿ ಯುಗೇ ಯುಗೇ ಅಂತ. ಅಂದರೆ ಧರ್ಮ ಅನ್ನೋದು ಸರಕಾರಿ ಕಾರ್ಖಾನೆಯಂತೆ, ರಿಪೇರಿ ಮಾಡಲಾರದಷ್ಟು ಕೆಟ್ಟು ಹೋದಾಗ ದೇವರು ಮತ್ತೆ ಮತ್ತೆ ಸೆಕೆಂಡ್ ಫ್ಲೋರ್ ನಿಂದ ಕೆಳಗೆ ಇಳಿಯುತ್ತಾನೆ ಅಂತ ಅರ್ಥ. ದೇವರೇನು ರಾಜಕಾರಣಿಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಾನಾ? ಇಲ್ಲ. ಅವನು ಸ್ವಾಮೀಜಿ, ಬಾಬಾಗಳ ರೂಪದಲ್ಲೇ ಪ್ರಕಟವಾಗೋದು. ಇಂಥವರು ಪ್ರಧಾನಿ ಆಗಬೇಕಾದರೆ, ಪಾರ್ಟಿ, ಟಿಕೆಟ್ಟೂ, ಹೈಕಮಾಂಡು ಅಂತ ಕೂರಕ್ಕಾಗತ್ತಾ, ನಮಗಿರೋ ಜನಪ್ರಿಯತೆಗೆ ಜನ ನಮ್ಮನ್ನು ಡೈರೆಕ್ಟ್ ಆಗಿ ಆರಿಸಬೇಕಪ್ಪಾ” ಅಂತ ಇಲ್ಲದ ಕಾಲರ್ ಅನ್ನು ಕುಣಿಸಿದರು. ಆಗ ಅವರೇನು ಹೇಳಲು ಇಷ್ಟೊತ್ತೂ ಪ್ರಯತ್ನ ಮಾಡುತ್ತಿದ್ದರೋ ಅದು ನನಗೆ ತಿಳಿಯಲು ಆರಂಭಿಸಿತು. ನನ್ನ ಮನಸ್ಸಿನ ಅಂಧಕಾರದ ಪೊರೆ ಹರಿದು ಜ್ಞಾನದ ಬೆಳಕು ಮೂಡಲಾರಂಭಿಸಿತು.

ಆ ನಂತರ ಅವರು ಐದು ದಿನ ಉಪವಾಸಕ್ಕೆ ಕೂತರು. ಆವಾಗ ಏನಾಯಿತು ಅಂತ ಎಲ್ಲರಿಗೂ ಗೊತ್ತಿದೆ.

ಅವರು ಆಸ್ಪತ್ರೆ ಐಸಿಯೂದಲ್ಲಿ ಇದ್ದಾಗ ‘ಕ್ಯಾನ್ ಐ ಸಿ ಯೂ’ ಅಂತ ಎಸ್‌ಎಂಎಸ್ ಕಳಿಸಿದರು. ಹೋದೆ. “ಅಯ್ಯೋ ಇದೆಲ್ಲ ನರಕ ಕಣ್ರೀ” ಅಂದರು. “ನಾವು ಬಾಡಿ ಬಿಲ್ಡಿಂಗ್ ಮಾಡಿ ರೂಢಿ ಇದ್ದವರು. ಉಪವಾಸ ವನವಾಸ ಎಲ್ಲ ನಮಗೆ ಬೇಕಾಗಿಲ್ಲ. ನಾವು ಉಪವಾಸ ಕೂತ ಐದನೇ ದಿನಕ್ಕೇ ಸಲೈನ್ ಹಚ್ಚುವ ಪರಿಸ್ಥಿತಿ ಬಂತು. ಇದು ಯಾವಾನು ಹೇಳಿದ್ದಾನು? ಇದೆಲ್ಲಾ ಆ ಗಾಂಧಿ, ಅಣ್ಣಾ ಹಜಾರೇಗೆ ಸರಿ, ನಾವು ಯೋಗ್ ಮಾಡ್ತಾ ಗೋಡಂಬಿ, ಪಿಸ್ತಾ ತಿನ್ನುತ್ತಾ ಇರೋಣ, ಲೋಕೀ ಜ್ಯೂಸ್ ಕುಡಿಯುತ್ತಾ ಹೈ-ಲೆವಲ್ ಭಕ್ತರ ನಡುವೆ ಓಡಾಡೋಣ” ಅಂತ ಅಂದರು. ಬ್ರಾಜಿಲ್ ಗೆ ಪ್ರಯಾಣ ಬೆಳೆಸಲು ತಮ್ಮ ಖಾಸಗಿ ವಿಮಾನ ಹತ್ತಿದರು. ಅದನ್ನು ನೋಡಿ ನಾವು ರೇಲ್ವೇ ಸ್ಟೇಷನ್ ಗೆ ಹೋಗಲು ನಾವು ಜಟಕಾ ಹತ್ತಿದೆವು.

ಅದು ದೆವ್ವ ಅಡ್ಡಾಡುವ ಸಮಯ. ಅಂದರೆ ಮಧ್ಯರಾತ್ರಿಯ ನಂತರದ ಹೊತ್ತು. ನಾನು ಕಂಪ್ಯೂಟರ್ ಮುಚ್ಚಿ ಕಚೇರಿಗೆ ಕೀಲಿ ಹಾಕಿ ಹೊರ ಬಂದಾಗ ಒಳಗೆ ಫೋನ್ ಹೊಡಕೊಳ್ಳತೊಡಗಿತು. ಕಚೇರಿ ಕೆಲಸ ಮುಗಿದ ಮೇಲೆಯೇ ಅತ್ಯಂತ ಮುಖ್ಯ ಟೆಲಿಫೋನು ಬರುವ ಆಫೀಸುಗಳಿಗೆ ಪ್ಯೂವರ್ ಕನ್ನಡದಲ್ಲಿ ಪತ್ರಿಕಾ ಕಚೇರಿ ಎಂದು ಹೆಸರು.

ಮತ್ತೆ ವಾಪಸ್ ಷಟರ್ ಎತ್ತಿ, ಫೋನೆತ್ತಿ, ದನಿ ಎತ್ತಿ ಹಲೋ ಎಂದಾಗ ಅತ್ಲಾ ಕಡಿಂದ ಮಾತಾಡಿದವರು ಕೆಂಡಸಂಪಿಗೆ ಸಂಪಾದಕರು.

ಹೌದು ಎನ್ನುವವನನ್ನು ಜಗತ್ತಿನಲ್ಲಿ ಯಾರೂ ಏನೂ ಮಾಡಲು ಸಾಧ್ಯವಿಲ್ಲವಂತೆ. ಅದು ನಮ್ಮ ವೃತ್ತಿಯಲ್ಲಿ ದಿನಾಲೂ ನಿಜವಾಗುತ್ತಾ ಹೋಗುತ್ತದೆ. ಅಲ್ಲರೀ ಆ ಬಾಬಾ ರಾಮದೇವ್ ಬಗ್ಗೆ ನೀವು ಬರೀಬಾರದೇ, ಇಷ್ಟೊಂದು ಸಂಬಳ ತೊಗೋತೀರಿ. ಇನ್ನು ವೇಜ್ ಬೋರ್ಡ್ ಬೇರೆ ಬರೋದಿದೆ. ಅವಾಗ ನಿಮಗೆಲ್ಲ ಯೂಜಿಸಿ ಲೆವಲ್ ಸಂಬಳ ಬರುತ್ತದೆ. ಈಗಲೇ ಕೆಲಸ ಮಾಡದ ನೀವು ಆಗ ಮಾಡ್ತೀರಾ?ನಮಗೆ ಮುಫತ್ತಾಗಿ ಬರೆದುಕೊಡಿ’ ಅಂತ ಬಾಬಾ ರಾಮದೇವ್ ಸ್ಟೈಲಿನಲ್ಲಿ ಅರ್ಧ ತಾಸು ಉಸಿರು ನಿಲ್ಲಿಸದೇ ಬೈದರು.

“ಸಾರ್ ಸಾರ್ ಒಂದ್ನಿಮಿಷ ಸಾರ್. ನಾನ್ ಆಗಲೇ ಆ ಸ್ಟೋರಿ ಕಳಿಸಿ ಆಯಿತು,” ಅಂತಂದೆ. ಹೌದಾ, ಯಾವಾಗ?, ನಾನ್ ನೋಡ್ಲೇ ಇಲ್ಲಾ ಅಂತ ಇಟ್ಟರು. ಅವರು ಉಳಿದುಕೊಂಡರು, ನಾನೂ ಉಳಿದುಕೊಂಡೆ.

Sunday, May 1, 2011

Democracy for Dummies- III- What is Jan Lokpal Bill?

Site Web
ಬಡಪಾಯಿಗಳಿಗೆ ಜನ ಲೋಕಪಾಲ್ ಮಸೂದೆ:ಹೃಷಿಕೇಶ್ ಪಾಯಿಂಟುಗಳು
ಹೃಷಿಕೇಶ್ ಬಹದ್ದೂರ್ ದೇಸಾಯಿ
ಸೋಮವಾರ, 11 ಏಪ್ರಿಲ್ 2011 (04:55 IST)
(ಚಿತ್ರ:ಪ್ರಕಾಶ್ ಬಾಬು)

ಆ ರಾಳೆಗಾಂವ ಸಿದ್ಧಿಗೆ ಹೋಗಿ ಅಣ್ಣಾ ಹಜಾರೆ ಅವರ ಬಗ್ಗೆ ಸುದ್ದಿ ಮಾಡಿ ಎಂದು ನನಗೆ ಸಂಪಾದಕರು ಹೇಳಿ ನೂರಾ ಇಪ್ಪತ್ತು ವರ್ಷಗಳಾಗಿದ್ದವು. ಆದರೆ ನಾನು ಮಾಡಿರಲಿಲ್ಲ. ಪತ್ರಕರ್ತನಿಗೇನು ಮರ್ಯಾದೆ ಇಲ್ಲವೇ? ಸಂಪಾದಕರು ಹೇಳಿದ್ದೆಲ್ಲ ಮಾಡಿಬಿಡೋದೆ? ಅವರು ದೆಹಲಿಗೆ ಹೋಗಿ ಊಟ ಬಿಟ್ಟಾಗಲೂ ನಾನು ಬರೆಯಲಿಲ್ಲ. ಛೆ! ನಮ್ಮಂತಹವರು ಇಂತಹ ಗಂಭೀರ ವಿಷಯಗಳನ್ನೆಲ್ಲ ಬರೆದರೆ ಹೇಗೆ ಅಂತ ಸುಮ್ಮನಿದ್ದೆ.

ಆದರೆ ಕೊನೆಗೆ ವಾಗ್ದೇವಿ ನನ್ನ ಕೈ ಹಿಡಿದು ನನ್ನ ಬೆರಳುಗಳನ್ನು ಕೀಬೋರ್ಡಿಗೆ ಮುಟ್ಟಿಸಲೇಬೇಕಾದ ದಿನ ಬಂತು. ಆ ಮರೆಯಲಾರದ ಘಳಿಗೆ ಯಾವುದೆಂದರೆ ಮುಖ್ಯಮಂತ್ರಿ ಯಡ್ಡ್ಯೂರಪ್ಪನವರು ಅಣ್ಣಾಗೆ ಹಜಾರ್ ವಂದನೆಗಳನ್ನು ಹೇಳಿ ಅವರನ್ನು ಬೆಂಬಲಿಸಿದ ಕ್ಷಣ. ನನಗೆ ಎಂಥಾ ಖುಶಿ ಆಯಿತು ಎಂದರೆ ಆ ಅನುಭೂತಿಯನ್ನು ವರ್ಣಿಸಲು ಪದಗಳೆ ಸಿಗುತ್ತಿಲ್ಲ.ಎರಡು ದಿನಗಳ ಮೇಲೆ ಯಡ್ಡ್ಯೂರಪ್ಪ ಅವರ ಇನ್ನೊಂದು ಹೇಳಿಕೆ ಹೊರ ಬಂತು- “ಕೇಂದ್ರ ಸರಕಾರ ಲೋಕಪಾಲ್ ಮಸೂದೆ ರೂಪಿಸುವಾಗ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಲಹೆ ಕೇಳಬೇಕು”. ಆಗ ಮುಖ್ಯಮಂತ್ರಿಗಳ ಪಾದ ಕಮಲಗಳಿಗೆ ಮನಸ್ಸಿನಲ್ಲೇ ಸಾಷ್ಟಾಂಗ ನಮನಗಳನ್ನೂ ಸಲ್ಲಿಸಿಬಿಟ್ಟಿದ್ದೆ.

ಅದೆಲ್ಲಾ ಇರಲಿ, ಹಜಾರೆ ಸಾಹೇಬರು ನಾಲ್ಕು ದಿನ ಉಪವಾಸ ಮಾಡುತ್ತೇನೆಂದು ಹೇಳಿ ರಾಜಕಾರಣಿಗಳ, ಐಎಎಸ್‌ಗಳ ತಲೆ ತಿಂದಿದ್ದು ಏಕೆ? ಈಗ ಇರುವ ಕಾನೂನಿಗೂ, ಅವರು ಶಿಫಾರಸು ಮಾಡುತ್ತಿರುವ ಕಾನೂನಿಗೂ ವ್ಯತ್ಯಾಸ ಏನು? ನಮ್ಮ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ. ಅದು ಇಡೀ ವ್ಯವಸ್ಥೆಯ ಬಗ್ಗೆ, ಅಂತ ಅವರು ಹೇಳಿದರಲ್ಲ, ಹಂಗಾದರೆ ಈ ವ್ಯವಸ್ಥೆಯಲ್ಲಿ ಬದಲಾಗಬೇಕಾದ್ದು ಏನಿದೆ. ಕೊನೆಗೆ, ಈ ಜನ ಲೋಕಪಾಲ್ ಮಸೂದೆಯಲ್ಲಿ ಇರುವುದಾದರೂ ಏನು? ಇದನ್ನು ಮೊದಲು ನಾನು ತಿಳಿದುಕೊಂಡರಲ್ಲವೇ ಬೇರೆಯವರಿಗೆ ಹೇಳುವುದು, ಹೀಗಾಗಿ ಅದರ ಬಗ್ಗೆ ಓದಲು ಶುರು ಮಾಡಿದೆ.

೧. ಲೋಕಪಾಲ್ ಬಿಲ್ ಅಧಿಕಾರಿಗಳು ಮಾಡಿ, ರಾಜಕಾರಣಿಗಳು ಚರ್ಚಿಸಿದ್ದು. ಜನಲೋಕಪಾಲ ಬಿಲ್ ಎನ್ನುವುದು ಸರಕಾರೇತರ ಸಂಸ್ಥೆಗಳು ಮಾಡಿದ್ದು. ಮಾಹಿತಿ ಹಕ್ಕು ಹೋರಾಟಗಾರ ಅರವಿಂದ ಕೇಜರಿವಾಲ್, ವಕೀಲ ಶಾಂತಿಭೂಷಣ್ ಹಾಗೂ ಲೋಕಾಯುಕ್ತ ಸಂತೋಷ ಹೆಗ್ಡೆ ಸೇರಿ ತಯಾರಿಸಿದ್ದು. ಚುನಾಯಿತ ಪ್ರತಿನಿಧಿಗಳಲ್ಲದ ಸಾಮಾನ್ಯ ಜನರಿಂದ ಬಂದಿದ್ದಾದ್ದರಿಂದ ಇದು ಜನ ಲೋಕಪಾಲ್ ಬಿಲ್.

೨. ಜನಲೋಕಪಾಲ್ ಬಿಲ್‌ನಲ್ಲಿ, ಭ್ರಷ್ಟಾಚಾರಕ್ಕೆ ಲಂಚ ತೆಗೆದುಕೊಳ್ಳುವುದು ಎಂಬ ಸೀಮಿತ ಅರ್ಥ ಇಲ್ಲ. ಮಾಡಬೇಕಾದ ಕೆಲಸ ಮಾಡದೇ ಇರುವುದು, ಬೇಕಾದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದು, ಭ್ರಷ್ಟರನ್ನು ರಕ್ಷಿಸುವುದು, ನಿರಪರಾಧಿಗಳಿಗೆ ತೊಂದರೆ ಕೊಡುವುದು, ಹಿರಿಯ ಅಧಿಕಾರಿಗಳನ್ನು ದಿಕ್ಕು ತಪ್ಪಿಸುವುದು, ಸರಕಾರಿ ಕಚೇರಿಗೆ ಬರುವವರ ನಡುವೆ ಭೇದಭಾವ ಮಾಡುವುದು, ಇವೆಲ್ಲವೂ ಭ್ರಷ್ಟಾಚಾರ ಎಂದೇ ಪರಿಗಣಿಸಲ್ಪಡುತ್ತವೆ. ಈಗಿನ ಕಾನೂನಿನಲ್ಲಿ ಇಷ್ಟು ಸ್ಪಷ್ಟವಾಗಿ ಭ್ರಷ್ಟಾಚಾರದ ವ್ಯಾಖ್ಯಾನ ಇಲ್ಲ.

೩. ಯಾವುದೇ ಸರಕಾರಿ ಕಚೇರಿ, ಇಲಾಖೆ, ಉದ್ದಿಮೆಗಳು ತಾವು ಜನರಿಗೆ ನೀಡಬೇಕಾದ ಸೇವೆಗಳ ಬಗ್ಗೆ ಲೋಕಪಾಲಕ್ಕೆ ಕಾಲಕಾಲಕ್ಕೆ ತಿಳಿಸಬೇಕು. ಇವನ್ನು ತಪ್ಪಿ ನಡೆದುದರ ಬಗ್ಗೆ ಅದು ತನಿಖೆ ನಡೆಸಬಹುದು. ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆಯೂ ತನಿಖೆ ನಡೆಸಬಹುದು.

೪. ಭ್ರಷ್ಟಾಚಾರದ ವಿರುದ್ಧ ಕ್ರಮ ತೆಗೆದುಕೊಳ್ಳಲು ಇರುವ ಬೇರೆ ಬೇರೆ ಸಂಸ್ಥೆಗಳು ಒಟ್ಟಿಗೆ ಸೇರಿ ಜನಲೋಕಪಾಲದ ಅಡಿಯಲ್ಲಿ ಬರುತ್ತವೆ. ಈಗಿರುವ ಎಲ್ಲ ಇಂಥ ಸಂಸ್ಥೆಗಳಿಗಿಂತ ಹೆಚ್ಚು ಜನಲೋಕಪಾಲಕ್ಕೆ ಸ್ವಾಯತ್ತತೆ ಕೋರಲಾಗಿದೆ.

೫. ಭ್ರಷ್ಟಾಚಾರಿಗಳ ವಿರುದ್ಧ ದೂರು ಪಡೆದು, ಪ್ರಕರಣ ದಾಖಲಿಸಿ, ತನಿಖೆ ನಡೆಸಿ, ತೀರ್ಪು ನೀಡುವುದು ಲೋಕಪಾಲ್ ಜವಾಬ್ದಾರಿ. ಈ ಅಧಿಕಾರಗಳು ಲೋಕಾಯುಕ್ತರಿಗೆ ಇಲ್ಲ.

೬. ಪ್ರತಿ ವರ್ಷ ಎಲ್ಲ ಸರಕಾರಿ ಅಧಿಕಾರಿಗಳು ಲೋಕಪಾಲಕ್ಕೆ ತಮ್ಮ ಆಸ್ತಿ ಘೋಷಣೆ ಮಾಡಬೇಕು. ಅವರ ಆದಾಯದ ಮೂಲಗಳಿಗಿಂತ ಹೆಚ್ಚು ಎಂದು ಇದು ಕಂಡುಬಂದರೆ ಅವರ ವಿರುದ್ಧ ದೂರು ದಾಖಲಾಗುತ್ತದೆ.

೭. ಎಲ್ಲ ಚುನಾಯಿತ ಪ್ರತಿನಿಧಿಗಳು ಚುನಾವಣಾ ಆಯೋಗಕ್ಕೆ ನೀಡಿದ ಆಸ್ತಿ ವಿವರಗಳಿಗೂ ಆದಾಯ ತೆರಿಗೆ ಇಲಾಖೆಯಲ್ಲಿರುವ ಅವರ ಆದಾಯದ ಮಾಹಿತಿಗೂ ವ್ಯತ್ಯಾಸ ಇದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈಗ ಆಸ್ತಿ ಘೋಷಣೆಯ ವ್ಯವಸ್ಥೆ ಇದೆಯಾದರೂ ಅದರ ಆಧಾರದ ಮೇಲೆ ಅವರ ಮೇಲೆ ಕ್ರಮಕೈಗೊಳ್ಳುವ ಅವಕಾಶ ಇಲ್ಲ.

೮. ಭ್ರಷ್ಟಾಚಾರವನ್ನು ಬಯಲಿಗೆಳೆದವರು ಅರ್ಥಾತ್ ಸೀಟಿ ಹೊಡೆವವರಿರಿಗೆ ಜನಲೋಕಪಾಲದಲ್ಲಿ ರಕ್ಷಣೆ ಸಿಗುತ್ತದೆ. ಈಗ ಇದು ಕೇಂದ್ರ ವಿಚಕ್ಷಣ ಆಯಕ್ತರ ಜವಾಬ್ದಾರಿ.

೯. ಪ್ರಧಾನ ಮಂತ್ರಿ, ಕೇಂದ್ರದ ಮಂತ್ರಿಗಳು, ಸುಪ್ರೀಂ ಕೋರ್ಟಿನ ನ್ಯಾಯಾಧೀಶರು, ಎಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕ ವಲಯದ ಉದ್ದಿಮೆ, ನಿಗಮ, ಮಂಡಳಿ, ಸರಕಾರದ ಸ್ವಾಯತ್ತ ಸಂಸ್ಥೆಗಳು ಹಾಗೂ ಸಹಕಾರಿ ಸಂಸ್ಥೆ, ಸಂಸತ್ತಿನ ಕಾನೂನಿನ ಅಡಿಯಲ್ಲಿ ಜಾರಿಗೆ ಬಂದ ಅಥವಾ ಸರಕಾರವೇ ಹುಟ್ಟು ಹಾಕಿದ ಯಾವುದೇ ಸಮಿತಿಯ ಸದಸ್ಯರು ಕೂಡ ಇದರ ವ್ಯಾಪ್ತಿಯಲ್ಲಿ ಬರುತ್ತಾರೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಖಾಸಗಿ ವ್ಯಕ್ತಿಗಳು ಇದರಿಂದ ತಪ್ಪಿಸಿಕೊಳ್ಳುವಂತಿಲ್ಲ. ಈಗಿರುವ ಕಾನೂನಿನಲ್ಲಿ ಈ ಅವಕಾಶ ಇಲ್ಲ.

೧೦. ಯಾವುದೇ ವ್ಯಕ್ತಿಯ ವಿರುದ್ಧ ತನಿಖೆ ಆರಂಭಿಸಲು ಅವರ ವಿರುದ್ಧ ದೂರು ಇರಲೇಬೇಕು ಎನ್ನುವ ನಿರ್ಬಂಧ ಇಲ್ಲ. ತನಗೆ ದೊರೆತ ಮಾಹಿತಿ ಮೇರೆಗೆ ಲೋಕಪಾಲರು ಯಾರ ವಿರುದ್ಧವಾದರೂ ತನಿಖೆ ಆರಂಭಿಸಬಹುದು. ಇದು ಈಗಿನ ಲೋಕಾಯುಕ್ತ ಕಾನೂನಿನಲ್ಲಿ ಇಲ್ಲ.

೧೧. ರಾಷ್ಟ್ರಾಧ್ಯಕ್ಷರು ಒಬ್ಬ ಲೋಕಪಾಲರನ್ನು ಹಾಗೂ ಹತ್ತು ಜನ ಸದಸ್ಯರನ್ನು ನೇಮಿಸುವ ಮೂಲಕ ಆ ಸಂಸ್ಥೆ ಸ್ಥಾಪಿಸಬೇಕು. ಲೋಕಪಾಲರ ಸ್ಥಾನಮಾನ, ಸಂಬಳ, ಸಾರಿಗೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶರಿಗೆ ಸಮ. ಇತರ ಸದಸ್ಯರ ಸ್ಥಾನಮಾನ, ನ್ಯಾಯಾಧೀಶರಿಗೆ ಸಮ. ಈ ಹತ್ತು ಜನರಲ್ಲಿ ನಾಲ್ವರು ಕಾನೂನು ಹಿನ್ನೆಲೆ ಇರುವವರು, ಇಬ್ಬರು ನಿವೃತ್ತ ಐಎಎಸ್ ಅಥವಾ ಇತರ ನಾಗರಿಕ ಸೇವೆ ಅಧಿಕಾರಿಗಳು ಇರಬೇಕು.

೧೨. ಇವರೆಲ್ಲರ ಅವಧಿ ಐದು ವರ್ಷ. ಯಾವುದೇ ಹುದ್ದೆ ಖಾಲಿಯಾದ ಒಂದು ತಿಂಗಳೊಳಗೆ ಅದನ್ನು ತುಂಬಬೇಕು.

೧೩. ತನ್ನ ಜೀವಮಾನದಲ್ಲಿ ಸಂಸತ್ತಿನ, ವಿಧಾನಸಭೆ, ಪರಿಷತ್ತುಗಳ ಸದಸ್ಯರಾಗಿದ್ದವರಿಗೆ ಇದರ ಸದಸ್ಯನಾಗುವ ಅವಕಾಶ ಇಲ್ಲ. ವ್ಯವಹಾರ ಮಾಡುತ್ತಿದ್ದರೆ ಅದನ್ನು ಬಿಡಬೇಕು, ನೌಕರಿ ಮಾಡುತ್ತಿದ್ದರೆ ರಾಜಿನಾಮೆ ಕೊಡಬೇಕು.

೧೪. ನಲವತ್ತು ವರ್ಷ ಮೀರಿದ, ಭಾರತದ ನಾಗರಿಕರು, ಹಿಂದೆ ಯಾವುದೇ ಕೋರ್ಟಿನಲ್ಲಿ ಶಿಕ್ಷೆ ಅನುಭವಿಸಿದವರಿಗೆ, ಪೊಲೀಸರ ಆರೋಪಪಟ್ಟಿಯಲ್ಲಿ ಹೆಸರು ಪಡೆದವರಿಗೆ, ಅವಕಾಶ ಇಲ್ಲ.

೧೫. ಭಾರತದ ಉಪರಾಷ್ಟ್ರಪತಿಗಳು ಅಧ್ಯಕ್ಷರಾಗಿದ್ದು, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ, ಇತರ ನ್ಯಾಯಾಧೀಶರು, ಮಹಾಲೇಖಪಾಲರು, ಮುಖ್ಯ ಚುನಾವಣಾ ಆಯುಕ್ತರು, ಮಾನವ ಹಕ್ಕು ಆಯೋಗದ ಅಧ್ಯಕ್ಷರು, ನಿವೃತ್ತ ಸೇನಾ ಜನರಲ್‌ಗಳೂ, ಆಯ್ಕೆ ಸಮಿತಿಯಲ್ಲಿ ಇರುತ್ತಾರೆ.

೧೬. ಆಯ್ಕೆ ಪ್ರಕ್ರಿಯೆ ಮುಕ್ತವಾಗಿರುತ್ತದೆ. ಜಾಹೀರಾತು ನೀಡಿ ಜನರಿಂದ ಶಿಫಾರಸು ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆ ಆಹ್ವಾನಿಸಲಾಗುತ್ತದೆ. ಅಭ್ಯರ್ಥಿಗಳ ಬಗ್ಗೆ ಯಾವುದೇ ರೀತಿಯ ಮಾಹಿತಿ ಕಲೆ ಹಾಕಲಾಗುತ್ತದೆ. ಆಯ್ಕೆ ಸಮಿತಿಯ ಸಭೆಗಳನ್ನು ವಿಡಿಯೋ ಚಿತ್ರೀಕರಣ ಮಾಡಿ ಸಾರ್ವಜನಿಕರಿಗೆ ತೋರಿಸಲಾಗುವುದು.

೧೭. ನೇಮಕವಾದ ನಂತರ ಯಾರಾದರೂ ಭ್ರಷ್ಟಾಚಾರ, ಅನೈತಿಕ ವರ್ತನೆ, ಅಪರಾಧ ಎಸಗಿದರೆ, ಅವರನ್ನು ತೆಗೆಯಲಾಗುವುದು. ಲೋಕಪಾಲ ಅಥವಾ ಸದಸ್ಯರ ವಿರುದ್ಧ ಯಾರಾದರೂ ಸುರ್ಪೀಂ ಕೋರ್ಟಿಗೆ ದೂರು ನೀಡಿದರೆ, ಅದು ತನಿಖೆಗೆ ಒಳಪಡುತ್ತದೆ. ಸರಿ ಎಂದು ಕಂಡುಬಂದರೆ ಅವರನ್ನು ಸಮಿತಿಯಿಂದ ತೆಗೆದು ಹಾಕುವಂತೆ ರಾಷ್ಟ್ರಾಧ್ಯಕ್ಷರಿಗೆ ಶಿಫಾರಸು ಮಾಡಲಾಗುವುದು.

೧೮. ಯಾರಾದರೂ ದುರುದ್ದೇಶದಿಂದ, ಸುಳ್ಳು ಅರ್ಜಿ ಸಲ್ಲಿಸಿದ್ದರೆ ಅವರ ವಿರುದ್ಧ ಕ್ರಮ ಕೈಕೊಳ್ಳಲಾಗುವುದು.

೧೯. ಲೋಕಪಾಲ ಹಾಗೂ ಸದಸ್ಯರು ನಿವೃತ್ತಿಯ ನಂತರ ಯಾವುದೇ ಸರಕಾರಿ ಕೆಲಸ ಒಪ್ಪಕೊಳ್ಳುವಂತಿಲ್ಲ. ಚುನಾವಣೆ ನಿಲ್ಲುವಂತಿಲ್ಲ. ಐದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ನಿವೃತ್ತರಾದ ಸದಸ್ಯರು, ಆ ಅವಧಿ ಮುಗಿಯುವವರೆಗೆ ಲೋಕಪಾಲ್ ಆಗಬಹುದು.

೨೦.ಲೋಕಪಾಲ್ ಸಿಬ್ಬಂದಿಯ ಭ್ರಷ್ಟಾಚಾರ ನಿಗ್ರಹಿಸುವುದು ಲೋಕಪಾಲ್ ಜಬಾಬ್ದಾರಿ.

೨೧. ಲೋಕಪಾಲ್ ತನಿಖಾಧಿಕಾರಿಗಳಿಗೆ ಪೊಲೀಸರಿಗೆ ಇರುವ ಎಲ್ಲ ಅಧಿಕಾರಗಳು ಇದ್ದು, ಕೆಲವು ಹೆಚ್ಚಿನ ಅಧಿಕಾರಗಳನ್ನೂ ನೀಡಲಾಗುತ್ತದೆ. ಲೋಕಪಾಲಕ್ಕಾಗಿಯೇ ವಿಶೇಷ ನ್ಯಾಯಾಲಯ ಆರಂಭಿಸಲಾಗುತ್ತದೆ.

೨೨. ಎಲ್ಲ ಪ್ರಕರಣಗಳ ತನಿಖೆ ಒಂದು ವರ್ಷದಲ್ಲಿ ಮುಗಿದು, ನ್ಯಾಯಾಲಯ ಕಲಾಪ ಇನ್ನೊಂದು ವರ್ಷದಲ್ಲಿ ಮುಗಿಯುವಂತೆ ಸಮಯ ನಿಗದಿ ಪಡಿಸಲಾಗಿದೆ.

೨೩. ಎಲ್ಲಾ ಕೇಸುಗಳಿಗೆ ಸಂಬಂಧಪಟ್ಟ ಎಲ್ಲ ಮಾಹಿತಿ ಸಾರ್ವಜನಿಕರಿಗೆ ಲಭ್ಯ. ತನಿಖೆ ನಡೆಯುತ್ತಿರುವಂತೆ ಎಲ್ಲ ದಾಖಲೆಗಳನ್ನು ಲೋಕಪಾಲ್ ವೆಬ್ ಸೈಟಿಗೆ ಹಾಕಲಾಗುವುದು.

೨೪. ಭ್ರಷ್ಟರಿಂದ ಸರಕಾರಕ್ಕೆ ಆದ ನಷ್ಟವನ್ನು ಅವರಿಂದ ವಸೂಲಿ ಮಾಡುವುದು, ಭ್ರಷ್ಟರ ಲೆಕ್ಕ ಮೀರಿದ ಆಸ್ತಿಯನ್ನು ಮುಟ್ಟುಗೋಲು ಹಾಕುವುದು, ಇವು ಲೋಕಪಾಲರ ಕೆಲಸ. ಈಗಿನ ಕಾನೂನುಗಳಲ್ಲಿ ಇವು ಇಲ್ಲ.

೨೫. ಭ್ರಷ್ಟ ಅಧಿಕಾರಿಯ ವಿರುದ್ಧ ತನಿಖೆ ನಡೆಯುವಾಗ ಅವನನ್ನು ಅಮಾನತ್ತು ಮಾಡಲು, ಅಥವಾ ವರ್ಗ ಮಾಡಲು ಲೋಕಪಾಲರು ಸರಕಾರಕ್ಕೆ ಆದೇಶಿಸಬಹುದು. ಇದನ್ನು ಪಾಲಿಸದಿದ್ದರೆ ಅವರು ಸರಕಾರಕ್ಕೆ ಇಂತಹ ಆದೇಶ ನೀಡುವಂತೆ ಹೈಕೋರ್ಟ್ ಮೊರೆ ಹೋಗಬಹುದು. ಅಂತಹ ಅಧಿಕಾರಿಗಳನ್ನು ವಜಾ ಮಾಡಲು ಸಹ ಆದೇಶ ಹೊರಡಿಸಬಹುದು. ತನಿಖೆಯಲ್ಲಿ ಸಿಕ್ಕಿಬಿದ್ದ ಮಂತ್ರಿ ಅಥವಾ ಸಂಸತ್ ಸದಸ್ಯರನ್ನು ವಜಾ ಮಾಡುವಂತೆ ರಾಷ್ಟ್ರಾಧ್ಯಕ್ಷರಿಗೆ ಶಿಫಾರಸು ಮಾಡಬಹುದು.

೨೬. ಲೋಕಪಾಲಕ್ಕಾಗಿಯೇ ಒಂದು ವಿಶೇಷ ತನಿಖಾದಳ ಇರುತ್ತದೆ. ಇದರ ಅಧಿಕಾರಿಗಳ ಸ್ಥಾನಮಾನ, ಅಧಿಕಾರಗಳು ಸಿಬಿಐ ಅಧಿಕಾರಿಗಳಿಗೆ ಸಮ. ಇದಲ್ಲದೇ ಸಿಬಿಐನ ಭ್ರಷ್ಟಾಚಾರ ವಿರೋಧಿ ದಳವನ್ನು ಲೋಕಪಾಲದಲ್ಲಿ ವಿಲೀನಗೊಳಿಸಲಾಗುವುದು.

೨೭. ಲೋಕಪಾಲದ ಯಾವುದೇ ನಿರ್ಣಯವನ್ನು ಯಾವುದೇ ಸಿವಿಲ್ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿಲ್ಲ. ಲೋಕಪಾಲ ಅಥವಾ ಸದಸ್ಯರ ವಿರುದ್ಧ ಅವರ ವೃತ್ತಿ ನಿರ್ಧಾರಗಳಿಗೆ ಸಂಬಂಧಪಟ್ಟಂತೆ ಯಾವುದೇ ನ್ಯಾಯಾಲಯದಲ್ಲಿ ಕೇಸು ಹಾಕುವಂತಿಲ್ಲ.

೨೮. ಚುನಾಯಿತ ಪ್ರತಿನಿಧಿಗಳು ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಅಥವಾ ಯಾವುದಾದರೂ ವಿಷಯಕ್ಕೆ ಬೆಂಬಲ ಅಥವಾ ವಿರೋಧ ಸೂಚಿಸಲು ಲಂಚ ಕೇಳಿದ ದೂರು ಅಥವಾ ಆರೋಪ ಕೇಳಿ ಬಂದಲ್ಲಿ, ಅವರು ಸದಸ್ಯರಾಗಿರುವ ಸಭೆಯ ಸಭಾಪತಿ/ ಅಧ್ಯಕರಿಗೆ ಆ ದೂರನ್ನು ನೀಡಲಾಗುವುದು. ಅವರು ಸದನದ ನೈತಿಕತೆ ಸಮಿತಿಗೆ ಒಂದು ತಿಂಗಳೊಳಗೆ ಅದನ್ನು ವರ್ಗಾಯಿಸಬೇಕು. ಅದನ್ನು ಲೋಕಪಾಲರಿಗೆ ಒಪ್ಪಿಸಬೇಕೋ ಬೇಡವೋ ಎನ್ನುವುದನ್ನು ಅದು ಒಂದು ತಿಂಗಳೊಳಗೆ ತೀರ್ಮಾನಿಸಬೇಕು.

೨೯. ಸಾರ್ವಜನಿಕರು ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಮಾಹಿತಿ ಹಕ್ಕಿನಡಿ ಪಡೆಯಬಹುದು. ತನಿಖೆಗೆ ತೊಂದರೆಯಾಗದಿದ್ದರೆ ತನಿಖೆ ಸಮಯದಲ್ಲಿ ಸಹ ಪಡೆಯಬಹುದು. ಈ ಅವಕಾಶ ಈಗ ಇಲ್ಲ.

೩೦. ಭ್ರಷ್ಟಾಚಾರದ ವಿರುದ್ಧ ದೂರು ನೀಡಿದವರಿಗೆ ಮುಟ್ಟುಗೋಲು ಹಾಕಿದ ಆಸ್ತಿಯ ಶೇಕಡಾ ೧೦ ಭಾಗ ನೀಡಿ, ದೂರು ನೀಡುವವರನ್ನು ಪ್ರೋತ್ಸಾಹಿಸಲಾಗುವುದು. ಲೋಕಪಾಲ್ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಲು ಬೇಕಾದ ಕ್ರಮ ಕೈಗೊಳ್ಳಬಹುದು.

೩೧. ತನಗೆ ಬೇಕಾದ ಕಾಯಿದೆ, ನೀತಿ, ನಿಯಮ ರೂಪಿಸುವುದು ಲೋಕಪಾಲ್ ಹಕ್ಕು.

೩೨. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಇತರ ಎಲ್ಲಾ ಕಾನೂನುಗಳಿಗಿಂತ ಇದು ಹೆಚ್ಚು ಪ್ರಮುಖವಾದ್ದು. ಇತರ ಕಾನೂನುಗಳೊಂದಿಗೆ ಇದರ ನಿಯಮಗಳು ಸಂಘರ್ಷಕ್ಕೆ ಬಿದ್ದರೆ ಇದೇ ಅಂತಿಮ ಸತ್ಯ ಎಂದು ಪರಿಗಣಿಸಲಾಗುವುದು.

ಇದೆಲ್ಲಾ ಸರಿ, ಆದರೆ ಕೇಂದ್ರ ಸರಕಾರ ಇಂತಹ ಆದರ್ಶವಾದ ಕಾನೂನನ್ನು ಒಪ್ಪುತ್ತದೆಯೇ? ನನಗೆ ವಿಶ್ವಾಸ ಇಲ್ಲ. ಲೋಕಪಾಲ್ ಸಮಿತಿಯಲ್ಲಿ ಐದು ಜನ ಕೇಂದ್ರ ಸಚಿವರಿದ್ದಾರೆ ಎಂದರೆ ಐವತ್ತು ಜನ ಐಎಎಸ್ ಅಧಿಕಾರಿಗಳಿದ್ದಾರೆ ಎಂದೇ ಅರ್ಥ. ಅವರು ಇಂತಹ ಸೂಕ್ಷ್ಮ ಕಾನೂನನ್ನು ಜಾರಿಗೊಳಿಸುವುದು ಕಷ್ಟ. ಇದೇ ರೂಪದಲ್ಲೇ ಅದನ್ನು ಸಂಸತ್ತಿಗೆ ಕಳಿಸಿದರೂ ಅಲ್ಲಿನ ನಮ್ಮ ಪುಣ್ಯಾತ್ಮರು ಅದನ್ನು ಅಂಗೀಕಾರ ಮಾಡುವುದು ಸುಲಭವಲ್ಲ. ಮಾಡಿದರೂ ಸಹ ಅದು ಜಾರಿಯಾಗುವಾಗ ಅದರ ಮೊನೆ ಮುರಿಯುವಂತೆ ನಮ್ಮ ಅಧಿಕಾರಶಾಹಿ ಅಲ್ಲಲ್ಲಿ ಕೆಲವು ನೀತಿ ನಿಯಮ ರೂಪಿಸಬಹುದು.

ಇದೂ ಆಗದಿದ್ದರೂ ಆ ಕಾನೂನು ಜಾರಿಯಾಗಿ ಜನಸಾಮಾನ್ಯರು ಭ್ರಷ್ಟಾಚಾರ ಫ್ರೀ ಭಾರತದಲ್ಲಿ ವಾಸಿಸುವುದು ನನಗೆ ದೂರದ ಕನಸಿನಂತೆ ಕಾಣುತ್ತದೆ. ಉದಾಹರಣೆಗೆ ಈಗ ಭಾರತದಲ್ಲಿ ಇರುವ ಅತಿ ಕಠಿಣ ಕಾನೂನುಗಳೆಂದರೆ ಅರಣ್ಯ ಕಾನೂನು, ಭಯೋತ್ಪಾದನಾ ತಡೆ ಕಾನೂನು, ವರದಕ್ಷಿಣೆ ತಡೆ ಕಾಯಿದೆ ಹಾಗೂ ಅಸ್ಪೃಶ್ಯತೆ ತಡೆಯಲು ಇರುವ ಕಾಯಿದೆಗಳು. ಇವೆಲ್ಲ ತಮ್ಮ ಗುರಿ ಮುಟ್ಟಲು ಸಂಪೂರ್ಣ ಯಶಸ್ಸು ಪಡೆದಿವೆಯೇ? ಇದಕ್ಕೆ ಹೂಂ ಅನ್ನುವವರು ಎಷ್ಟು ಜನ ಇದ್ದಾರೋ, ಇಲ್ಲ ಅನ್ನುವವರೂ ಅಷ್ಟೇ ಜನ ಇದ್ದಾರೆ.

ಯಾವ ದೇಶದಲ್ಲಿ ೧೦೦ ಕೊಲೆ ಪ್ರಕರಣಗಳಲ್ಲಿ ಕೇವಲ ಆರು ಜನರಿಗೆ ಶಿಕ್ಷೆ ಆಗುತ್ತದೋ, ಆ ದೇಶದಲ್ಲಿ ಕಾನೂನಿನಿಂದ ಸಮಾಜದ ನಡುವಳಿಕೆ ಬದಲಿಸಬಹುದು ಎನ್ನುವುದು ಆಶಾವಾದಿಗಳ ಮಾತು. ಭ್ರಷ್ಟಾಚಾರವನ್ನು ಸಂಪೂರ್ಣ ತೆಗೆದು ಹಾಕುವುದು ಕೇವಲ ಒಬ್ಬ ಲೋಕಪಾಲನ, ಹತ್ತು ಲೋಕಪಾಲ್ ಸದಸ್ಯರ, ಮೂವತ್ತು ಲೋಕಾಯುಕ್ತರ ಜವಾಬ್ದಾರಿ ಯಾಕಿರಬೇಕು? ಎಲ್ಲಾ ೧೨೧ ಕೋಟಿ ಜನರ ಜವಾಬ್ದಾರಿ ಆಗಿರಬಾರದೇಕೆ?

Tuesday, February 15, 2011

Spoof of BJP government in Karnataka-2

ಬಳ್ಳಾರಿ ಗಣಿಗಾಥಾ: ಶ್ರೀರಾಮುಲು ಸ್ವಪ್ನ ವಿಮಾನಯಾನ
By ಹೃಷಿಕೇಶ್ ಬಹದ್ದೂರ್ ದೇಸಾಯಿ

ಆ ಫೋನು ನನಗೆ ಅಮರ ಚಿತ್ರಕಥಾದ ಆಕಾಶವಾಣಿಯಂತೆ ಕೇಳಿತು. ಆ ಕಡೆಯಿಂದ ಮಾತಾಡಿದವರು ಶ್ರೀರಾಮುಲು ಅವರ ಪಿಎ.

‘ಅಲ್ರೀ ಬಳ್ಳಾರಿಗೆ ಯಾಕೆ ಹೋದಿರಿ? ಸಾಹೇಬರು ಬೆಂಗಳೂರಿನ ಹತ್ತಿರ ಜಕ್ಕೂರು ಏರೋಡ್ರೋಮ್ ಹತ್ತಿರ ಇದ್ದಾರೆ. ಅಲ್ಲೇ ಹೋಗಿ' ಅಂತ ಅಂದರು. ನಾನು ಜಕ್ಕೂರಿಗೆ ಹೋದೆವು. ಆದರೆ ಅಲ್ಲಿ ಅವರು ಎಲ್ಲೂ ಕಾಣಲಿಲ್ಲ. ಸಾಹೇಬರ ಸಹಾಯಕ ಸಾಹೇಬರಿಗೆ ಫೋನು ಮಾಡಿದರೆ ‘ಜೀವನದಲ್ಲಿ ತಲೆ ಎತ್ತಿ ಬದುಕುವುದು ಕಲೀರಿ ಸಾರ್' ಅಂತ ಫಿಲಾಸಫಿ ಮಾತಾಡಿದರು.

ಮೇಲೆ ನೋಡಿದರೆ ಆಕಾಶದಲ್ಲಿ ಒಂದು ಡಿರಿಜಿಬಲ್ ಏರ್ ಷಿಪ್ (dirigible air ship) ಹಾರಾಡುತ್ತಾ ಇದೆ. ‘ಮೇಲೆ ಬನ್ನಿ' ಅಂತ ಸಾಹೇಬರ ಮತ್ತೊಬ್ಬ ಸಹಾಯಕರು ಒಂದು ಹಗ್ಗ ಇಳಿ ಬಿಟ್ಟರು. ಒಬ್ಬೊಬ್ಬರೇ ಮೇಲೆ ಹತ್ತಿ ಹೋದೆವು.

ಒಳಗೆ ನಾನು ಕಂಡರಿಯದ ಇನ್ನೊಂದು ಜಗತ್ತೇ ಇದೆ. ಅಲ್ಲಿ ಎಲ್ಲರೀತಿಯ ಯಂತ್ರಗಳಿವೆ. ನೂರಾರು ಸುಪರ್ ಕಂಪ್ಯೂಟರ್ ಗಳು, ಅವನ್ನು ನಿಯಂತ್ರಿಸಲು ಇನ್ನೊಂದು ಸುಪರ್ ಕಂಪ್ಯೂಟರ್, ಧ್ವನಿ ನಿಯಂತ್ರಿತ ರೊಬೊಟ್ ಗಳು, ನೀರು ಬೇಕಿಲ್ಲದ ಟಾಯ್ಲೆಟ್, ಊಟವಾದ ತಕ್ಷಣ ಹಾಸಿಗೆಯಾಗಿಬಿಡುವ ಡೈನಿಂಗ್ ಟೇಬಲ್, ಎಲ್ಲ.

ಚಿಯರ್ ಫುಲ್ ಮೋದಿ
ಇನ್ನು ಅಲ್ಲಿ ಸಚಿವರ ಆಫೀಸೇ ಅಲ್ಲಿದೆ. ಅಲ್ಲಿಯೇ ಪ್ರಿನ್ಸಿಪಲ್ ಸೆಕ್ರೆಟರಿ, ಅಂಡರ್ ಸೆಕ್ರೆಟರಿ, ಓವರ್ ಸೆಕ್ರೆಟರಿ ಎಲ್ಲರೂ ಇದ್ದಾರೆ. ಹೊಸ ಹಾಲಿವುಡ್ ಸಿನಿಮಾಗಳಲ್ಲಿ ಅಮೇರಿಕ ಅಧ್ಯಕ್ಷರ ವಿಶೇಷ ವಿಮಾನ ಏರ್ ಫೋರ್ಸ್ ಒನ್ ಥರ ಎಲ್ಲ ಸೌಲಭ್ಯ ಇದೆ. ಸೆಕ್ಯೂರಿಟಿಯವರು, ಅಡುಗೆಯವರು, ಕಂಪ್ಯೂಟರ್ ಆಪರೇಟರುಗಳು, ಎಲ್ಲ. ಅಮೇರಿಕೆ ಅಧ್ಯಕ್ಷರಿಗೆ ಇರುವಂಥ ಬ್ಲಾಂಡ್ ಗರ್ಲ್ ಸೆಕ್ರೆಟರಿಗಳು ಕೂಡ ಇದ್ದರು. "ಈ ಲಲಿತೆಯರೆಲ್ಲ ಐಪಿಎಲ್ ನಲ್ಲಿದ್ದ ಚಿಯರ್ ಗರ್ಲ್ಸ್. ನಾನು ಹೋದ ಮೇಲೆ ಇವರನ್ನು ಕೇಳುವವರೇ ಇಲ್ಲವಾಗಿದೆ ಅಂತ ಮೋದಿ ಫೋನ್ ಮಾಡಿದ್ದ. ಪಾಪ ಅಂತ ನಾನು ಇವರನ್ನು ಕೆಲಸಕ್ಕೆ ಸೇರಿಸಿಕೊಂಡೆ. ಎಷ್ಟಾದರೂ ಮೋದಿ ಎನ್ನುವ ಹೆಸರೇ ನಮಗೆ ಪವಿತ್ರ ಅಲ್ಲವೇ" ಅಂದರು.

ಜಕ್ಕೂರಿನಲ್ಲಿಯೂ ಫಿಟ್ ಆದ ಜರ್ಮನಿ
‘ಎರಡನೇ ಮಹಾಯುದ್ಧದಲ್ಲಿ ಜರ್ಮನ್ ಸೈನ್ಯದವರು ಕಂಡುಹಿಡಿದಿದ್ದ ವಿಮಾನ ಇದು' ಅಂದರು ಸಚಿವರು. ಜರ್ಮನಿಯಿಂದ ಜಕ್ಕೂರಿಗೆ ಹೇಗೆ ಬಂತು ಅಂತ ಕೇಳಿದೆವು. ‘ಕಳೆದ ಬಾರಿ ನಮ್ಮ ಮೈನ್ ಲಾರಿ ಜರ್ಮನಿಗೆ ಹೋದಾಗ ನಮ್ಮ ಡ್ರೈವರ್ ಹಾಗೂ ಕ್ಲೀನರ್ ಅವರು ಇದನ್ನು ನೋಡಿ ತುಂಬ ಇಷ್ಟಪಟ್ಟರು. ನನಗೆ ಹೇಳದೇ ಕೇಳದೆ ಇದನ್ನು ಖರೀದಿ ಮಾಡಿದರು. ಕೊನೆಗೆ ಅದನ್ನು ಬಿಚ್ಚಿ ಅದರ ಸ್ಪೇರ್ ಪಾರ್ಟ್ ಗಳನ್ನು ಲಾರಿಯಲ್ಲಿ ಹೇರಿಕೊಂಡು ಬಂದೆವು. ಇಲ್ಲಿ ಬಂದು ಫಿಟ್ ಮಾಡಿದೆವು. ಹೇಗಿದೆ ಸಾರ್ ಎಂದು ಕೇಳಿದರು' ಎಂದರು. ಬಿನ್ನಹಕ್ಕೆ ಬಾಯಿ ಎಲ್ಲಿದೆ ಸ್ವಾಮಿ, ನಾವೇನು ಹೇಳಿಯೇವು? ಜೀವನವೆಲ್ಲಾ ಬಿಎಂಟೀಸಿ ಬಸ್ಸಿನಲ್ಲಿ ಅಡ್ಡಾಡಿದ್ದ ನಾನು ಡಿರಿಜಿಬಲ್ ಏರ್ ಷಿಪ್ ಬಗ್ಗೆ ಏನನ್ನಬಹುದು? ಎಲ್ಲಿಯ ಮಹಾವಿಷ್ಣು, ಎಲ್ಲಿಯ ನಾರದ ಮುನಿ?

ಅನರೀಚೆಬಲ್ ಡಿರಿಜಿಬಲ್
ನಾವು ಇಲ್ಲಿ ಯಾಕೆ ಇರುತ್ತೇವೆ ಎನ್ನುತ್ತೀರಾ? ಕೆಳಗಡೆ ಆ ಬೆಂಗಳೂರಿನಲ್ಲಿ ಬರೀ ಟ್ರಾಫಿಕ್ ಜಾಮ್ ಸಾರ್, ಕಾರ್ ತೊಗೊಂಡು ಹೊಗೋಕೇ ಆಗಲ್ಲ. ಅಲ್ಲೀಗ ದಿನಕ್ಕೆ ೨೦ ರಾಸ್ತಾ ರೋಕೊ, ಸಂಪು, ಹರತಾಲ್ ನಡೆಯುತ್ತೆ. ಅದರಲ್ಲಿ ಅರ್ಧ ನಮ್ಮ ಪಾರ್ಟಿಯವರವೇ ಇರುತ್ತೆ. ಹೀಗಾಗಿ ಯಾರಿಗೂ ಏನೂ ಅನ್ನಕ್ಕೆ ಬರಲ್ಲ. ಅದಕ್ಕೇ ಈ ವ್ಯವಸ್ಥೆ.

ಇನ್ನೊಂದು ಮಾತು ಅಂದರೆ, ಇಲ್ಲಿ ಆ ಕಾಂಗ್ರೆಸ್ ನವರ ಪಾದಯಾತ್ರೆಯ ಭಯವಿಲ್ಲ. ಮತದಾರರ ಗೊಂದಲವಿಲ್ಲ. ದಿನಾ ಬೆಳಿಗ್ಗೆ ಪೇಪರ್ ಓದಿ ಬೇಜಾರಾಗಬೇಕಿಲ್ಲ. ಮುಖ್ಯವಾಗಿ ಸರಕಾರಿ ಆಸ್ಪತ್ರೆಗಳ ಬಗ್ಗೆ ದೂರು ಹೇಳಲು ಯಾರೋ ಫೋನ್ ಮಾಡುತ್ತಾರೆ ಎನ್ನುವ ಟೆನ್ಷನ್ ಇಲ್ಲ. ಬಂದರೂ ನಾನೇ ಹೆಣ್ಣು ಧ್ವನಿ ಮಾಡಿ ‘ದಿಸ್ ಪರಸನ್ ಈಸ್ ಅನರೀಚೆಬಲ್' ಅಂತ ಹೇಳಿಬಿಡುತ್ತೇನೆ ಅಂದರು.

ಸಿಲ್ವರ್ ಲೈನಿಂಗ್
ಬೆಳ್ಳಿಯ ತಾಟಿನಲ್ಲಿ ನಮಗೆಲ್ಲ ತಿಂಡಿ ನೀಡಲಾಯಿತು. ಯಾರಾದರೂ ಕದ್ದು ಬಿಟ್ಟಾರು ಎಂದು ಆ ಪ್ಲೇಟುಗಳ ಮೇಲೆ ‘ಶ್ರೀರಾಮುಲು ಅವರ ವಿಮಾನದಿಂದ ಕದ್ದು ತಂದಿದ್ದು' ಅಂತ ಕೊರೆಸಲಾಗಿತ್ತು. ಇರಲಿ ಅಂತ ಅವೆಲ್ಲಕ್ಕೂ ಬಿಗ್ ಬಜಾರ್ ನಲ್ಲಿ ತಗಲಿಸಿರುವಂತೆ ಒಂದು ಮೈಕ್ರೋಚಿಪ್ ಅಂಟಿಸಲಾಗಿತ್ತು.

ಧರ್ಮಸಂಗಮ ಹಾಗು ತಿಥಿ ಊಟ
"ಅಂದಹಾಗೆ ನಿಮ್ಮ ಕನಸಿನಲ್ಲಿ ಕರುಣಾಕರ ರೆಡ್ಡಿ ಅವರು ಬಂದಿದ್ದರಂತಲ್ಲ. ನೀವೆಷ್ಟು ಪುಣ್ಯವಂತರು? ಬನ್ನಿ, ಬನ್ನಿ" ಅಂತ ನನ್ನನ್ನು ಹತ್ತಿರ ಎಳೆದುಕೊಂಡರು.

"ಆದರೆ ನೀವು ಅದರ ಬಗ್ಗೆ ಬರೆದಿದ್ದು ಅಷ್ಟು ಸರಿ ಇರಲಿಲ್ಲ. ನಿಜ ಹೇಳಬೇಕೆಂದರೆ ಅವರು ರಾಮಾಯಣ ಮಹಾಭಾರತ ಕತೆ ಅಷ್ಟಾಗಿ ಹೇಳುವುದಿಲ್ಲ. ಅವರು ಭಗವದ್ಗೀತೆ, ಬೈಬಲ್ ಹಾಗು ಕುರಾನ್ ಬಗ್ಗೆ ತುಂಬ ಒಳ್ಳೆ ಪ್ರವಚನ ನೀಡುತ್ತಾರೆ. ನೀವು ಅದನ್ನು ಕೇಳಿ ಅದರ ಬಗ್ಗೆ ಬರೆಯಬೇಕು ಅಂತ ಆದೇಶ ಮಾಡಿದರು. ಹಾಗೇನಾದರೂ ಆಗಿ ಅವರು ಕನ್ ಫ್ಯೂಸ್ ಪ್ರವಚನ ಮಾಡಿ, ನಾನು ಅದನ್ನು ವರದಿ ಮಾಡಿದರೆ ಒಂದು ವರ್ಷದ ನಂತರ ಈ ಪತ್ರಕರ್ತನ ಪುಣ್ಯತಿಥಿ ಕಾರ್ಯಕ್ರಮ ಆದೀತು. ಅದರಲ್ಲಿ ಮತ್ತೆ ರೆಡ್ಡಿಗಾರು ಅದೇ ಪ್ರವಚನ ಮಾಡಿಯಾರು, ಅದನ್ನು ಮತ್ತೆ ನನ್ನಂತಹ ಕೆಲವು ದುರದೃಷ್ಟಕರ ಪತ್ರಕರ್ತರು ವರದಿ ಮಾಡಬೇಕಾದೀತು ಎಂದೆನ್ನಿಸಿ ಮೈ ಜುಮ್ಮೆನಿಸಿತು.

ಮೋಡದ ಮೇಲಿನ ಮಳೆ
ಮಾತಾಡುತ್ತ ಮಾತಾಡುತ್ತ ನಮ್ಮ ಮಾತು ಹವಾಮಾನದ ಕಡೆ ಹೊರಳಿತು. ‘ಕರ್ನಾಟಕದಲ್ಲಿ ಮಳೆ ಇದೆಯಾ' ಅಂತ ನಮ್ಮ ಟೀಮಿನವರೊಬ್ಬರು ಕೇಳಿದರು. ನಾವು ಮೋಡಗಳಿಗಿಂತ ಮೇಲೆ ಇರುತ್ತೇವೆ ನೋಡಿ, ನಮಗೆ ಗೊತ್ತಾಗೋದೇ ಇಲ್ಲ ಎಂದರು ನಾಯಕರು. ಅದಕ್ಕಿಂತ ಒಳ್ಳೆಯ ಉತ್ತರ ಇರಬಹುದು ಅಂತ ನನಗೆ ಅನ್ನಿಸಲಿಲ್ಲ.

ಪರಬೊಮ್ಮ ನಕ್ಕಾಗ
ಇನ್ನು ನಮ್ಮ ಸಿಎನ್ ಎನ್ ದಂಡನಾಯಕಿ ಒಂದು ಗಂಭೀರವಾದ ಪ್ರಶ್ನೆ ಕೇಳುತ್ತೇನೆ. ನಿಮಗೆ ಸರಿ ಎನ್ನಿಸಿದರೆ ಉತ್ತರ ಕೊಡಬಹುದು ಎಂದರು. ಸಚಿವರ ಪರಿಚಾರಿಕರೆಲ್ಲ ಗಂಭೀರವಾಗಿ ಕೂತರು. ಪೆನ್ನು ಪ್ಯಾಡು ಸರಿಮಾಡಿಕೊಂಡರು.

ಅಲ್ಲ ನೀವು ಈ ಬಲಪಂಥೀಯ ಪಕ್ಷದಲ್ಲಿ ಇದ್ದೀರಲ್ಲಾ, ನಿಮಗೆ ಈ ಸಿದ್ಧಾಂತಕ್ಕೆ ಅಂಟಿಕೊಂಡಿರುವುದು ಸರಿ ಎನ್ನಿಸುತ್ತದಾ ಅಂತ ಆಯಮ್ಮ ಕೇಳುವುದಕ್ಕೂ ಸಚಿವರು ಜೋರಾಗಿ ನಕ್ಕರು. ಐದು ನಿಮಷ ನಗುತ್ತಲೇ ಇದ್ದರು. ಅವರ ನಗು ಎಷ್ಟು ಜೋರಾಗಿತ್ತು ಎಂದರೆ ನೆಲದ ಮೇಲಿನ ಹುಲು ಮಾನವರಿಗೂ ಕೇಳಿರಬಹುದು. ಚಾಮರಾಜಪೇಟೆಯ ಹಳೇ ಮನೆಗಳಲ್ಲಿರುವ ಮುದುಕರಿಗೆ ಸಾಕ್ಷಾತ್ ಪರಬ್ರಹ್ಮನೇ ನಕ್ಕ ಅಂತ ಅನ್ನಿಸಿರಬಹುದು. ಬನಶಂಕರಿಯ ಗಲ್ಲಿಗಳಲ್ಲಿ ಮೂರು ಇಟ್ಟಿಗೆ ಇಟ್ಟು ಕ್ರಿಕೆಟ್ ಆಡುತ್ತಿರುವ ಪಡ್ಡೆ ಹೈಕಳುಗಳು ಗುಡುಗು ಸಿಡಿಲು ಜೋರಾಗಿದೆ. ಇನ್ನೇನು ಮಳೆ ಆರಂಭವಾಗಬಹುದು ಎನ್ನಿಸಿ ಒಳಗೆ ಓಡಿಹೋಗಿರಬಹುದು.

ಕೊನೆಗೆ ನಕ್ಕೂ ನಕ್ಕೂ ಅವರ ಕಣ್ಣಲ್ಲಿ ನೀರು ಬಂತು. ನೀರು ಕುಡಿದು ಮಾತು ಆರಂಭಿಸಿದರು. ಅಲ್ಲ ಮೇಡಂ, ಇದನ್ನು ನೀವು ಗಂಭೀರ ಪ್ರಶ್ನೆ ಎನ್ನುತ್ತೀರಾ. ಇದು ಪ್ರಶ್ನೆನೇ ಅಲ್ಲ. ಇನ್ನು ಗಾಂಭೀರ‍್ಯ ಎಲ್ಲಿಂದ ಬಂತು ಅಂತ ಅಂದರು. ಅವಳಿಗೆ ತಿಳಿಯಲಿಲ್ಲ. ನನ್ನ ಮುಖ ನೋಡಿದಳು. ನನಗೇ ತಿಳಿದಿಲ್ಲವಾದ್ದರಿಂದ ನಾನು ಅವಳಿಗೆ ಏನು ಹೇಳಲಿ? ಹೀಗಾಗಿ ನಾನು ನಾಯಕರ ಮುಖ ನೋಡಿದೆ.


ಅಮೃತಕ್ಕೇರುವ ಬಡವ
ನೋಡಿ ನೀವು ನಾವು ಬಲಪಂಥೀಯರು ಎನ್ನುತ್ತೀರಿ. ಇದರಲ್ಲಿ ಏನು ತಪ್ಪು? ನಮ್ಮ ಜನ ಏನು ಕೇಳುತ್ತಾರೆ? ಊಟ, ನೀರು, ವಾಸದ ಮನೆ, ಕ್ಲೀನ್ ಚರಂಡಿ, ಕರೆಂಟು ಇತ್ಯಾದಿ. ಇವೆಲ್ಲ ಲೌಕಿಕ ವಿಷಯಗಳು. ಇವೆಲ್ಲಾ ಯಾರಿಗೆ ಬೇಕು ಹೇಳಿ? ದಾಸರು ಹೇಳಿಲ್ಲವೇ, ಇಲ್ಲಿರುವುದು ಸುಮ್ಮನೇ, ಅಲ್ಲಿರುವುದು ನಮ್ಮನೆ ಅಂತ, ಹೀಗಾಗಿ ನಾವೆಲ್ಲ ಜನರಿಗೆ ಈ ಲೌಕಿಕ ಬದುಕಿನ ಸಂಕಷ್ಟಗಳಿಂದ ಪಾರಾಗುವ ಒಂದು ಉತ್ತಮ ದಾರಿ ಸೂಚಿಸುತ್ತೇವೆ. ಅದೇನೆಂದರೆ, ಅಯೋಧ್ಯೆಯಿಂದ ಹಿಡಿದು ರಾಮ ಸೇತುವರೆಗೂ ರಸ್ತೆ ಬದಿಯಲ್ಲೆಲ್ಲ ಒಂದೊಂದು ದೇವಸ್ಥಾನ ಕಟ್ಟಿಸುವುದು. ಇದು ಅವರ ಮೋಕ್ಷದ ಮಾರ್ಗ ಅಲ್ಲವೇ? ಅವರಿಗೆ ಇನ್ನೂ ಹತ್ತಿರದ ಮಾರ್ಗ ಬೇಕು ಎಂದಾದರೆ ಸರಕಾರಿ ಆಸ್ಪತ್ರೆ ಕಟ್ಟಿಸುವುದು. ಇದೂ ಬೇಡವೆಂದರೆ ಮಲ್ಟಿ ಫ್ಲೋರೀಡ್ ಸ್ಮಶಾನ ಕಟ್ಟಿಸುವುದು. ಇದು ಮೇಡಂ ನಿಜವಾದ ಬಲ ಪಂಥ. ನಿಮಗೆ ಗೊತ್ತಿಲ್ಲ, ಅಂದರು. ಮತ್ತೆ ನಕ್ಕರು. ನನಗೆ ಗೊತ್ತಿರಲಾರದ್ದು ಬಹಳ ಇದೆ ಎಂದು ಅವಳಿಗೆ ಅರ್ಥವಾಗುತ್ತಿದ್ದಂತೆಯೇ ಅವಳೂ ನಕ್ಕಳು.

ಸ್ಪೆಷಲ್ ಪೊಲಿಟಿಕಲ್ ಝೋನ್
ನಮ್ಮ ವೃತ್ತಿ ಆಂಧ್ರದಲ್ಲಾದರೆ ನಮ್ಮ ಪ್ರವೃತ್ತಿ ಕರ್ನಾಟಕದಲ್ಲಿ. ಇಲ್ಲಿ ನಾವು ಬಲಪಂಥೀಯರು ಇರಬಹುದು. ಆದರೆ ಅಲ್ಲಿ? ಅಲ್ಲಿ ನಾವು ಯಾರು, ಏನು ಎನ್ನುವುದನ್ನು ಚಂದ್ರಬಾಬು ನಾಯ್ಡು ಅವರನ್ನು ಕೇಳಿ. ಅಲ್ಲರೀ ನಾವು ನಿಜವಾದ ಬಲಪಂಥೀಯರಾಗಿದ್ದರೆ ನಮ್ಮ ಗಣಿ ಮಣ್ಣನ್ನು ನಾವು ಪಾಕಿಸ್ತಾನಕ್ಕೆ ಕಳಿಸುತ್ತಿದ್ದೆವಾ? ಹೋಗಲಿ ನಾವು ಈ ಸಿದ್ಧಾಂತದವರು ಅಂತ ಅಲ್ಲಿನವರಿಗೆ ಖಾತ್ರಿಯಾಗಿದ್ದರೆ ಅವರು ಅದನ್ನು ಖರೀದಿ ಮಾಡುತ್ತಿದ್ದರಾ? ಅಲ್ಲರೀ ನಮ್ಮ ವಾಜಪೇಯಿ ಲಾಹೋರಿಗೆ ಬರೀ ಬಸ್ ಬಿಟ್ಟರು. ನಾವು ಮನಸು ಮಾಡಿದರೆ ಬಳ್ಳಾರಿಯಿಂದ ಡೈರೆಕ್ಟ್ ಒಂದು ಗೂಡ್ಸ್ ರೈಲೇ ಬಿಟ್ಟು ಬಿಡುತ್ತೇವೆ.

ಪಂಟರುಗಳ ಪಂಥ
ನಿಜ ಹೇಳಬೇಕೆಂದರೆ, ನಮಗೆ ಬಲ, ಎಡ ಅಂತೇನೂ ಇಲ್ಲ. ಇದೆಲ್ಲ ಒಂದು ಪಂಥ ಅಷ್ಟೇ. ನಮ್ಮ ಜೀವನವೇ ಒಂದು ಪಂಥ. ನೀವೂ ಒಂದು ಫೈನಾನ್ಸ್ ಕಂಪನಿ ನಡೆಸಿ ನೋಡೋಣ ಅಂತ ನಮ್ಮ ಚೇರ್ಮನ್ ಜನಾರ್ಧನ ರೆಡ್ಡಿ ಅವರಿಗೆ ಯಾರೋ ಪಂಥ ಒಡ್ಡಿದರು. ಅವರು ಎನ್ನೋಬಲ್ ಇಂಡಿಯಾ ಶುರು ಮಾಡಿದರು. ನೀವೂ ಗಣಿ ಲೈಸನ್ಸ್ ತೊಗೊಳ್ಳಿ ನೋಡೋಣ ಅಂತ ಯಾರೋ ನಮಗೆ ಪಂಥ ಹಾಕಿದರು, ನಾವು ತೊಗೊಂಡ್ವಿ. ನಮ್ ಥರಾ ರಾಜಕೀಯ ಮಾಡಿ ನೋಡೋಣ ಅಂತ ದಿವಾಕರ್ ಬಾಬು ಪಂಥ ಹಾಕಿದರು, ನಾವು ಅವರಿಗಿಂತ ಚೆನ್ನಾಗಿ ಮಾಡಿ ತೋರಿಸಿದೆವು.

ಇನ್ನು ಇಷ್ಟು ದಿನ ಬರೀ ಬಲಗಡೆ ರಾಜಕೀಯ ಮಾಡಿದಿರಿ, ಈ ಕಡೆ ಬನ್ನಿ ನೋಡೋಣ ಅಂತ ಯಾರಾದರೂ ಪಂಥ ಹಾಕಿದರೆ ನಾವು ಆ ಕಡೆ ಹೋಗ್ತೇವೆ. ಎಡಗೈಗೂ ಬಲಗೈಗೂ ಎಷ್ಟು ದೂರ ಹೇಳಿ, ಕೊನೆಗೂ ಡಿಸೈಡ್ ಮಾಡೋದು ತಲೇನೇ ತಾನೆ?

ನಮಗೆ ಸಿದ್ಧಾಂತವೇ ಇಲ್ಲ. ನಮಗಿರುವುದೆಲ್ಲ ಒಂದೇ ಸಿದ್ಧಾಂತ. ಜನರಿಗೆ ಒಳ್ಳೆಯದಾಗಬೇಕೂಂತ. ಆ ಜನ ನಮ್ಮವರಾಗಿದ್ದಷ್ಟೂ ಒಳ್ಳೆಯದು. ಇದೆಲ್ಲ ಸಾಧ್ಯವಾಗಲು ಮೊದಲು ನಾವು ಆರಾಮ ಇರಬೇಡವೇ? ಹಾಹಾಹಾ ಅಂತ ಇಂಟರನೆಟ್ ಸ್ಮೈಲಿಯ ಥರ ನಕ್ಕರು.

ನಮ್ಮಾಕೆಗೆ ಇದು ಪೂರ್ತಿ ಕನ್ವಿನ್ಸ್ ಆಗಲಿಲ್ಲ. ಅವಳು ಸ್ವಲ್ಪ ಬಿಡಿಸಿ ಹೇಳಿ ಅಂತ ಅಂದಳು. ಅವರು ಹೇಳಲು ರೆಡಿಯಾದರು. ನಾನು ಓಡಲು ರೆಡಿಯಾದೆ.

ಸಿದ್ಧಾಂತ ಸಂಗಮ ಅಥವಾ ಸಂಪೂರ್ಣ ಸಂಪಾದನೆ
ಹೇಗೂ ಶ್ರಾವಣ ಮಾಸದಲ್ಲಿ ಬಂದಿದ್ದೀರಿ. ನಿಮಗೊಂದು ಸಣ್ಣ ಪ್ರವಚನ ಕೇಳಿಸುತ್ತೇನೆ ಅಂದರು. ಶಾಲು ಸರಿಮಾಡಿಕೊಂಡು ಕುರ್ಚಿಯಲ್ಲಿ ಸರಿಯಾಗಿ ಕುಳಿತುಕೊಂಡರು. ರೆಡ್ಡಿ ಅವರ ರಾಂಭಾರತ ಕೇಳಿದ್ದ ನಾನು ಇದನ್ನೆಲ್ಲಿ ಕೇಳಲಿ ಅಂತ ಹೆದರಿ ಓಡಿ ಹೋಗಲು ಜಾಗ ಹುಡುಕಿದೆ. ಆದರೆ ಅಲ್ಲೆಲ್ಲಿದೆ ಜಾಗ? ಮೋಡಗಳ ಮೇಲೇನು ಫುಟ್ ಪಾತ್ ಇದೆಯಾ? ಸುಮ್ಮನೆ ಮೂಲೆಯಲ್ಲಿ ಕೂತೆ.

ರಂಗ ಪಂಚಮಿ
ನೋಡಿ ಮೇಡಂ. ನಾವು ಕರ್ನಾಟಕದಲ್ಲಿದ್ದೇವೆ, ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ, ಈ ಪಕ್ಷದಲ್ಲಿ ಇದ್ದೇವೆ. ನಾವು ಕೇರಳ, ಪಶ್ಚಿಮ ಬಂಗಾಳ ಅಥವಾ ಮಣಿಪುರದಲ್ಲಿ ಇದ್ದಿದ್ದರೆ ಅಧಿಕಾರ ಎಲ್ಲಿ ಇದೆಯೋ ಅಲ್ಲಿ ಇರುತ್ತಿದ್ದೆವು. ಸಿಂಪಲ್. ನಮ್ಮ ಕೇಸರಿ ಪೈಜಾಮ್ ಜುಬ್ಬಾಗಳನ್ನು ಒಂದು ಸಾರಿ ಹೋಳಿ ಹುಣ್ಣಿಮೆಗೆ ಹಾಕಿಕೊಂಡರೆ ಅವು ಕೆಂಪಾಗುತ್ತವೆ. ಇಲ್ಲಾ ವಿಂಡ್ ಚೀಟರ್ ಗಳ ಥರ ಡಬಲ್ ಕಲರ್ ಇರುವ ಜಾಕೆಟ್ ಹೊಲಿಸುವುದು. ಸಮಯಕ್ಕೆ ತಕ್ಕಂತೆ ಹಾಕಿಕೊಳ್ಳುವುದು. ಆ ಹೊತ್ತಿಗೆ ಯಾವ ಬಣ್ಣದ ಜಾಕೇಟು ಹಾಕಿಕೊಳ್ಳುತ್ತೇವೊ ಅದಕ್ಕೆ ಸಂಬಂಧ ಪಟ್ಟ ಭಾಷಣ ಮಾಡುವುದು. ಅದೇನು ಕಷ್ಟವೇ?

ಕಾರ್ಮಿಕ ಕಲ್ಯಾಣ
ಕಾರ್ಮಿಕರಿಗೆ ಕೆಲಸ ಕೊಡಬೇಕು ಅಂತ ಯಾರಾದರೂ ಗಲಾಟೆ ಮಾಡಿದರೆ, ನಮ್ಮ ಜೆಸಿಬಿಗಳನ್ನೆಲ್ಲ ತೆಗೆದು ಕೂಲಿಯವರಿಂದ ಭೂಮಿ ಅಗೆಸುತ್ತಿದ್ದೆವು. ಅಷ್ಟೇ. ನಾವು ಈಗಾಗಲೇ ವರ್ಷಕ್ಕೆ ಸಾವಿರಾರು ಉಚಿತ ಮದುವೆ ಮಾಡಿಸುತ್ತೇವೆ. ಅಲ್ಲಿ ಕಾರ್ಮಿಕರ ಮದುವೆ ಮಾಡಿಸುತ್ತಿದ್ದೆವು. ಅದೇ ಕಾರ್ಮಿಕರ ಕಲ್ಯಾಣ ಅಲ್ಲವೇ, ಅಂದರು. ನನಗೂ ಹೌದಲ್ಲವೇ ಎನ್ನಿಸತೊಡಗಿತ್ತು.

ಸಿದ್ಧಾಂತಕ್ಕೂ ಪೇಟೆಂಟೇ
ಕಾರ್ಮಿಕರು ದೊರೆಗಳಾಗುವುದು ಕೆಲ ಎಡಪಂಥೀಯ ಚಿಂತಕರ ಕನಸು. ಅದೇನು ಬರೀ ಕನಸೇ? ಸ್ವಾಮಿ, ನಾವೇನು ಟಾಟಾ ಬಿರ್ಲಾಗಳ ಮಕ್ಕಳಾ, ಹತ್ತು ವರ್ಷಗಳ ಹಿಂದೆ ನಾವು ಸೈಕಲ್ ಮೇಲೆ ಓಡಾಡುತ್ತಿದ್ದೆವು. ಬೇರೆಯವರ ಕೈಯಲ್ಲಿ ಕೆಲಸ ಮಾಡುತ್ತಿದ್ದೆವು. ಈಗ ನಾವೇ ಬೇರೆಯವರಿಗೆ ಕೆಲಸ ಕೊಡುವಂತೆ ಆಗಿಲ್ಲವೇ? ಇದು ಕಾರ್ಮಿಕರ ಸಬಲೀಕರಣ ಅಲ್ಲವೇ? ಇದಕ್ಕಾಗಿ ರಾಜ್ಯದ ಎಲ್ಲ ಕಾರ್ಮಿಕರಿಗೆ ಗಣಿ ಪರವಾನಗಿ ನೀಡಿಬಿಟ್ಟರೆ ಆಯಿತು. ಅಲ್ಲಿ ಇಲ್ಲಿ ಸ್ವಲ್ಪ ಕಾಡು ಕಡಿಮೆ ಆದರೆ ಏನಾಗುವುದಿದೆ? ನಾಡು ಮುಖ್ಯವೇ ಹೊರತು ಕಾಡಲ್ಲ. ಕಾರ್ಮಿಕರು ಮುಖ್ಯವೇ ಹೊರತು ಕಂಪನಿಯಲ್ಲ. ಆಡಳಿತ ಮುಖ್ಯವೇ ಹೊರತು ಚುನಾವಣೆಯಲ್ಲ. ಪಕ್ಷ ಮುಖ್ಯವೇ ಹೊರತು ಸರಕಾರವಲ್ಲ. ಕಾರ್ಮೇಡ್ ಗಳು ಮುಖ್ಯ ಹೊರತು ಮತದಾರರಲ್ಲ. ಪಕ್ಷದ ಕಚೇರಿ ಮುಖ್ಯ ಹೊರತು ವಿಧಾನಸೌಧವಲ್ಲ. ಇದೆಲ್ಲ ನಮಗೂ ಗೊತ್ತಿದೆ. ಈ ಜ್ಞಾನವೇನು ಬರೀ ಕಾರ್ಮೇಡ್ ಗಳ ಸ್ವತ್ತಾ?

ಕಾರ್ಲ್ ಎಷ್ಟು ಮಾರ್ಕ್ಸ್ ತೊಗೊಂಡಿದ್ದ?
ನೋಡಿ, ಕಾರ್ಲ್ ಮಾರ್ಕ್ಸ್ ಏನು ಹೇಳಿದ್ದಾರೆ, ‘ವರ್ಕರ‍್ಸ್ ಆಫ್ ದಿ ವರ್ಲ್ಡ್ ಯುನೈಟ್' ಅಂತ. ನಾವು ಅದನ್ನು ಸ್ವಲ್ಪ ಬದಲಾಯಿಸಿ ‘ಪಾರ್ಟಿ ವರ್ಕರ‍್ಸ್ ಆಫ್ ದಿ ವರ್ಲ್ಡ್ ಯುನೈಟ್' ಅಂತ ಮಾಡಿದ್ದೇವೆ. ಕೇವಲ ಒಂದು ಶಬ್ದ ಕಮ್ಮಿ. ನಮಗೆ ಎಷ್ಟು ಮಾರ್ಕ್ಸ್ ಬಂದಂತಾಯಿತು? ನಮಗಿಂತ ಕಮ್ಮಿ ಮಾರ್ಕ್ಸ್ ತೊಗೊಂಡವರೆಷ್ಟು ಜನ ಮಾರ್ಕ್ಸ್ ಅವರ ಪಕ್ಷದಲ್ಲಿ ಇದ್ದಾರೆ ಅಂತ ತೋರಿಸಲಾ ನಾನು?

ಬದಲಾವಣೆಯೇ ಬಳ್ಳಾರಿಯ ನಿಯಮ
ಮಾರ್ಕ್ಸ್ ಅವರು ಇನ್ನೂ ಒಂದು ಮಾತು ಏನು ಹೇಳಿದ್ದಾರೆ? ‘ತತ್ವಜ್ಞಾನಿಗಳೆಲ್ಲ ಈ ಜಗತ್ತು ನಡೆಯುವುದು ಹೇಗೆ ಎಂದು ವಿವರಿಸಿ ಹೇಳಿದ್ದಾರೆ. ಆದರೆ ನಮಗೆ ಈಗ ಬೇಕಾಗಿರುವುದು ಅದನ್ನು ಬದಲಾಯಿಸುವುದು ಹೇಗೆ ಎನ್ನುವ ಬಗೆ'. ನಾವು ಅವರು ಹೇಳಿದ್ದನ್ನು ನಾವು ಚಾಚೂತಪ್ಪದೇ ಪಾಲಿಸುತ್ತಿದ್ದೇವೆ.

ನಮ್ಮನ್ನು ನೋಡಿ, ನಾವು ಎಲ್ಲವನ್ನೂ ಬದಲಾಯಿಸುತ್ತಿಲ್ಲವಾ? ಎಲೆಕ್ಷನ್ ವ್ಯವಸ್ಥೆ, ಆಡಳಿತ ವ್ಯವಸ್ಥೆ, ಪಕ್ಷ ನಡೆಸುವ ವ್ಯವಸ್ಥೆ, ಪ್ರಜೆ-ಪ್ರಭು ಸಂಬಂಧ, ಸಮ್ಮೇಳನ ನಡೆಸುವುದು, ಇವೆಲ್ಲವನ್ನೂ ನಾವು ಬೇರೆ ಯಾರೂ ಕಲ್ಪನೆ ಮಾಡಲಾರದಷ್ಟು ಬದಲಾಯಿಸಿದ್ದೇವೆ. ಈ ದೃಷ್ಟಿಯಿಂದ ನಾವು ಈಗಲೇ ಮಾರ್ಕ್ಸಿಸ್ಟುಗಳು. ನಾವು ಪಕ್ಷ ಬದಲಿಸುವುದೇ ಬೇಕಾಗಿಲ್ಲ. ಇದನ್ನು ಯಾರು ಹೇಳುತ್ತಾರೆ? ಪೇಪರ್ ನವರು, ಟೀವಿಯವರು, ಬರೀ ಗಣಿ, ಮಣ್ಣು ಧೂಳು ಅಂತ ಏನೇನೋ ಬರೆಯುತ್ತಾರೆ. ಇದನ್ನೆಲ್ಲಾ ಯಾಕೆ ಬರೆಯೋದಿಲ್ಲ? ಅಂತ ಒಮ್ಮಿಂದೊಮ್ಮೆಲೇ ಮ್ಲಾನವದನರಾಗಿ ಚಿಂತಾಕ್ರಾಂತರಾದರು.

ಒಂದು ಭಾಷೆ, ಎರಡು ಭಾವ
ಇನ್ನು ಬಲ ಎಡ, ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಿ ಅಂತ ನಮ್ಮ ತಾಯಿ ಸಾಹೇಬರು ಅಪ್ಪಣೆ ಕೊಡಿಸಿದರೆ, ನಾವು ಅದಕ್ಕೂ ರೆಡಿ. ಒಂದು ಸಾರಿ ಜರ್ಮನ್ ಕಲಿತುಬಿಟ್ಟರೆ ಸಾಕು, ಬಲ ಎಡ ಎರಡೂ ಸರಿಯಾಗಿ ಅರ್ಥವಾಗುತ್ತವೆ. ಕಾರ್ಲ್ ಮಾರ್ಕ್ಸ್‌ನ ದಾಸ್ ಕಾಪಿಟಲ್, ಹಿಟ್ಲರ್ ನ ಮೈನ್ ಕೆಂಫ್ ಎರಡೂ ಅದೇ ಭಾಷೆಯಲ್ಲಿ ಇಲ್ಲವೇ?

ಇಂದು ರಾತ್ರಿ ಯಾವ ಶೋ?
ಯಾವುದೇ ಸಿದ್ಧಾಂತವನ್ನು ನಾವು ಒಪ್ಪದೇ ಇದ್ದರೂ ಎರಡನ್ನೂ ಒಪ್ಪಿದಂತೆ ನಟಿಸುವುದು. ಅದೇನು ತಪ್ಪೇ? ನಮ್ಮ ರಾಜ್ಯದ ಹೆಸರೇ ಕರ್ ನಾಟಕ್ ಅಲ್ಲವೇ?

ಗಡ್ಡ ಬಿಟ್ಟವನಿಗೆ ಮಿಠಾಯಿ
ಯಾರಾದರೂ ಕಾಮ್ರೇಡ್ ಶಾಂತಿನಿಕೇತನದಲ್ಲಿ ಓದಿ ರವೀಂದ್ರನಾಥ ಟಾಗೋರ್ ಥರ ಗಡ್ಡ ಬಿಟ್ಟುಕೊಂಡು ನಮಗೆ ಬುದ್ಧಿ ಹೇಳಲು ಬಂದರು ಎಂದುಕೊಳ್ಳಿ. ಅವರನ್ನು ಚಾಮರಾಜಪೇಟೆ ಮೈದಾನದ ಬೌದ್ಧಿಕಕ್ಕೆ ಕರೆದುಕೊಂಡು ಹೋಗುವುದು. ಅಲ್ಲಿ ಎಲ್ಲರ ಭಾಷಣದ ನಂತರ ಅವರ ಭಾಷಣನ ಇಟ್ಟುಕೊಳ್ಳಬೇಕು. ಅದಾದ ನಂತರ ನಾವಾದರೂ ಬದಲಾಗಬೇಕು, ಅವರಾದರೂ ಬದಲಾಗಬೇಕು. ಸಣ್ಣ ವಿಷಯ.

ಅಣು -ರೇಣು ತೃಣ ಏನು ಕಷ್ಟ?
ಅಮೇರಿಕದ ಜತೆಗಿನ ಅಣು ಒಪ್ಪಂದ ವಿರೋಧ ಮಾಡಬೇಕೆ? ಮಾಡೋಣ. ಅದರಿಂದ ನಮ್ಮ ಮೈನ್ಸ್ ಬಿಸಿನೆಸ್ ಗೆ ಯಾವ ಸಂಬಂಧ ಇಲ್ಲವಷ್ಟೇ. ಹಾಗಾದರೆ ನಮಗೇನು ಸಂಬಂಧ? ಇನ್ನು ಕಬ್ಬಿಣದ ಅದಿರು ಹುಡುಕುತ್ತ ಹೋದಾಗ ಯುರೇನಿಯಂ ಸಿಕ್ಕಿತು ಅಂದುಕೊಳ್ಳಿ. ಆಗ ಅಣು ಒಪ್ಪಂದವನ್ನು ಒಪ್ಪಬೇಕು ಅಂತ ನಮ್ಮ ನಾಯಕರು ನಿರ್ಧಾರ ಮಾಡಿದರು ಎಂದುಕೊಳ್ಳಿ. ಅದನ್ನೂ ಮಾಡೋಣ. ನ್ಯೂಕ್ಲಿಯರ್ ಸಪ್ಲೆಯರ್ ಲಿಸ್ಟ್ ನಲ್ಲಿ ಬಳ್ಳಾರಿಯ ನಮ್ಮಂಥ ಸಣ್ಣ ಕೈಗಾರಿಕೋದ್ಯಮಿಗಳನ್ನು ಸೇರಿಸಬೇಕು ಅಂತ ಅದರಲ್ಲಿ ಕಂಡಿಷನ್ ಹಾಕಿದರಾಯಿತು. ಇಷ್ಟಾಗಿಯೂ ಅಣು-ಗಣಿ ಒಂದೇ ಅಕ್ಷರ ವ್ಯತ್ಯಾಸ ಸ್ವಾಮಿ.

ಕಿಮ್ ಜಾಂಗ್ ಇಲ್, ಇಲ್ ಯಾಕ್ ಇಲ್?
ಇನ್ನು ಖಾಸಗಿ ಆಸ್ತಿ, ಉದ್ದಿಮೆ, ಕಾರ್ಖಾನೆಗಳನ್ನೆಲ್ಲ ರಾಷ್ಟ್ರೀಕರಿಸಬೇಕು ಅಂತ ಯಾರಾದರೂ ಪುಕಾರು ತೆಗೆದರು ಅಂದುಕೊಳ್ಳಿ. ಮಾಡಿದರಾಯಿತು. ಆದರೆ ಸದಾ ಸರಕಾರದಲ್ಲಿ ನಾವೇ ಇರುವಂತೆ ನೋಡಿಕೊಂಡರಾಯಿತು. ಈಗ ಉತ್ತರ ಕೋರಿಯಾದ ಕಿಮ್ ಜಾಂಗ್ ಇಲ್ ಇಲ್ಲವೇ? ರಾಷ್ಟ್ರವೇ ಅವರದಿದ್ದಾಗ, ರಾಷ್ಟ್ರೀಕರಣದಿಂದೇನು ಭಯ?

ಡರೋಜಿ ಕರಡಿ ‘ಪರಂ'ಧಾಮ
ಇನ್ನು ಗೋಹತ್ಯೆ ನಿಷೇಧ ಕಾಯಿದೆ. ಜಾರಿಗೆ ಬರಬಹುದು. ಬರಲಿ. ಹಾಗೇನಾದರೂ ಆದರೆ, ನಾವು ಹುಲಿ, ಸಿಂಹ, ಕರಡಿ ತಿನ್ನಬಹುದು. ನಾವೆಲ್ಲ ಕಾಡನ್ನು ಅರ್ಥಪೂರ್ಣವಾಗಿ ಬಳಸಿಕೊಂಡಮೇಲೆ ಅಲ್ಲಿ ಉಳಿದಿದ್ದೇನು? ಕಾಡು ಪ್ರಾಣಿಗಳೆಲ್ಲ ಸಾಕು ಪ್ರಾಣಿಗಳಾಗುವುದಿಲ್ಲವೇ? ಅರಣ್ಯವೇ ಇಲ್ಲದಿದ್ದಾಗ ಅವನ್ನೆಲ್ಲ ಕೊಟ್ಟಿಗೆಗೆ ಕಟ್ಟುವುದೇ ತಾನೆ? ಕಾಡಿನಲ್ಲಿರುವ ಹುಲಿ ಕೊಲ್ಲಬಾರದು ಅಂತ ನಿಯಮ ಇದೆ. ಕೊಟ್ಟಿಗೆಯಲ್ಲಿರುವ ಹುಲಿ ತಿನ್ನಬಾರದು ಅಂತೇನೂ ಇಲ್ಲವಲ್ಲಾ?

ಎಡವಿದ ಬಲ
ಇನ್ನು ಪಶ್ಚಿಮ ಬಂಗಾಲದಂತೆ ಶಾಸನ ಸಭೆಗಿಂತ ಪಕ್ಷದ ವಿಲೇಜ್ ಕಮಿಟಿಯೇ ಹೆಚ್ಚು ಪಾವರ್ ಫುಲ್ ಆಗಬೇಕು. ಈಗ ಬಳ್ಳಾರಿಯಲ್ಲಿ ನಡೆಯುತ್ತಿರುವುದೇನು? ನಮ್ಮಲ್ಲಿಗೆ ಬಂದು ಯಾವ ಅಧಿಕಾರಿಯನ್ನಾದರೂ ಕೇಳಿ. ಅವರಿಗೆ ಕಾಲಕಾಲಕ್ಕೆ ಸಲಹೆ- ನಿರ್ದೇಶನ, ಕೆಟ್ಟ ಕಾಲಕ್ಕೆ ರಕ್ಷಣೆ ಕೊಡುವವರು ಯಾರು ಅಂತ. ವಿಧಾನಸೌಧದಲ್ಲಿರುವ ಹಿರಿಯ ಅಧಿಕಾರಿಗಳಲ್ಲ. ಪಕ್ಷದ ಕಚೇರಿಯಲ್ಲಿರುವ ಹಿರಿ-ಕಿರಿಯ ನಾಯಕರು. ಬಂಗಾಲದಲ್ಲಿರುವುದೂ ಇದೇ ವ್ಯವಸ್ಥೆ ತಾನೆ? ಇದಕ್ಕಿಂತ ಬಲವಾದ ಎಡಪಂಥೀಯ ವಾದ ಇರಬಹುದೆ?

ಬಲವಿಲ್ಲದ ಎಡ
ಇಷ್ಟಾಗಿ ಕೆಲವು ಕಾರ್ಯಕ್ರಮಗಳನ್ನು ಜೊತೆ ಜೊತೆಯಾಗಿಯೇ ತೆಗೆದುಕೊಳ್ಳಬಹುದು. ಉದಾಹರಣೆಗೆ ನಾಗಪುರದಲ್ಲಿ ಐಟಿಸಿ, ಓಟಿಸಿ ಕ್ಯಾಂಪ್ ಗಳಾದ ಮರುದಿನವೇ ಕೇಡರ್ ಕ್ಯಾಂಪ್ ಮಾಡಬಹುದು. ಅದೇ ಟೆಂಟು, ಅದೇ ಲಾಠಿ, ಅದೇ ಅಡುಗೆಯವರು, ಅದೇ ಮೈಕಿನವರು. ಮಾತು ಬೇರೆ, ಮಾತಾಡುವವರು ಬೇರೆ ಅಷ್ಟೇ. ನಮಗೇನೂ ಅಂಥ ವ್ಯತ್ಯಾಸವಾಗುವುದಿಲ್ಲ.

ಎರಡಕ್ಷರದಲ್ಲಿ ಅದೆಂಥ ಬಲ?
ಸರಕಾರ ಬಲವಿದ್ದರೇನು, ಎಡವಿದ್ದರೇನು? ಉದ್ದಿಮೆಗಳಿಗೆ ಜಮೀನು ಬೇಕು. ಬೇಡ ಅನ್ನಲು ರೈತರು ಯಾರು? ಅಲ್ಲಿನ ರೈತರು ಸಿಂಗೂರಿನಲ್ಲಿ ಗಲಾಟೆ ಮಾಡಿದರು. ನಮ್ಮವರು ಚಾಗನೂರಿನಲ್ಲಿ ಗಲಾಟೆ ಮಾಡಿದರು. ಮತ್ತೆ ಬರೀ ಎರಡಕ್ಷರದ ವ್ಯತ್ಯಾಸ. ಅದಕ್ಕೆ ಉತ್ತರವಾಗಿ ಮಾತ್ರ ಅವರು ಅಲ್ಲೇನು ಮಾಡಿದರೋ ಅದನ್ನೇ ನಾವು ಇಲ್ಲಿಯೂ ಮಾಡಿದೆವು. ಏನೂ ವ್ಯತ್ಯಾಸವಿಲ್ಲ.

ಏಟು ಹಾಗು ಓಟು
ಕಾರ್ಮಿಕರ ಸರಕಾರ ಕಾರ್ಮಿಕರ ಮಕ್ಕಳಿಗೆ ಕೇವಲ ಪ್ರಾಥಮಿಕ ಶಿಕ್ಷಣ ಒದಗಿಸಬೇಕು ಅಂತ ಯಾರಾದರೂ ಯುನಿವರ್ಸಿಟಿ ಬುದ್ಧಿವಂತರು ಕೂಗು ಹಾಕಿದರು ಅಂದುಕೊಳ್ಳಿ. ನಮ್ಮ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳನ್ನು ಬಂದ್ ಮಾಡಿ ಅಲ್ಲಿ ಒಂದನೇ ಈಯತ್ತೆ ತೆರೆಯಬೇಕು. ನಮ್ಮ ಹುಡುಗರನ್ನು ಹೆಚ್ಚಿಣ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಕ್ಕೆ ಕಳಿಸಬೇಕು. ಒಂದೆರಡು ಏಟು ತಿನ್ನಬೇಕಾಗಬಹುದು. ತಿನ್ನಲಿ. ಪ್ರೈಮರಿ ಶಾಲೆಯಲ್ಲಿ ತಿನ್ನಬಹುದಾದಲ್ಲಿ ಇಂಜಿನಿಯರಿಂಗ್ ಓದುವಾಗ ತಿನ್ನಬಾರದೇ? ಅಷ್ಟಾಗಿಯೂ ಏಟು ತಿನ್ನುವುದನ್ನು ಕಲಿತ ಹುಡುಗರು ನಮಗೆ ರಾಜಕೀಯ ಹೋರಾಟಗಳಿಗೆ ಬೇಕು. ಕಾಮ್ರೇಡ್ ಗಳು ತಯಾರಾಗುವುದು ಎಂದರೆ ಏನು ಸುಲಭವೇ?

ಗರೀಬೋಂಕೊ ಹಟಾವೋ
ಇನ್ನು ರೇಷನ್ ವ್ಯವಸ್ಥೆಯನ್ನು ಕೇವಲ ಬಡವರಿಗಲ್ಲದೇ ಎಲ್ಲರಿಗೂ ವಿಸ್ತರಿಸಬೇಕು ಅನ್ನುವುದು ಎಡಪಂಥೀಯರ ಬಲವಾದ ವಾದ. ಈಗ ನಾವು ಆ ದಿಕ್ಕಿನಲ್ಲಿಯೇ ಹೋಗುತ್ತಿದ್ದೇವೆ. ನಮ್ಮ ಸರಕಾರ ನಡೆಯುತ್ತಿರುವ ರೀತಿ ನೋಡಿದರೆ ಇನ್ನು ಮೂರು ವರ್ಷಗಳಲ್ಲಿ ಅಬೊವ್ ಪಾವರ್ಟಿ ಲೈನ್ ಅಂತ ಯಾರೂ ಉಳಿಯುವುದಿಲ್ಲ. ಎಲ್ಲರೂ ಬಿಪಿಎಲ್ ಆಗಿ ಬಿಡ್ತಾರೆ. ಆಗ ತಾನಾಗಿಯೇ ಎಲ್ಲ ಕುಟುಂಬಗಳು ರೇಷನ್ ಪಡೆಯಬೇಕಾಗುತ್ತದೆ. ಶ್ರೀಮತಿ ಇಂದಿರಾಗಾಂಧಿ ಅವರು ಗರೀಬೀ ಹಟಾವೋ ಅಂತ ಹೇಳಿದ್ದರು. ನಾವು ಗರೀಬೋಂಕೊ ಹಟಾವೋ ಅಂತ ಹೇಳುತ್ತೇವೆ. ಅಷ್ಟೇ.

ಅಯೋಧ್ಯೆಯಲ್ಲಿ ಕಾರ್ಮಿಕ ಭವನ
ನೋಡಿ ಬಲ, ಎಡ, ಈ ಎರಡೂ ಸಿದ್ಧಾಂತಗಳು ಸಾಂಕೇತಿಕವಾಗಿ ಸಂಗಮವಾಗಬೇಕಾದರೆ ಅಯೋಧ್ಯೆಯಲ್ಲಿ ಕಾರ್ಮಿಕ ಭವನ ಆಗಬೇಕು ಅಷ್ಟೇ ಅಲ್ಲವೇ? ಅದೇನು ಮಹಾ ಬಿಡಿ. ರಾಮ ಮಂದಿರದ ಬದಲಿ ಕಾರ್ಮಿಕ ಭವನ. ಎರಡೂ ಬಿಲ್ಡಿಂಗ್ ಗಳೇ ತಾನೆ, ಅಷ್ಟೇನೂ ವ್ಯತ್ಯಾಸ ಇಲ್ಲ. ಆಗ ೧೯೯೦-೧೯೯೧ರಲ್ಲಿ ಒಬ್ಬೊಬ್ಬರಿಂದ ಒಂದು ರೂಪಾಯಿ ನಾಲ್ಕಾಣೆ ಸಂಗ್ರಹಿಸಿದ್ದೆವು, ಈಗ ಹಣದುಬ್ಬರ ಹೆಚ್ಚಾಗಿದೆ, ಎರಡು ರೂಪಾಯಿ ಎಂಟಾಣೆ ಸಂಗ್ರಹಿಸಿದರಾಯಿತು. ಸೇಮ್ ಡಿಫೆರೆನ್ಸ್. ಅಷ್ಟನ್ನೂ ಜನರಿಂದ ಕೊಡಲಿಕ್ಕೆ ಆಗೊದಿಲ್ಲ ಎಂದರೆ ನಮ್ಮ ಸ್ನೇಹಿತರಾದ ಜಗನ್ ಮೋಹನ್ ರೆಡ್ಡಿ ಅವರನ್ನು ಈ ಪ್ರಾಯೋಜಕರನ್ನಾಗಿ ಮಾಡಿದರಾಯಿತು. ಎಂದರು. ಅವರ ಹುಡುಗರು ಗೋರಿ ಕಟ್ಟುವುದರಲ್ಲಿ ನಿಷ್ಣಾತರು. ಅದು ಪಕ್ಷವಿರಲಿ, ಪಕ್ಷದ ಕಾರ್ಯಕರ್ತರಿರಲಿ ಅವರಿಗೆ ಎಲ್ಲ ಒಂದೆ.

ಕಟ್ಟುವುದು ಹಾಗೂ ಕೆಡವುವುದು ಎಂಬ ರಚನಾತ್ಮಕ ಕ್ರಿಯೆ
ಇನ್ನು ಈ ಮಹಾ ಕಾರ್ಯದ ಮೊದಲ ಹೆಜ್ಜೆಯಾಗಿ ಒಂದು ಬಿಲ್ಡಿಂಗ್ ಕೆಡವಬೇಕು. ಬೆಂಗಳೂರಿನ ವಿಧಾನಸೌಧವನ್ನೇ ಕೆಡವಿದರಾಯಿತು. ಆಡಳಿತ ಯಂತ್ರವೆಲ್ಲ ಬಳ್ಳಾರಿಗೆ ಬಂದಮೇಲೆ ಆ ಖಾಲಿ ಫ್ಯಾಕ್ಟರಿ ಕಟ್ಟಡದಿಂದೇನು ಫಲ? ಅದನ್ನು ಕೆಡವಿದರೇನು, ಇನ್ನಷ್ಟು ದೊಡ್ಡದಾಗಿ ಬೆಳೆಸಿದರೇನು? ಮೂವತ್ತೈದು ಮಂತ್ರಿಗಳಲ್ಲಿ ಒಂದು ಮೂರೂವರೆ ಜನ ಮಾತ್ರ ವಿಧಾನಸೌಧಕ್ಕೆ ದಿನವೂ ಹೋಗುತ್ತಾರೆ, ಉಳಿದವರೆಲ್ಲ ಆ ಕಡೆ ತಲೆ ಹಾಕಿ ಮಲಗುವುದಿಲ್ಲ. ಹೀಗಿದ್ದಾಗ ಆ ಕಲ್ಲಿನ ಕಟ್ಟಡ ಯಾವಾನಿಗೆ ಬೇಕು. ಬೇರೆ ಯಾರಿಗೂ ಬೇಡ. ಆದರೆ, ನಮಗೆ ಆ ಜಾಗ ಅವಶ್ಯವಾಗಿ ಬೇಕಾಗಿದೆ.

ಕಬ್ಬನ್ ಪಾರ್ಕಿಂಗ್
ನಮಗೆ ಹೇಗಿದ್ದರೂ ವಾರದಲ್ಲಿ ಮೂರು ದಿನ ಹೈಕೋರ್ಟ್ ನಲ್ಲಿ ಕೆಲಸ ಇರುತ್ತದೆ. ಆದರೆ ಅಂಬೇಡ್ಕರ್ ವೀಧಿಯಲ್ಲಿ ಎಲ್ಲಿಯೂ ಪಾರ್ಕಿಂಗ್ ಜಾಗ ಇಲ್ಲ. ನಾವು ನಾಲ್ಕು ಜನ, ನಮ್ಮ ಸೆಕ್ಯೂರಿಟಿಯವರು ನಲವತ್ತು-ನಲವತ್ತು ಜನ, ನಮ್ಮ ಹಿಂಬಾಲಕರು ನಾನೂರು ಜನ, ಹೆಲಿಕಾಪ್ಟರಿನಲ್ಲಿ ಬಂದು ಹೋಗಬೇಕೆಂದರೆ ಬಹಳ ಕಿರಿಕಿರಿಯಾಗುತ್ತದೆ. ಹೀಗಾಗಿ ಹೈಕೋರ್ಟ್ ಎದುರಿಗೆ ವಿಧಾನಸೌಧವೇ ಇಲ್ಲದಿದ್ದರೆ ನಮಗೆ ಅನುಕೂಲವಾಗುತ್ತದೆ. ಆಫ್ಟರಾಲ್ ಈ ಇಡೀ ವ್ಯವಸ್ಥೆಯೇ ನಮ್ಮ ಅನುಕೂಲಕ್ಕಾಗಿ ಇದೆ ತಾನೆ? ಇಲ್ಲದಿದ್ದರೂ ಮಾಡಿಕೊಳ್ಳಬೇಕು ಎನ್ನುವವನು ನಾನು.

ಸರಕಾರವನ್ನೇ ಔಟ್ ಸೋರ್ಸ್ ಮಾಡುವ ಸತ್ಯಂ ನಾರಾಯಣ ವೃತ
ವಿಧಾನಸೌಧವೇ ಇಲ್ಲದಿದ್ದರೆ ಸರಕಾರ ಹೇಗೆ ಎನ್ನುವ ಚಿಂತೆ ಬೇಡಿ. ರಾಜ್ಯದ ಆಡಳಿತವನ್ನೆಲ್ಲ ನಾವು ಒಂದು ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಗೆ ಕೊಡಬೇಕು ಅಂತ ಮಾಡಿದ್ದೇವೆ. ಅದು ನಮ್ಮ ಸತ್ಯಂ ರಾಜು ಅವರು ಆರಂಭಿಸಿದ್ದು. ಅವರು ಸುಳ್ಳಂ ಆದ ಮೇಲೆ ಅದನ್ನು ಬೇರೆ ಕಂಪನಿಯವರು ಖರೀದಿ ಮಾಡಿದರು. ಅವರೀಗ ಆಫ್ರಿಕಾ, ಸೌದಿ ಅರೇಬಿಯಾ, ಪಶ್ಚಿಮ ರಷಿಯಾಗಳಲ್ಲಿನ ಕೆಲವು ದೇಶಗಳನ್ನು ತುಂಬ ಚೆನ್ನಾಗಿ ಮ್ಯಾನೇಜ್ ಮಾಡುತ್ತಿದ್ದಾರೆ. ಅಲ್ಲಿ ಹೆಸರಿಗೆ ಮಾತ್ರ ರಾಷ್ಟ್ರಾಧ್ಯಕ್ಷ, ಪ್ರಧಾನಿ ಅಂತ ಕೆಲವರನ್ನು ಇಟ್ಟಿದ್ದಾರೆ. ಕೆಲಸ ಎಲ್ಲ ಇವರದೇ, ಆದರೂ ಅವರಿಗೆ ದಿನ ನಿತ್ಯದ ಆಡಳಿತದಲ್ಲೇನಾದರೂ ತೊಂದರೆ ಬಂದರೆ ಇರಲಿ ಅಂತ ಹೈದ್ರಾಬಾದ್, ನೊಯಿಡಾ, ಹೊಸೂರುಗಳಲ್ಲಿ ಕಾಲ್ ಸೆಂಟರ್ ಗಳನ್ನು ಸ್ಥಾಪಿಸಿದ್ದಾರೆ. ಆದರೆ ಆ ನನ್ನ ಮಕ್ಕಳು ಎಂತ ದಡ್ಡರು ಎಂದರೆ ಈ ಕಾಲ್ ಸೆಂಟರ್ ಗಳಿಗೆ ಫೋನ್ ಮಾಡುವುದನ್ನು ಬಿಟ್ಟು ೧೦೮ ಆಂಬುಲನ್ಸ್ ಗಳಿಗೆ ಫೋನ್ ಮಾಡುತ್ತಿರುತ್ತಾರೆ. ಇರಲಿ. ನಮ್ಮ ಕೆಲಸ ಆದರೆ ಸಾಕು ಬಿಡಿ. ಒಟ್ಟಿನಲ್ಲಿ ಈ ಎರಡೂ ಸಿದ್ಧಾಂತಗಳ ಸಂಗಮದಿಂದ ನಮಗೆ ಸಂಪೂರ್ಣ ಸಂಪಾದನೆ ಆಗಬೇಕು. ಅಷ್ಟೇ ಅಲ್ಲವೇ, ಆಗುತ್ತದೆ. ನೀವು ಅಂದುಕೊಂಡದ್ದಕ್ಕಿಂತ ಬೇಗ ಆಗುತ್ತದೆ ಅಂತ ಅಂದರು.

ಪತ್ರಿಕಾ ಕಚೇರಿಗಳಲ್ಲಿ ಮೂಲಭೂತ ಹಕ್ಕುಗಳ ದಮನ
ನನ್ನ ತಲೆ ತಿರುಗಿದಂತಾಗಿ, ಹೊಟ್ಟೆ ತೊಳಸಿದಂತಾಗಲು ಶುರುವಾಯಿತು. ಈ ಆಕಾಶದಲ್ಲಿ ೧೦೮ ಆಂಬುಲೆನ್ಸಿಗೆ ಎಲ್ಲಿಂದ ಫೋನ್ ಮಾಡಲಿ ಅಂತ ತಿಳಿಯದೇ ನಿಂತೆ. ತಲೆ ತಿರುಗಿದಂತಾಗಿ ಬಿದ್ದೆ.

ಎದ್ದಾಗ ಕಚೇರಿಯ ಕಂಪ್ಯೂಟರ್ ಎದುರು ಇದ್ದೆ. ‘ಏನ್ರೀ ಕಳೆದ ಸಾರಿ ಮನೆಯಲ್ಲಾದರೂ ಮಲಗಿದ್ದಿರಿ. ಈಗ ನೋಡಿದರೆ ಇಲ್ಲೇ ಮಲಗಿದ್ದೀರಿ. ಏನ್ರೀ ಇದು' ಅಂತ ಬಾಸ್ ಜೋರಾಗಿ ಕಿರುಚುತ್ತಿದ್ದರು. ನಾನು ಆ ಕಡೆ ನೋಡದೇ ಟಾಯ್ಲೆಟ್ಟಿಗೆ ಹೋದೆ. ಅಲ್ಲಿ ನೀರಿರಲಿಲ್ಲ. ಆದರೆ ಇದು ಏರ್ ಷಿಪ್ ಅಲ್ಲ ಅನ್ನುವುದು ನೆನಪಾಯಿತು. ಒತ್ತಿ ಬರುತ್ತಿರುವ ಭಾವನೆಗಳನ್ನು ದಮನ ಮಾಡುತ್ತಾ ಹೊರಬಂದೆ.

(ಮುಗಿಯಿತು)

ಹೃಷಿಕೇಶರ ಪಡಿಪಾಟಲುಗಳನ್ನು ಶುರುವಿನಿಂದಲೇ ಓದಲು ಇಲ್ಲಿ ಕ್ಲಿಕ್ ಮಾಡಿ
Print Close

Spoof on BJP government in Karnataka-1

ಕಮಲದಲ್ಲಿ ಕಮಲ ಹುಟ್ಟಿ, ಗೂಢದಲ್ಲಿ ಲೀನವಾಗಿ
By ಹೃಷಿಕೇಶ್ ಬಹದ್ದೂರ್ ದೇಸಾಯಿ

ಅಂದು ಮಧ್ಯಾಹ್ನ ನನ್ನ ಫೋನಿಗೆ ವಿದೇಶಿ ನಂಬರಿನಿಂದ ಫೋನ್ ಬಂತು. ಲಂಡನ್ನಿನಲ್ಲಿರುವ ನನ್ನ ಹೆಂಡತಿಯ ತಮ್ಮ ಫೋನ್ ಮಾಡಿರಬೇಕು ಅಂತ ಎತ್ತಿದೆ. ಆದರೆ ಫೋನ್ ಮಾಡಿದವರು ಬೇರೆ. ಸಹಕಾರಿ ಧುರೀಣ ಹಾಗೂ ಹಿರಿಯ ಮಿತ್ರ ಗುರುನಾಥ್ ಈಜಿಪ್ತ್ ನಿಂದ ಮಾತಾಡುತ್ತಿದ್ದರು.

ಪಿರಾಮಿಡ್ಡೀಕರಣ
``ಏನ್ ನ್ಯೂಸು ಸರ್ ನಮ್ಮ ಪಾರ್ಟಿ ಏನಂತದ? ಸರಕಾರ ಇರ್ತದೋ ಇಲ್ಲೋ?'' ಎಂದರು.
``ನೀವು ಈಜಿಪ್ತ್ ನಲ್ಲಿ ಇದ್ದೀರೋ ಇಲ್ಲೋ. ಅಲ್ಲಿಯೇ ಯಾವುದಾದರೂ ಪಿರಾಮಿಡ್ ನೋಡಲಿಕ್ಕೆ ಹೋದಾಗ ಯಾವುದಾದರೂ ಪಿರಾಮಿಡ್ ಖಾಲಿ ಇದ್ದರೆ ನಿಮ್ಮ ಪಕ್ಷಕ್ಕೊಂದು ಸಮಾಧಿ ಬುಕ್ ಮಾಡಿಬಂದು ಬಿಡ್ರಿ'' ಅಂತಂದೆ.
``ಹೌದು ಹೋಗಿದ್ವಿ. ಆದರೆ ಪಿರಾಮಿಡ್ ಯಾವುದೂ ಖಾಲಿ ಇದ್ದಂಗ ಕಾಣಲಿಲ್ಲ'' ಅಂದರು. ``ಅಯ್ಯೋ ಹಂಗಾರ ಅಯೋಧ್ಯಾನೋ, ಕಾಶ್ಮೀರಾನೋ ಎಲ್ಲೋ ಒಂದು ಕಡೆ ಸಮಾಧಿ ಹುಡುಕಬೇಕಾತು'' ಅಂತ ನಕ್ಕು ಸುಮ್ಮನಾದೆವು.

ಪ್ಲ್ಯಾಂಟರ್ ಗಳ ಸಮಾವೇಶ
ಆ ನಂತರ ಸ್ವಲ್ಪ ಹೊತ್ತಿಗೆ ಸ್ನೇಹಿತ ಶ್ರೀರಾಮುಲು ಅವರ ಪಿಎ ಅವರ ಫೋನ್ ಬಂತು. ಸಾಹೇಬರ ಪ್ರೆಸ್ ಮೀಟ್ ಇದೆ ಸಾರ್, ಬರಬೇಕಂತೆ ಅಂದರು. ನಾನು ಹೋದರೆ ಅಲ್ಲಿ ಪತ್ರಿಕಾಗೋಷ್ಠಿ ಇಲ್ಲ. ಏನಿಲ್ಲ. ಪ್ರೆಸ್ ಮೀಟ್ ಅಂದರೆ ಸುದ್ದಿಗೋಷ್ಠಿ ಅಲ್ಲ. ಸರ್, ಪ್ರೆಸ್ ನವರನ್ನು ಮೀಟ್ ಮಾಡೋದು, ಅಷ್ಟೇ, ಅಂದರು ಸಚಿವರು. ಅವರನ್ನು ಆವಾಗಾವಾಗ ಮೀಟು ಮಾಡುತ್ತಿದ್ದರೆ ಯಾವಾಗ್ಯಾವಾಗ ಏನೇನು ಸುದ್ದಿ ಮಾಡುತ್ತಿರಬೇಕು, ಅದಾಗದಿದ್ದರೆ ಏನೇನು ಸುದ್ದಿ ಪ್ಲ್ಯಾಂಟು ಮಾಡಬೇಕು ಅಂತ ಗೊತ್ತಾಗುತ್ತದೆ, ಅಂದರು. ಈ ಪ್ಲ್ಯಾಂಟೇಷನ್ ಕೆಲಸಕ್ಕಾಗಿಯೇ ಇವರು ಹಿರಿಯ ಪತ್ರಕರ್ತರನ್ನು ಸಲಹೆಗಾರರನ್ನಾಗಿ ಇಟ್ಟುಕೊಂಡಿರುವುದು. ಇಂಥ ದೊಡ್ಡ ಪ್ರ್ಯಾಂಟರುಗಳಿಗೆ ಇದೆಲ್ಲ ಸಹಜ ಅಂದುಕೊಂಡೆ.

ಸವ್ಯಸಾಚಿಯ ಚೆಸ್
ಒಳಗೆ ಜನಾರ್ಧನ ರೆಡ್ಡಿ ಅವರು ಚೆಸ್ ಬೋರ್ಡ್ ಮುಂದೆ ಧ್ಯಾನಾಸಕ್ತರಾಗಿ ಕೂತಿದ್ದಾರೆ. ಅವರ ಜತೆ ಚೆಸ್ ಆಡುತ್ತಿದ್ದವರು ಎದ್ದು ಹೊರಗೆ ಹೋಗಿದ್ದಾರೋ ಏನೋ? ಅದಕ್ಕೇ ಒಬ್ಬರೇ ಕೂತಿರಬಹುದು ಅಂತ ಅಂದುಕೊಂಡೆ. ನೀವು ಏನು ವಿಚಾರ ಮಾಡುತ್ತಿದ್ದೀರಿ ಅಂತ ಗೊತ್ತಾಯ್ತು. ಇವರು ಒಬ್ಬರೇ ಏನು ಮಾಡಾತ್ತ ಇದ್ದಾರೆ ಅಂದುಕೊಂಡಿರಿ ತಾನೇ ನೀವು? ಅಂದರು ಶ್ರೀರಾಮುಲು.

ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೆ
ನಮ್ಮ ಚೇರ್ಮನ್ನರು ತುಂಬ ಒಳ್ಳೇ ಚೆಸ್ ಪ್ಲೇಯರ್. ಅವರು ಎಷ್ಟು ಒಳ್ಳೆ ಆಟಗಾರರು ಅಂದರೆ ಅವರಿಗೆ ಇನ್ನೊಬ್ಬರ ಜತೆ ಚೆಸ್ ಆಡಲು ಸರಿ ಹೋಗೋದಿಲ್ಲ. ಅವರಿಗೆ ಹೀಗೇ ಸರಿ. ಅದಕ್ಕೇ ಯಾವಾಗಲೂ ಹಿಗೇನೇ ಆಡ್ತಾ ಇರ್ತಾರೆ. ಹೀಗಿದ್ದರೆ ಎರಡೂ ಕಡೆಯಿಂದ ಕಾಯಿಗಳನ್ನು ಇವರೇ ನಡೆಸಬಹುದಲ್ಲವೇ? ಒಮ್ಮೆ ಈ ಕಡೆಯಿಂದ ಮೂವ್ ಮಾಡುವುದು, ಇನ್ನೊಮ್ಮೆ ಆ ಕಡೆಯಿಂದ ಮೂವ್ ಮಾಡುವುದು. ಯಾವ ಟೈಮ್ ನಲ್ಲಿ ಯಾವ ಕಡೆಯಿಂದ ಗೆದೆಯಬಹುದೋ ಅಲ್ಲಿಂದ ಜಯ ಡಿಕ್ಲೇರ್ ಮಾಡುತ್ತಾರೆ. ಹೀಗಾಗೇ ಅವರನ್ನು ಅರ್ಥ ಮಾಡಿಕೊಳ್ಳೋದು ಬೇರೆಯವರಿಗೆ ಕಷ್ಟ. ಅಂದರು. ಇವರು ಮಾತು ಕೇಳಿದ ಮೇಲೆ ಇನ್ನೂ ಕಷ್ಟ ಅನ್ನಿಸಿ ಹೌದೌದು ಅಂತಂದೆ.

ದುಡ್ಡು ಇಂಟು ದುಡ್ಡು ಇಕ್ವಲ್ ಟು ರಾಜತಂತ್ರ
ಯಂಡಮೂರಿ ಅವರ ಒಡನಾಟದಿಂದ ಪ್ರಭಾವಿತರಾದ ನಮ್ಮ ಚೇರ್ಮನ್ನರು ತುಂಬ ಒಳ್ಳೆಯ ಪುಸ್ತಕಗಳನ್ನು ಬರೆದಿದ್ದಾರೆ. `ಅಘೋರಿಗಳಿಗಿಂತ ಮುಂದೆ',
`ಮೋಹಿನಿ ಕಾಟ ತೊಲಗಿಸುವುದು ಹೇಗೆ?'
`ಸರಕಾರ: ಪ್ರಾಣ ಪ್ರತಿಷ್ಠಾಪನೆ ಹಾಗು ವಿಸರ್ಜನೆ,'
`ಕೆಂಪು ಮಣ್ಣಿನಲ್ಲಿ ಮಳೆ ಇಲ್ಲದ ಬೆಳೆ'ೆ
ಇವೆಲ್ಲ ಬೆಸ್ಟ್ ಸೆಲ್ಲರ್ ಗಳು. ಅಲ್ಲದೇ
ನೀನೇ ಮಾಡಿನೋಡು ಸೀರಿಸ್ ನಲ್ಲಿ
`ರಾಜ್ಯಗಳ ಗಡಿ ವಿಸ್ತರಿಸುವುದು ಹೇಗೆ?'
`ಶಕುನಿಗೇ ತಿರುಮಂತ್ರ ಮಾಡುವುದು ಹೇಗೆ?'
`ಹಿಮಾಲಯದ ಯೋಗಿಗಳ ತಂತ್ರಗಳನ್ನು ರಣ ರಣ ಬಿಸಿಲಿನಲ್ಲಿ ಬಳಸುವುದು ಹೇಗೆ?'
ಇತ್ಯಾದಿ ಪುಸ್ತಕ ಬರೆದಿದ್ದಾರೆ.

ಈಗ `ಎಲ್ಲಾ ಸಾಧಿಸಿದ ಮೇಲೆ ಯಾವ ಸಾಧನೆ ಮಾಡುವುದು?' ಅನ್ನೋ ಮಹಾ ಕಾದಂಬರಿ ಬರೆಯುತ್ತಿದ್ದಾರೆ. ರಜನಿ ಪಿಕ್ಚರ್ ಥರಾ ಮಾರುಕಟ್ಟೆಗೆ ಬರುವ ಮೊದಲೇ ಮೊದಲ ಪ್ರಿಂಟ್ ಖರ್ಚಾಗಿ ಎರಡನೇ ಪ್ರಿಂಟ್ ಗೆ ಬೇಡಿಕೆ ಬಂದಿದೆ ಅಂದರು. ಅದರ ಪಿಆರ್ ಕೆಲಸ ಎಲ್ಲ ನಮ್ಮಲ್ಲಿ ಕೆಲಸಕ್ಕೆ ಇರುವ ಹಾಲಿ ಹಾಗೂ ಮಾಜಿ ಪರ್ತಕತ್ರರು ನೋಡಿಕೊಳ್ಳುತ್ತಾರೆ ಎಂದರು. ಯೆಸ್ ಯೆಸ್ ಅಂತ ಅಲ್ಲಿ ಕೂತಿದ್ದ ಪೆನ್ನಿಗರಾಯರು ತಲೆ ಆಡಿಸಿದರು.
ಕೊನೆಗೆ ಅವರ ಹೆಲಿಕಾಪ್ಟರ್ ನಲ್ಲಿ ಗೋವಾಕ್ಕೆ ಹೋದೆವು.

ಕೊಳೆಯುವ ಸಿರಿ ಮೊಳಕೆಯಲ್ಲಿ
ಅಲ್ಲಿ ನಮ್ಮ ರೇಣುಕಾಚಾರ್ಯ ಅವರು ಇದ್ದರು. ``ಸ್ವಾಮಿ ನಮ್ಮನ್ನು ಸೀಎಮ್ಮು ಏನು ಅಂದುಕೊಂಡಿದ್ದಾರೆ? ನಾನು ನನಗೆ ಕೊಟ್ಟ ಖಾತೆ ಸರಿಯಾಗಿ ನಡೆಸಿಲ್ಲವೇ? ಹಿಂದಿನ ಅಬಕಾರಿ ಮಂತ್ರಿಗಳೆಲ್ಲ ದೊಡ್ಡವರಿಗೆ ಸರಾಯಿ ಕುಡಿಸಲು ಆಗದೇ ಸೋತು ಹೋಗಿದ್ದಾರೆ. ಆದರೆ ನಾನು ಏಳು ವರ್ಷದ ಹುಡುಗನಿಗೂ ಕೂಡ ಕುಡಿಸಿದ್ದೇನೆ. ಮಾಧ್ಯಮದ ಮಿತ್ರರು ಅದನ್ನು ಟೀವಿಯಲ್ಲಿ, ಪೇಪರ್ ನಲ್ಲಿ ತೋರಿಸಿದ್ದಾರೆ. ಬೇಕಾದರೆ ನೊಡಿ'' ಅಂತ ಪೇಪರ್ ಕಟಿಂಗ್ ಇಟ್ಟುಕೊಂಡಿದ್ದ ಫೈಲ್ ತೋರಿಸಿದರು. ``ನನ್ನಷ್ಟು ಕಷ್ಟ ಪಡೋ ಕಾರ್ಯಕತ್ರನಿಗೆ ಜಯಲಕ್ಷ್ಮಿ ಒಲಿಯಬಾರದೇ'' ಅಂದರು. ನೀವು ಹೇಳುವುದೂ ಸರಿ ಇದೆ ಅಂತ ಹೇಳಿದೆ.

ಕಮಲದಲ್ಲಿ ಕಮಲ ಹುಟ್ಟಿ, ಗೂಢದಲ್ಲಿ ಲೀನವಾಗಿ
ಅಷ್ಟೊತ್ತಿಗೆ ಹರಿಹರದ ಹರೀಶ್ ಸಿಕ್ಕರು. ಸೀಎಮ್ಮು ಫೋನ್ ಮಾಡಿದ್ರು ಸಾ, ನಮ್ಮ ಎಮ್ಮೆಲ್ಲೆ ಗಳು ಚೆನ್ನೈ ರಿಸಾರ್ಟಿಗೆ ಹೋಗಿದ್ದಾರೆ. ಅವರು ಒಳಗೊಳಗೇ ಏನು ಮಾತಾಡ್ತಾರೆ ಅಂತ ತಿಳಿದುಕೊಳ್ಳೋಕೆ ನೀವು ಹೋಗಬೇಕು ಅಂತ ಹೇಳಿದರು. ಅದಕ್ಕೇ ಇಲ್ಲಿ ಇದ್ದೀನಿ ಅಂದರು. ಹಾಗಾದರೆ ಗೂಢಚಾರನ ಕೆಲಸ ಅನ್ನಿ, ನಿಮ್ಮಂಥ ಗೂಢಚಾರರು ಇಲ್ಲಿ ಎಷ್ಟು ಜನ ಇದ್ದೀರಿ ಅಂತ ಮೆಲುದನಿಯಲ್ಲಿ ಕೇಳಿದೆ. ಅಯ್ಯೋ ಅದಕ್ಕೇಕೆ ಅಷ್ಟೊಂದು ಹಿಂಜರಿದುಕೊಂಡು ಮಾತಾಡ್ತೀರಾ? ಇಲ್ಲಿ ಇರೋರೆಲ್ಲಾ ಗೂಢಚಾರರೇ. ಯಾರ ಕಡೆ ಗೂಢಚಾರರು ಅನ್ನೋದು ಮಾತ್ರ ವಿಶ್ವಾಸ ಮತದ ನಂತರ ತೀರ್ಮಾನವಾಗುತ್ತೆ. ಅಲ್ಲಿವರೆಗೂ ನಾವು ನಿಮ್ಮವರವಲ್ಲ. ನೀವು ನಮ್ಮವರಲ್ಲ. ನಮ್ಮ ಕೆಲಸ ಏನು ಅಂದರೆ ಭಿನ್ನಮತೀಯರಲ್ಲಿ ಭಿನ್ನಮತ ಮೂಡಿಸುವುದು, ಹೀಗೆ ನಮ್ಮ ಕಡೆ ಬಂದವರ ಮೇಲೆ ನಿಗಾ ಇಡಲು ಗೂಢಚಾರರನ್ನು ನೇಮಿಸುವುದು. ಆಮೇಲೆ ಅವರು ಸರಿ ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಅಂತ ನೋಡಲು ಅವರ ಮೇಲೆ ಮತ್ತೊಬ್ಬ ಗೂಢಚಾರರನ್ನು ನೇಮಿಸುವುದು. ಇದೆಲ್ಲಾ ನಡೀತಾ ಇದೆ. ನೇಮಕದ ವಿಷಯದಲ್ಲಿ ಪರಿಣಿತರಾಗಿರುವ ರಾಮಚಂದ್ರಗೌಡರೇ ಇದಕ್ಕೆಲ್ಲಾ ಇನ್ ಚಾರ್ಜು. ಆದರೆ ಇದ್ಯಾವುದೂ ಕ್ಲಿಯರ್ ಇಲ್ಲ. ಇದೊಂಥರಾ ಯಂಡಮೂರಿ ಕಾದಂಬರಿ ಲೆಕ್ಕ ಅಂದರು. ಇದರ ಬಗ್ಗೆ ಯಾರಾದರೂ ಕಾದಂಬರಿ ಬರೆಯುತ್ತಿದ್ದಾರಾ ಎಂದು ಕೇಳಿದೆ. ಇರಬಹುದು. ಕೆಲವು ದಿನ ಕಾದು ನೋಡಿ ಅಂದರು.

ಸ್ಟ್ಯಾಂಪಿಟ್
``ನಮಗ ಯಾರೂ ರೊಕ್ಕಾ ಕೊಟ್ಟಿಲ್ಲರೀ. ನಾವ ಎಲ್ಲರಿಗೂ ಕೊಡೋದು. ನಮಗ ರೊಕ್ಕಾ ಕೊಡಲಿಕ್ಕೆ ಬರುವ ಗಂಡಸು ಮಗ ಯಾವಾ ಅದಾನರೀ,'' ಅಂದರು ಜಾರ್ಕಿಹೊಳಿ. ಅವರು ಕೊಟ್ಟಿದ್ದು ಏನಿದ್ರೂ ಅಲ್ಲಿ ಗ್ಯಾರೇಜಿನಲ್ಲಿ ಅದಾವು ನೋಡ್ರಿ ಅಂದರು. ಅಲ್ಲಿ ಕೆಲವು ಸಾರಾಯಿ ಪ್ಯಾಕ್ ಮಾಡೋ ಪ್ಲಾಸ್ಟಿಕ್ ಚೀಲ ಇದ್ದವು. ಅದರಲ್ಲಿ ಹಸಿರು, ಕೇಸರಿ ಮತ್ತು ಬಿಳಿ ಸ್ಟ್ಯಾಂಪ್ ಗಳನ್ನು ಅಂಟಿಸಿದ ಚೀಲಗಳಿದ್ದವು. ``ಅವು ಬೇರೆ ಬೇರೆ ಪಾರ್ಟಿಯವರು ಕೊಟ್ಟಿದ್ದು. ಸ್ವಲ್ಪ ದಿನಾ ನೋಡ್ತೇವಿ. ಆಮ್ಯಾಲೆ ಯಾವ ಸರಕಾರ ಬರ್ತದೋ ಆ ಸರಕಾರದ ಸ್ಟೀಕರನ್ನೇ ಎಲ್ಲಾದಕ್ಕೂ ಹಚ್ಚಿ ಇಟ್ಟುಕೊಂಡು ಬಿಡ್ತೇವಿ,'' ಅಂದರು.

ಗಾಂಧಿಗೂ ಟೊಪ್ಪಿಗೆಗೂ ಏನು ಸಂಬಂಧ?
ಬೆಳ್ಳುಬ್ಬಿ ಅವರು ಅಂಬರ ಚರಕಾ ಇಟ್ಟುಕೊಂಡು ಕೂತಿದ್ದರು. ತಮ್ಮ ತಲೆಯ ಮೇಲಿನ ಗಾಂಧಿ ಟೊಪ್ಪಿಗೆ ತೆಗೆದು ಗಾಂಧೀಜಿ ಫೋಟೋಗೆ ಹಾಕಿದ್ದರು.
ಅಲ್ಲರೀ ಈ ಗಾಂಧಿ ಅಜ್ಜ ತಾನು ಜೀವನದಾಗ ಟೊಪಿಗೆ ಹಾಕ್ಕೋಳಿಲ್ಲ. ನಮ್ಮಂಥವರಿಗೆ ಹಾಕಿ ಹೋದ. ಅದನ್ನು ಹಾಕಿಕೊಂಡಾಗ ಎಷ್ಟು ಕಷ್ಟ ಇರತದ ಅಂತ ಗೊತ್ತಾಗಲಿ ಅಂತ ಆ ಫೋಟೋಕ್ಕ ಹಾಕೇವಿ ಅಂದರು. ಅದೂ ಸರಿ ಇರಬಹುದು ಅನ್ನಿಸಿತು.

``ಸುಮ್ಮನೇ ಖಾಲಿ ಕೂತು ಏನು ಮಾಡೋದ್ರಿ, ಖಾದಿ ನೂಲು ತೆಗೆಯೋಣು ಅಂತ ಕೂತೇನಿ'' ಅಂತ ಚರಕಾದ ಮೇಲೆ ಕೈಯಾಡಿಸಿದರು.

ನೂತಿದ್ದುಟ್ಟು ಕೊಳ್ಳೋ ಮಾರಾಯ
``ಅಲ್ಲರೀ ಖಾದಿ ನೂಲಾದರ ಮನ್ಯಾಗೆ ತೆಗೀಬಹುದು. ಆದರೆ ಕೆಂಪು ಗೂಟದ ಕಾರು ನಮ್ಮ ಮನೀ ಗ್ಯಾರೇಜಿನ್ಯಾಗ ಮಾಡಿದರ ಮಂದಿ ನಗತಾರ ನೋಡ್ರಿ. ಮಿನಿಸ್ಟರ ಲೆಟರ್ ಹೆಡ್ಡೂ, ವಿಧಾನಸೌಧದ ಚೇಂಬರು, ಗನ್ ಮೆನ್ನೂ, ಪ್ರೊಟೊಕಾಲ್ ವೆಹಿಕಲ್ಲೂ ಇವೆಲ್ಲ ಹೊರಗಿನಿಂದ ತರೋ ಸಾಮಾನು ನೋಡ್ರಿ. ಅದಕ್ಕ ಚೆನ್ನೈಗೆ ಹೊದಿವಿ. ಅಲ್ಲಿ ಹವಾ ಸರಿ ಇಲ್ಲ ಅಂತ ಇಲ್ಲಿಗೆ ಬಂದೇವಿ'' ಅಂದರು.

ತಿಂದು ಹೆಚ್ಚಾದವರ ಪುನರ್ವಸತಿ
ಕೊನೆಗೆ ಸುಧಾಕರ್ ಅವರು ಸಿಕ್ಕರು. ಅಲ್ಲಾ ಸ್ವಾಮಿ, ಇದೆಲ್ಲ ಈಗ ಮಾಡುತ್ತಿದ್ದಾರೆ. ಸುಮ್ಮನೇ ರಿಸಾರ್ಟ್ ಖರ್ಚು. ಕೆಲವು ತಿಂಗಳು ಹಿಂದಾಗಿದ್ದರೆ ಮಾಗಡಿ ರೋಡ್ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿಯೇ ನಮ್ಮ ಎಮ್ಮೆಲ್ಲೇಗಳು ಇರಬಹುದಿತ್ತು. ಅದೆಲ್ಲಾ ನಮ್ಮ ಕೈಯಲ್ಲೇ ಇತ್ತು. ಊಟ, ವಸತಿ ಎಲ್ಲಾ ಫ್ರೀ. ಯಾರೂ ಹೊರಗೆ ಹೋಗಲಿಕ್ಕೆ ಸಾಧ್ಯ ಇರಲಿಲ್ಲ. ನಮ್ಮವರನ್ನು ಭೇಟಿಯಾಗಲಿಕ್ಕೆ ಯಾವುದೇ ಪಾರ್ಟಿಯವರು ಬರಬಹುದಿತ್ತು. ಯಾರಾದರೂ ಧುರೀಣರು ಬಂದು ನಮಗೆ ಏನಾದರೂ ಕೊಟ್ಟರೂ ಕೂಡ ಇಸಗೊಂಡು ಸುಮ್ಮನೇ ಇರಬಹುದಾಗಿತ್ತು. ಯಾರಾದರೂ ತಕರಾರು ಮಾಡಿದರೆ, ಅದು ಹೇಳಿ ಕೇಳಿ ಭಿಕ್ಷುಕರ ಕೇಂದ್ರ ಅಪ್ಪಾ ಸುಮ್ಮನೇ ಇರಿ ಅಂತ ತಿಳಿಹೇಳಬಹುದಿತ್ತು. ಏನಾಗ್ತಿತ್ತು? ಬಹಳ ಅಂದರೆ ಒಂದೆರೆಡು ಜನ ಸಾಯಬಹುದಿತ್ತು. ಅವರು ಹಸಿವಿನಿಂದ ಸತ್ತಿಲ್ಲ. ಊಟ ಹೆಚ್ಚಾಗಿ ಸತ್ತರು ಅಂತ ಸರಕಾರಿ ಡಾಕ್ಟರಿಂದ ಸರ್ಟಿಫಿಕೆಟ್ ಕೊಡಿಸಿ ಸುಮ್ಮನಾಗಬಹುದಿತ್ತು. ಅಂದರು. ಅವರು ಹೇಳುವುದರಲ್ಲೇನೂ ತಪ್ಪಿಲ್ಲ ಅನ್ನಿಸಿ ಸುಮ್ಮನಾದೆ.

ಎಲ್ಲರಿಗೂ ಸೇರಿದ ಸಂಪತ್ತು
ಗೂಳಿಹಟ್ಟಿ ಅವರು ನಮ್ಮ ಸಿಟ್ಟು ಏನಿದ್ದರೂ ಆ ಕಲ್ಮಾಡಿ ಮೇಲೆ ನೋಡಿ. ನಾನು ಮಿನಿಸ್ಟರಾಗಿ ಕಂಟಿನ್ಯೂ ಆಗಿದ್ದರೆ ಕಾಮನ್ ವೆಲ್ತ್ ಗೇಮ್ಸ್ ನೋಡಲಿಕ್ಕೆ ಸರಕಾರಿ ಗೌರವದಿಂದ ಹೋಗುತ್ತಿದ್ದೆನೆ? ನನಗೆ ಆ ಭಾಗ್ಯ ತಪ್ಪಲಿ ಅಂತ ಅವರು ಯಡ್ಯೂರಪ್ಪ ಅವರ ಕಿವಿ ಕಚ್ಚಿ ನನ್ನ ಸಚಿವ ಸ್ಥಾನ ತಪ್ಪಿಸಿದರು. ಅವರ ಮಾತು ಕೇಳಿ ಯಡ್ಡಿ ಅವರು ನನ್ನನ್ನು ರಿಂಗಿನಿಂದ ಎತ್ತಿ ಹೊರಗೆ ಒಗೆದರು.

ಅಲ್ಲಾ ಇವರೆಲ್ಲ ನಾಯಕರಾಗಬಾರದು. ಕಲ್ಮಾಡಿ ಅವರು ಗುರಿಕಾರಾಗಬೇಕು. ಯಡ್ಡಿ ಅವರು ಕುಸ್ತಿಪಟು ಆಗಬೇಕು. ಬಂಗಾರದ ಪದಕಗಳ ಸುರಿಮಳೆ ಗ್ಯಾರಂಟಿ ನೋಡಿ. ಅಂದರು.

ಕದ್ದ ಮಾವಿನಕಾಯೇ ರುಚಿ
ಕೆಲವೇ ಕ್ಷಣಗಳಲ್ಲಿ ಅಲ್ಲಿಯ ವಾತಾವರಣವೇ ಬದಲಾಯಿತು. ಮಾವಿನಕಾಯಿ ಕದಿಯಲು ಹೋದ ಹುಡುಗರ ಗುಂಪು ತೋಟದ ಕಾವಲುಗಾರ ಬಂದಾಗ ಓಡಿ ಹೋದಂತೆ ಎಲ್ಲ ಎಮ್ಮೆಲ್ಲೆಗಳು ಓಡಿ ರಿಸಾರ್ಟಿನ ಹಿತ್ತಲಿನಲ್ಲಿದ್ದ ಸಮುದ್ರ ದಂಡೆಯ ಕಡೆ ಓಡಿದರು.

ಯಾಕೆ ಅಂತ ನೋಡಿದರೆ ಮುಂಬಾಗಿಲಿನಲ್ಲಿ ನಿಂತ ಡಾ.ಅಶೋಕ್ ಕಂಡರು. ಅವರು ಮುಂಚೆ ಎಲ್ಲಾ ಬಸ್ಸು ಓಡಿಸುವುದು, ರಿಯಲ್ ಎಸ್ಟೇಟು ವ್ಯವಹಾರ ಮುಂತಾದ ಕೆಲಸ ಮಾಡುತ್ತಿದ್ದರಂತೆ. ಆದರೆ ಈಗೀಗ ಆಪರೇಷನ್ ಮಾಡಬೇಕಾಗುತ್ತದೆ ಅಂತ ಮೆಡಿಕಲ್ ಕಾಲೇಜು ಸೇರಿಕೊಂಡಿದ್ದರಂತೆ. ಅವರನ್ನು ನೋಡಿಯೇ ಎಮ್ಮೆಲ್ಲೆಗಳು ಓಡಿ ಹೋದರೆ, ಅವರೇನಾದರೂ ಬಂದು ಇವರ ಕೈಹಿಡಿದರೆ ಏನಾಗಬಹುದು ಅಂತ ಅನ್ನಿಸಿತು.

ಪಿಎಚ್ಡಿ ಇನ್ ಬ್ಲಡ್ ಲೆಸ್ ಸರ್ಜರಿ
ಅಯ್ಯೋ ಆವಾಗ ಆರ್ಎಂಪಿ ಡಾಕ್ಟರೆಲ್ಲ ಆಪರೇಷನ್ ಮಾಡ್ತಿದ್ರಿ. ಈಗ ಡಬಲ್ ಡಿಗ್ರಿ ಬೇಕಾಗೈತೆ. ಪೇಷಂಟೇ ಸಿಗಕ್ಕಿಲ್ಲ. ಸಿಕ್ಕರೂ ಪೋಸ್ಟ್ ಆಪರೇಟಿವ್ ಎಕ್ಸ್ ಪೆನ್ಸಸ್ ಅಂತ ಸಿಕ್ಕಾಪಟ್ಟೆ ಹಣ ಕೇಳ್ತಾರೆ. ನಾವು ಎಲ್ಲಕ್ಕೂ ವ್ಯವಸ್ಥೆ ಮಾಡಿದಿರಿ.

ಮೊದಮೊದಲು ನಮಗೂ ಕಲಿಯಕ್ಕೆ ತುಂಬ ಕಷ್ಟ ಆಯಿತು. ಆದರೆ ಮಾಡಿ ಮಾಡಿ ಕಲಿತು ಬಿಟ್ಟಿದ್ದೀರಿ. ನಮ್ಮ ಸರ್ಜರಿ ತುಂಬಾ ಇಂಟರೆಸ್ಟಿಂಗ್. ಮೇಜರ್ ಆಪರೇಷನ್ ಆದರೂ ನೋವಾಗೋದಿಲ್ಲ, ರಕ್ತ ಬರೋದಿಲ್ಲ.
ಸುಮ್ಮನೇ ನೋಡಿ ಯಾವ್ಯಾವ ಪೇಷಂಟ್ ಸಿಕ್ತಾರೆ, ಹೆಂಗೆಂಗೆ ರಿಪೇರಿ ಆಗ್ತಾರೆ ಅಂತ ನೋಡ್ತಾ ಇರಿ ಅಂದರು. ಅವರು ಗ್ಲೌಸು ಹಾಕಿಕೊಳ್ಳುವವರೆಗೆ ನಾನು ಪಕ್ಕಕ್ಕೆ ಸರಿದು ನಿಂತೆ.

(ಮುಗಿಯಿತು)

Print Close

In defence of plain language

`!?#$%^&*@@??!': ಗೆಳೆಯರೇ ಇದೇನೆಂದು ದಯವಿಟ್ಟು ಗಳಹುವಿರಾ!
By ಹೃಷಿಕೇಶ್ ಬಹದ್ದೂರ್ ದೇಸಾಯಿ

ನಿಮ್ಮ ದೂರದ ಸಂಬಂಧಿಕರಾದ (ಹಾಗೆಂದು ಅವರೇ ಹೇಳಿಕೊಂಡ) ಎಲ್ಲೈಸಿ ಏಜೆಂಟರು ನಿಮ್ಮ ಮನೆಗೆ ಬಂದು ನಿಮ್ಮ ಚಹಾ ಕುಡಿದು, ನಿಮ್ಮದೇ ಹಣ ಪಡೆದು, ಬಿಳೀ ಹಾಳೆಯ ಮೇಲೆ ನಿಮ್ಮ ಸಹಿ ಮಾಡಿಸಿಕೊಂಡಿದ್ದು ಎಷ್ಟು ಸಾರಿ? ಅದೆಷ್ಟು ಸಾರಿ ಅವರು ಹೇಳಿದ ವಿಷಯಗಳು ನಿಮಗೆ ಅರ್ಥವಾಗಿವೆ? ಅದೆಷ್ಟು ಸಾರಿ ಅವರು ನೀಡಿದ ಹಾಳೆಗಳ ಮೇಲೆ ಪ್ರಿಂಟಾದ ವಿಷಯಗಳನ್ನು ನೀವು ಓದಿದ್ದೀರಿ? ಓದಿದ ಎಷ್ಟು ವಿಷಯ ನಿಮಗೆ ಎಷ್ಟು ಸಾರಿ ಅರ್ಥವಾಗಿದೆ? ಅದು ನಿಮ್ಮ ತಪ್ಪಲ್ಲ. ಆ ಪಾಲಿಸಿಗಳನ್ನು ಬರೆದವರ ತಪ್ಪು.

ಇದು ಯಾಕೆ? ಯಾಕೆಂದರೆ, ಜಗತ್ತಿನ ಎಲ್ಲ ಮಾರಕ ರೋಗಗಳಿಗಿಂತಲೂ ಭಯಂಕರ ರೋಗ ಈಗ ನಮಗೆಲ್ಲ ಅಂಟಿಕೊಂಡಿದೆ.

ಅದರ ಲಕ್ಷಣಗಳೇನೆಂದರೆ
1. ತನಗೆ ಒಂದು ಚೂರೂ ಅರ್ಥವಾಗದ ವಿಷಯದ ಬಗ್ಗೆ ಎಲ್ಲಾ ಗೊತ್ತಿದ್ದವರಂತೆ ಜೋರು ದನಿಯಲ್ಲಿ ಮಾತಾಡುವುದು ಹಾಗೂ
2. ತಾವು ಹೇಳುವ ವಿಷಯಗಳು ಇತರರಿಗೆ ತಿಳಿಯುತ್ತಿದ್ದಾವೋ ಇಲ್ಲವೋ ಎಂಬುದನ್ನು ಗಮನಿಸದೇ ಮಾತಾಡುತ್ತಾ ಹೋಗುವುದು.

ಈ ವ್ಯಾಧಿಯನ್ನು ನೀವು ಸುದ್ದಿ ಮಾಧ್ಯಮಗಳಿಂದ ಹಿಡಿದು, ಜಾಹೀರಾತುಗಳು, ಸರಕಾರದ ನೀತಿಗಳು, ಈಗ ತಾನೆ ಯುರೋಪ್ ಯಾತ್ರೆ ಮುಗಿಸಿಕೊಂಡು ಬಂದ ವಿದೇಶಾಂಗ ವ್ಯವಹಾರ ಮಂತ್ರಿಗಳ ಹೇಳಿಕೆಗಳು, ಸುಪ್ರೀಂ ಕೋರ್ಟ್ ತೀರ್ಪುಗಳು, ಯುನಿವರ್ಸಿಟಿಯ ಬುದ್ಧಿಜೀವಿಗಳ ಮಾತಿನಲ್ಲಿ, ಸಮಾಜದ ಅಭಿಪ್ರಾಯ ರೂಪಿಸುವ ಜವಾಬ್ದಾರಿ ಹೊತ್ತುಕೊಂಡಿರುವ ನಾಯಕರ ಸೆಮಿನಾರು ಪೇಪರ್ ಗಳಲ್ಲಿ, ಹಾಗೂ ಇತರ ಕಡೆಗಳಲ್ಲಿ ಕಾಣುತ್ತೀರಿ.

ಉದಾಹರಣೆಗೆ ರೇಡಿಯೋ ಹವಾಮಾನ ವರದಿಯಲ್ಲಿ `ಉತ್ತರ ಒಳನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆ' ಎಂದು ವರ್ಷಾನುಗಟ್ಟಲೇ ಓದಿದ ಉದ್ಘೋಷಕಿಗೆ ತಾನು ಹೇಳುತ್ತಿರುವುದರ ಅರ್ಥ ಒಂದು ದಿನವಾದರೂ ತಿಳಿದಿರಬಹುದೇ?

ದಶಕಗಳಿಂದ `ಪಟ್ಟಭದ್ರ ಹಿತಾಸಕ್ತಿ' ಎಂದು ಪತ್ರಿಕೆ ಹೆಡಲೈನ್ ಗಳಲ್ಲಿ ಓದಿ ಓದಿ ಬೇಜಾರಾದ ಮೇಲೂ ಆ ಶಬ್ದದ ಅರ್ಥ ಏನು, ತಿಳಿಸಿ, ಎಂದು ಯಾರಾದರೂ ವಾಚಕರು ಸಂಪಾದಕರಿಗೆ ಪತ್ರ ಬರೆದರೆ?

ಪಾಕಿಸ್ತಾನದೊಂದಿಗೆ ತೆಗೆದುಕೊಂಡ `ಕಾನ್ಫಿಡೆನ್ಸ್ ಬಿಲ್ಡಿಂಗ್ ಮೆಸರ್ಸ್' ಎಲ್ಲ ನಿರೀಕ್ಷಿತ ಯಶಸ್ಸು ಕಾಣದೇ ಅದಕ್ಕೆ `ಮೋಸ್ಟ್ ಫೇವರ್ಡ್ ನೇಷನ್ ಸ್ಟೇಟಸ್' ಕೊಡಲು ಸಾಧ್ಯವಾಗಿಲ್ಲ ಎಂದು ಸಂಸತ್ತಿನಲ್ಲಿ ವಿದೇಶಾಂಗ ಮಂತ್ರಿ ಹೇಳಿದಾಗ `ಹಂಗಂದ್ರೇನು, ಇನ್ನೊಮ್ಮೆ ಹೇಳಿ' ಅಂತ ಯಾವುದಾದರೂ ಸದಸ್ಯರು ಕೇಳಿದ್ದು ನಿಮಗೆ ನೆನಪಿದೆಯಾ?

`ತಮಿಳುನಾಡಿಗೆ 205 ಟಿಎಂಸಿ ನೀರು ಬಿಡಲು ರಾಜ್ಯ ನಕಾರ' ಎಂದು ಹಗಲೆಲ್ಲಾ ಬರೆಯುವ ಪತ್ರಕರ್ತರಿಗೆ ಕಾವೇರಿ ನೀರು ಒಪ್ಪಂದ, ನದಿ ನೀರು ಹಂಚಿಕೆ ನ್ಯಾಯಾಧಿಕರಣದ ತೀರ್ಪು, ಇತ್ಯಾದಿ ವಿಷಯಗಳ ಬಗ್ಗೆ ಗೊತ್ತಿರುತ್ತವೆಯೇ?

`ರಕ್ತ ಕೊಟ್ಟೇವು, ನೀರು ಕೊಡೆವು' ಎಂದು ಹೇಳುವ ರೈತ ನಾಯಕರಿಗೆ ಒಂದು ಟೀಮ್ಮಿಸಿ ಎಂದರೆ ಎಷ್ಟು ಲೀಟರ್ ನೀರು, ಒಂದು ವೇಳೆ ತಲೈವಾರ್ ಕರುಣಾನಿಧಿ ಅವರು ನೀರು ಬೇಡ, ಅದೇನೋ ಕೊಡ್ತೇನಿ ಅಂದ್ರಲ್ಲಾ, ಅದನ್ನೇ ಕೊಡಿ ಎಂದರೆ ಎಷ್ಟು ರಕ್ತ ಕೊಡಬೇಕಾಗುತ್ತದೆ ಅಂತ ಗೊತ್ತೆ? ಹೋಗಲಿ, ಅವರಿಗೆ ಇದನ್ನೆಲ್ಲಾ ತಿಳಿಸುವ ಜವಾಬ್ದಾರಿ ಹೊತ್ತುಕೊಂಡಿರುವ ಪೇಪರುಗಳು, ಚಾನ್ನೆಲ್ಲುಗಳ ಅನ್ಯಾಲಿಸ್ಟುಗಳಿಗಾದರೂ ಗೊತ್ತೆ?

ಇದೇನು ಹೊಸ ರೋಗವೇ? ಹಂಗೇನಿಲ್ಲ. ಸುದ್ದಿ ಎನ್ನುವುದನ್ನು ಮಾರಾಟದ ಸರಕನ್ನಾಗಿ ಮಾಡಿದ ವಿಶ್ವದ ಮೊದಲ ಯಶಸ್ವೀ ಮೀಡಿಯಾ ಬ್ಯಾರನ್ ಎನ್ನಿಸಿಕೊಂಡ ಲಾರ್ಡ್ ನಾರ್ಥಕ್ಲಿಫ್ 19ನೇ ಶತಮಾನದ ಬ್ರಿಟನ್ನಿನ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬನಾಗಿದ್ದ. ಅಂದಿನ ಗುಣಮಾನಕ್ಕೆ ತಕ್ಕಂತೆ ಅವನು ಎರಡು ಮಾತು ಹೇಳಿದ.

1. ``ತನಗೇ ತಿಳಿಯಲಾರದ ವಿಷಯಗಳನ್ನು ಇತರರಿಗೆ ತಿಳಿ ಹೇಳುವ ವೃತ್ತಿಗೆ ಪತ್ರಿಕೋದ್ಯಮ ಎಂದು ಹೆಸರು.''

2. ``ಎಲ್ಲೊ ಒಂದು ಕಡೆ ಯಾರೋ ಒಬ್ಬರು ಯಾವುದೋ ಒಂದು ವಿಷಯವನ್ನು ಮುಚ್ಚಿ ಇಡಲಿಕ್ಕೆ ಪ್ರಯತ್ನ ನಡೆಸಿದ್ದರೆ ಅದು ಸುದ್ದಿ. ಉಳಿದಿದ್ದೆಲ್ಲ ಜಾಹೀರಾತು.''
ಅವನ ಮಾತುಗಳು ಇಂದಿಗೂ ನಿಜವೆನ್ನಿಸುತ್ತವೆ.

ಇದಕ್ಕೆ ಪರಿಹಾರವೇನು? ಈ ಅರೆತಿಳವಳಿಕೆ(ಅರವಳಿಕೆ?)ಯ ಜಂಗಲ್ಲಿನಲ್ಲಿ ನಮ್ಮ ಸುತ್ತಮುತ್ತಲಿನ ಜಗತ್ತನ್ನು ಅರ್ಥ ಮಾಡಿಕೊಡಲು ಕೆಂಡಸಂಪಿಗೆಯ ಸ್ನೇಹಿತರು ಒಂದು ಸಣ್ಣ ಪ್ರಯತ್ನ ಮಾಡಲಿದ್ದಾರೆ. ವಿವಿಧ ವಿಷಯಗಳ ಬಗ್ಗೆ ಅತೀವ ಆಸಕ್ತಿ ಇದ್ದವರು ಏನೂ ತಿಳಿಯದವರಿಗೆ ಸಣ್ಣ ಸಣ್ಣ ಕ್ಯಾಪ್ಸೂಲ್ ಗಳಲ್ಲಿ ತಿಳಿ ಹೇಳಲಿದ್ದಾರೆ.

ಹೊಸ ವಿಷಯಗಳ ಬಗ್ಗೆ ಕುತೂಹಲ ಕೆರಳುವಂತೆ, ಕಡಿಮೆ ಶಬ್ದಗಳಲ್ಲಿ ವಿವರಿಸಲಿದ್ದಾರೆ. ಇದರಲ್ಲಿ ನೀವೂ ಭಾಗವಹಿಸಬಹುದು. ನಿಮಗೆ ತಿಳಿದ ವಿಷಯಗಳ ಬಗ್ಗೆ, ನಿಮ್ಮ ಹಾಬಿಯ ಬಗ್ಗೆ, ನೀವು ಅತೀವ ಪ್ರೇಮದಿಂದ ಹುಡುಕಾಡಿ ಕಲೆ ಹಾಕಿರುವ ಮಾಹಿತಿಗಳ ಬಗ್ಗೆ, ಇತರರಿಗೆ ತಿಳಿಯುವಂತೆ ಸರಳವಾಗಿ, ಜೀವಂತಿಕೆಯಿಂದ ಹೇಳಿ.

ಬರಹಗಳು ಅಕಾಡೆಮಿಕ್ ಆಗಿರುವುದು ಬೇಡ. ಸೆಮಿನಾರ್ ಪೇಪರ್ ಗಳಂತೆ ಬೋರಿಂಗ್ ಆಗಿರಬೇಕಿಲ್ಲ. ವಿಕಿಪೀಡಿಯಾ ಎಂಟ್ರಿಗಳ ಥರ ಮಸಾಲೆ ರಹಿತವೂ ಆಗಬೇಕಾದ್ದಿಲ್ಲ.

ಇದಕ್ಕೆ ಇಂಥದ್ದೇ ಅಂತ ಫಾರ್ಮ್ಯಾಟ್ ಇಲ್ಲ. ಕತೆ-ದೃಷ್ಟಾಂತಗಳ ಮೂಲಕ, ಅಥವಾ ಪ್ರಶ್ನೆ-ಉತ್ತರ ರೂಪದಲ್ಲಿ, ಸ್ವಗತದ ರೂಪದಲ್ಲಿ, ವ್ಯಾಖ್ಯಾನದ ರೂಪದಲ್ಲಿ, ಅಥವಾ ಇನ್ನಾವುದೋ ರೂಪದಲ್ಲಿ ಇರಬಹುದು. ನಿಮಗೆ ಹೇಳಲು ಅನುಕೂಲವಾದದ್ದು ಇತರರಿಗೆ ಕೇಳಲು ಅನುಕೂಲ.

ಬೇಂದ್ರೆಯವರು ತಮ್ಮ ಕವನವೊಂದರಲ್ಲಿ ಹೊಸ ಹುಟ್ಟಿನ ಬಗ್ಗೆ ವಿವರಿಸಿದ್ದು ಹೀಗೆ.

`ಕುದುರಿಯವರು ಬಂದಾರವ್ವಾ
ಕುದುರಿಯವರು ಬಂದಾರ'

`ಉಸುರಿಗೊಂದು ಹೆಸರು ಕೊಟ್ಟು,
ಹೆಸರಿಗೊಂದು ಕುಸುರು ಕೊಟ್ಟು,
ಏನೇನೋ ಅಂದಾರವ್ವಾ,
ಏನೇನೋ ಅಂದಾರ,
ಕುದುರಿಯವರು ಬಂದಾರ'

ಇಲ್ಲಿ `ಕುದುರಿಯವರು' ಎಂದರೆ ಕಲಾವಿದರು, ವಿಜ್ಞಾನಿಗಳು. `ಉಸಿರು' ಎಂದರೆ ಜೀವನ, `ಹೆಸರು ಕೊಡುವುದು' ಎಂದರೆ ವಿಷಯವೊಂದನ್ನು ಗುರುತಿಸಿ, ಹುಡುಕಿ ತೆಗೆದು, ತೊಳೆದು, ಇತರರಿಗೆ ತಿಳಿಯುವಂತೆ ಮಾಡುವುದು. `ಕುಸುರು ಕೊಡುವುದು' ಎಂದರೆ ಅದನ್ನು ಚಂದ ಕಾಣುವಂತೆ ಮಾಡುವುದು. `ಏನೇನೋ ಅಂದಾರ' ಎನ್ನುವುದು ಹೊಸ ವಿಷಯವೊಂದನ್ನು ತಿಳಿದ ಸಾದಾ ಮನುಷ್ಯನ ಬೆರಗು. ತಮಗೆ ಕಂಡದ್ದನ್ನು ಇತರರಿಗೆ ಖುಷಿಯಿಂದ ತೋರಿಸಲು ಇಷ್ಟು ಸಾಕಲ್ಲವೇ? ಬರೆದ ಮೇಲೆ ಯಾವ ಮುಲಾಜೂ ಇಲ್ಲದೆ ನಮ್ಮ ಎಡಿಟರ್ ಸಾಹೇಬರ editor@kendasampige.com ಎಂಬ ಈಮೇಲ್ವಿಳಾಸಕ್ಕೆ ಕಳುಹಿಸುವಿರಾ ಗೆಳೆಯರೇ ಮತ್ತು ಗೆಳತಿಯರೇ...
Print Close

Democracy for Dummies-1

ಬಡಪಾಯಿಗಳಿಗೆ ಕೆಲವು ಡೆಮಾಕ್ರಸಿ ಪಾಠಗಳು
By ಹೃಷಿಕೇಶ್ ಬಹದ್ದೂರ್ ದೇಸಾಯಿ

ಕರುನಾಡಲ್ಲಿ ಉಂಟಾಗುತ್ತಿರುವ ತಳಮಳಗಳ ಅರಿವಾಗದೆ ಪಿಳಿಪಿಳಿ ಕಣ್ಣು ಬಿಡುತ್ತಿರುವ ಬಡಪಾಯಿಗಳಿಗಾಗಿ ಹೃಷಿಕೇಶ್ ಬಹದ್ದೂರ್ ದೇಸಾಯಿ ಹೇಳಿಕೊಡುವ ಕೆಲವು ಪ್ರಾಥಮಿಕ ಪಾಠಗಳು ಇಲ್ಲಿವೆ

ಸೋಮವಾರ ಬೆಳಿಗ್ಗೆಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಖಟಾಖಟಿಯನ್ನು ಟಿವಿಯಲ್ಲಿ ನೋಡಿದವರಿಗೆ ಗೊಂದಲ ಆಗಿರಬಹುದು, ಏನೂ ತಿಳಿಯದೇ ಇರದಿರಬಹುದು ಅಥವಾ ಪೂರ್ವಯೋರೋಪಿನ ದೇಶದ ಕಾಮೆಡಿ ಚಿತ್ರ ನೋಡಿದ ಅನುಭವ ಆಗಿರಬಹುದು. ಅಂಥವರು ಟಿವಿ ಚಾನೆಲ್ ಅನ್ನು ಮ್ಯೂಟ್ ಆಗಿಟ್ಟಿರಬಹುದು. ಹಾಗೆಂದು ಅವರಿಗೇನೂ ಮನರಂಜನೆ ಕಮ್ಮಿ ಆಗಿರಲಿಕ್ಕಿಲ್ಲ.

ಹಾಗಾದರೆ ನಿಜವಾಗಿಯೂ ನಡೆದದ್ದೇನು? ಎನ್ನುವ ವಿಷಯದ ಬಗ್ಗೆ ಬರೆಯೋಣ ಎನ್ನಿಸಿತು. ಹೇಗೂ ಇದು ಕಂಪ್ಯೂಟರ್ಸ್ ಫಾರ್ ಡಮ್ಮೀಸ್ ಸರಣಿಯಲ್ಲಿ ಡೆಮಾಕ್ರೆಸಿ ಫಾರ್ ದ ಇನ್ ಡಿಫರೆಂಟ್ ಎಂದು ಪುಸ್ತಕರೂಪದಲ್ಲಿ ಹೊರಬರಲಿದೆ. ಕೆಂಡಸಂಪಿಗೆ ಓದುಗರಿಗಾಗಿ ಇದೊಂದು ಪೈರೆಟೆಡ್ ಕಾಪಿ.

೧. ಐದೈದು ವರ್ಷಕ್ಕೆ ಬರಬೇಕಾದ ಆದರೆ ಹಗಲೆಲ್ಲ ಬರುವ ಕಾಮೆಡಿ ಬೀದಿ ನಾಟಕಗಳಿಗೆ ಚುನಾವಣೆಗಳು ಎಂದು ಹೆಸರು.

೨. ಇಂಥಾ ಚುನಾವಣೆಗಳಲ್ಲಿ ನಾವು ನಮ್ಮ ಪರವಾಗಿ ಶಾಸನ ಮಾಡುವ ಹಾಗೂ ವಿವಿಧ ಇಲಾಖೆಗಳು ವೆಚ್ಚ ಮಾಡುವ ಹಣದ ಲೆಕ್ಕ ತಪಾಸು ಮಾಡಲು ಕಳಿಸುವ ಜನರಿಗೆ ಶಾಸಕ ಅಥವಾ ಎಮ್ಮೆಲ್ಲೆ ಎಂದು ಹೆಸರು.

೩. ತಾಯಿ ಭುವನೇಶ್ವರಿಯ ಕೃಪೆಯಿಂದ ಆರಿಸಿ ಬಂದ ಇಂಥ ಪುಣ್ಯಾತ್ಮರು ರಾಜ್ಯದಲ್ಲಿ ೨೨೪ ಜನ ಇದ್ದಾರೆ. ಇವರಲ್ಲಿ ೧೧೭ ಜನ ಬಿಜೆಪಿಯವರು. ೭೪ ಕಾಂಗ್ರೆಸ್ಸಿಗರು. ೨೮ ಜನ ಜಾತ್ಯತೀತ ಜನತಾದಳಕ್ಕೆ ಸೇರಿದವರು. ಇತರ ಆರು ಜನ ಪಕ್ಷೇತರರು. ಇವರಲ್ಲಿ ಐದು ಜನ ಬಿಜೆಪಿ ಸರಕಾರವನ್ನು ಬೆಂಬಲಿಸಿದ್ದರು.

೪. ಈ ಪಕ್ಷಾತೀತರು ಹಾಗೂ ಬಿಜೆಪಿಯ ೧೧ ಜನ ಶಾಸಕರ ಸದಸ್ಯತ್ವವನ್ನು ಸ್ಪೀಕರ್ ಕೆಜಿ ಬೋಪಯ್ಯನವರು ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ರದ್ದು ಮಾಡಿದ್ದಾರೆ.

೫. ಬೂಕನಕೆರೆ ಸಿದ್ದಲಿಂಗಪ್ಪ ಯಡ್ಡೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ. ಅದಕ್ಕೂ ಮೊದಲು ಅವರು ಒಬ್ಬ ಎಮ್ಮೆಲ್ಲೆ.

೬. ಒಂದೇ ರಾಜಕೀಯ ಪಕ್ಷದ ಎಮ್ಮೆಲ್ಲೆಗಳು ಇರುವ ಗುಂಪಿಗೆ ಶಾಸಕಾಂಗ ಪಕ್ಷ ಅಥವಾ ಎಲ್.ಪಿ ಎಂದು ಹೆಸರು. ಅವರು ಚುನಾಯಿಸಿದ ನಾಯಕನನ್ನು ರಾಜ್ಯಪಾಲರು ಮುಖ್ಯಮಂತ್ರಿ ಎಂದು ನೇಮಿಸುತ್ತಾರೆ. ಬಿ.ಎಸ್.ವೈ ಅವರು ಈ ರೀತಿ ಮುಖ್ಯಮಂತ್ರಿ ಆದವರು. ಮುಖ್ಯಮಂತ್ರಿಯಾದವನ ಪಕ್ಷವೇ ಆಡಳಿತ ಪಕ್ಷ. ಆಡಳಿತದಲ್ಲಿ ಭಾಗವಹಿಸಲು ಬಯಸದ ಪಕ್ಷವೇ ವಿರೋಧ ಪಕ್ಷ. ಮಜಾ ಎಂದರೆ ವಿರೋಧ ಪಕ್ಷ ಎನ್ನುವ ಶಬ್ದ ಸಂವಿಧಾನದಲ್ಲಿ ಇದೆ. ಆಡಳಿತ ಪಕ್ಷ ಎನ್ನುವ ಶಬ್ದ ಇಲ್ಲ.

೭. ಈ ರೀತಿ ಮು.ಮ ಆದವರು ತಮ್ಮ ಎಲ್.ಪಿ.ಯ ವಿಶ್ವಾಸವನ್ನೂ, ಸದನದಲ್ಲಿ ಬಹುಮತವನ್ನೂ ಇಟ್ಟುಕೊಳ್ಳಬೇಕಾಗುತ್ತದೆ. ಅದೆರಡರಲ್ಲಿ ಒಂದನ್ನು ಅವರು ಕಳೆದುಕೊಂಡ ದಿನದಿಂದ ಅವರ ಕುರ್ಚಿಯ ಕೆಳಗಿನ ಭೂಮಿ ಕಂಪಿಸಲಾರಂಭಿಸುತ್ತದೆ.

೮. ಈ ರೀತಿ ತಾವೇ ಆರಿಸಿದ ಮು.ಮ.ರಲ್ಲಿ ವಿಶ್ವಾಸ ಕಳೆದುಕೊಂಡವರು ಭಿನ್ನಮತೀಯರು, ಬಂಡಾಯಗಾರರು, ಅತೃಪ್ತರು ಎಂದೆಲ್ಲಾ ಕರೆಸಿಕೊಳ್ಳುತ್ತಾರೆ. ಅವರು ಆ ಮುಖ್ಯಮಂತ್ರಿಯನ್ನು ಕೆಳಗೆ ಇಳಿಸಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ ಇವರೆಲ್ಲ ಭೂಪರನ್ನು ಆರಿಸಿ ಕಳಿಸಿದ ಮತದಾರರಿಗೆ ಅವರನ್ನು ವಾಪಸ್ ಕರೆಸಿಕೊಳ್ಳುವ ಅವಕಾಶ ಇಲ್ಲ. ಗ್ರೀಸ್, ಸ್ವೀಡನ್ ಮುಂತಾದ ದೇಶಗಳಲ್ಲಿ ಈ ಅಧಿಕಾರ ಮತದಾರನಿಗೆ ಇದೆ.

೯. ರಾಜ್ಯಪಾಲರು ಎಂದರೆ ಕೇಂದ್ರ ಸರಕಾರದಲ್ಲಿ ನಿವೃತ್ತಿಯ ವಯಸ್ಸನ್ನು ಮೀರಿದ, ದೆಹಲಿ ರಾಜಕೀಯ ಮಾಡಲು ತಾಕತ್ತು ಕಳೆದುಕೊಂಡ, ಪಿಂಚಣಿ ಸೌಲಭ್ಯಕ್ಕಾಗಿ ಹಪಹಪಿಸುವ ಪುಢಾರಿಗಳು ಎಂದು ಅರ್ಥವಲ್ಲ. ಅಥವಾ ಹೈದರಾಬಾದಿನಲ್ಲಿದ್ದಂತೆ ರಾಜಭವನವನ್ನು ಸ್ವಾಮಿ ನಿತ್ಯಾನಂದನ ಆಶ್ರಮವನ್ನಾಗಿ ಪರಿವರ್ತಿಸಿದವರು ಅಂತಲೂ ಅಲ್ಲ. ರಾಜ್ಯದ ಆಡಳಿತ ಸಂವಿಧಾನದ ಪ್ರಕಾರ ನಡೆಯುತ್ತಿದೆಯೋ ಇಲ್ಲವೋ ಎಂದು ನೋಡಲು ರಾಷ್ಟ್ರಾಧ್ಯಕ್ಷರು ನೇಮಿಸಿದ ಸಾಂವಿಧಾನಿಕ ಅಧಿಕಾರಿ.

೧೦. ಈ ಅಧಿಕಾರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ, ಸಂವಿಧಾನ ಬದ್ಧವಾಗಿ ಆಡಳಿತ ನಡೆಯುತ್ತಿಲ್ಲ, ರಾಜ್ಯ ಭಾರತವನ್ನು ಬಿಟ್ಟು ಹೊರಗೆ ಹೋಗುವ ಸಂಚು ನಡೆಸುತ್ತಿದೆ ಎಂಬ ಕಾರಣಕ್ಕಾಗಿ ರಾಜ್ಯದ ಆಡಳಿತವನ್ನು ಕೊನೆಗಾಣಿಸಿ ರಾಷ್ಟ್ರಪತಿ ಆಡಳಿತವನ್ನು ಘೋಷಿಸಬಹುದು.

೧೧. ಹಿಂದಿನ ವರ್ಷಗಳಲ್ಲಿ ಮುಖ್ಯಮಂತ್ರಿಯ ಮುಖ ಸರಿಯಾಗಿಲ್ಲ ಎಂಬ ಕಾರಣದಿಂದಲೂ ದೆಹಲಿಗೆ ವರದಿ ಕಳಿಸಿದ ರಾಜ್ಯಪಾಲರು ಇದ್ದರು. ರಾಜ್ಯಪಾಲರ ವರದಿಗೆ ಕಾಯದೇ ರಾಷ್ಟ್ರಪತಿ ಆಡಳಿತ ಹೇರಿದ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳೂ ಇದ್ದರು. ಬೊಮ್ಮಾಯಿ ಕೇಸ್ ನಲ್ಲಿ ಸುಪ್ರೀಂ ಕೋರ್ಟ್ ನ ನಿರ್ಣಯದ ನಂತರ ಇದು ಸ್ವಲ್ಪ ಕಡಿಮೆ ಆದಂತೆ ಕಾಣುತ್ತದೆ ಎಂದು ಬಲ್ಲವರು ಹೇಳುತ್ತಾರೆ.

೧೨. ಚುನಾವಣೆಯ ನಂತರ ಯಾವೊಬ್ಬ ಶಾಸಕನೂ ಇತರ ಶಾಸಕರ ವಿಶ್ವಾಸ ಗಳಿಸಿ ಮುಖ್ಯಮಂತ್ರಿ ಆಗಲು ಅರ್ಹತೆ ಗಳಿಸದಿದ್ದಾಗ ರಾಜ್ಯಪಾಲರು ತಮ್ಮ ಮನ ಬಂದಂತೆ ಮಾಡಬಹುದು. ೧) ಹಾದಿಯಲ್ಲಿ ಹೋಗುವವನನ್ನು ಮುಖ್ಯಮಂತ್ರಿ ಮಾಡಿ ಇನ್ನಷ್ಟು ದಿನಗಳಲ್ಲಿ ಬಹುಮತ ಸಾಬೀತು ಪಡಿಸಲು ಹೇಳಬಹುದು. ೨) ಶಾಸನ ಸಭೆಗೆ ಲಕ್ಪ ಹೊಡೆದಿದೆ ಎಂದು ಹೇಳಿ ಸುಮ್ಮನಿರಬಹುದು. ಇದಕ್ಕೆ ಸಸ್ಪೆಂಡೆಡ್ ಎನಿಮೇಷನ್ ಎನ್ನುತ್ತಾರೆ. ೩) ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬಹುದು. ೪) ಇದಾದ ನಂತರ ಇನ್ನೊಮ್ಮೆ ಚುನಾವಣೆ ನಡೆಸುವ ನಿರ್ಧಾರ ತೆಗೆದುಕೊಳ್ಳಬಹುದು.

೧೩. ನಮ್ಮ ರಾಜ್ಯದ ವಿಧಾನಸಭೆಯ ಸದಸ್ಯರ ಸಂಖ್ಯೆ ೨೨೫. ಇದರಲ್ಲಿ ಒಬ್ಬರು ಆಂಗ್ಲೋ ಇಂಡಿಯನ್ ಕೋಟಾದಲ್ಲಿ ನಾಮ ನಿರ್ದೇಶಿತವಾಗಿರುತ್ತಾರೆ ಇನ್ನುಳಿದವರು ಚುನಾವಣೆಯಲ್ಲಿ ಗೆದ್ದಿರುತ್ತಾರೆ. ಇನ್ನೊಬ್ಬರು ಸಭಾಧ್ಯಕ್ಷರು ಅಥವಾ ಸ್ಪೀಕರ್. ನಾಮನಿರ್ದೇಶಿತ ಸದಸ್ಯರು ಸರಕಾರ ಉಳಿಸಲು ಅಥವಾ ಕೆಡವಲು ಮತ ಹಾಕುವಂತಿಲ್ಲ. ಮಸೂದೆಗಳನ್ನು ಪಾಸು ಮಾಡಲು ಅಥವಾ ಫೇಲು ಮಾಡಲು ಸಹ ಅವರು ಮತ ನೀಡುವಂತಿಲ್ಲ. ಸ್ಪೀಕರ್ ಸಾಹೇಬರು ಸ್ಪಷ್ಟ ನಿರ್ಧಾರಕ್ಕೆ ಬರಲಾರದ ವಿಧೇಯಕ ಹಾಗೂ ವಿಶ್ವಾಸ ಮಂಡನೆ ಸಮಯದಲ್ಲಿ ಮಾತ್ರ ಮತ ನೀಡಬಹುದು. ಇದಕ್ಕೆ ವೆಟೋ ವೋಟ್ ಎಂದು ಹೆಸರು.

೧೪. ಇನ್ನು ಆಯಾರಾಮ್ ಗಯಾರಾಮ್ ಗಳನ್ನು ನಿಯಂತ್ರಿಸಲು ಪಕ್ಷಾಂತರ ನಿಷೇಧ ಕಾಯಿದೆ ಜಾರಿಗೆ ಬಂತು. ಆಯಾರಾಮ್ ಎಂಬ ಹೆಸರಿನ ಸಂಸತ್ ಸದಸ್ಯ ನಿಜವಾಗಿಯೂ ಇದ್ದರು. ಅವರು ತುಂಬ ಸಾರಿ ಪಕ್ಷ ಬದಲಾಯಿಸಿದ್ದರು. ಅದಕ್ಕೇ ಈ ಮಾತು.

೧೫. ಪಕ್ಷಾಂತರ ನಿಷೇಧ ಕಾಯಿದೆ ಪ್ರಕಾರ ಒಂದು ಪಕ್ಷದ ಅಭ್ಯರ್ಥಿಯಾಗಿ ಚುನಾಯಿತಗೊಂಡ ಸದಸ್ಯರು ಇನ್ನೊಂದು ಪಕ್ಷ ಸೇರಿದರೆ, ತಮ್ಮ ಪಕ್ಷದ ನಿರ್ಧಾರದ ವಿರುದ್ಧವಾಗಿ ಸದನದಲ್ಲಿ ಮತ ನೀಡಿದರೆ, ಅಥವಾ ತಾವಾಗಿಯೇ ಪಕ್ಷ ತೊರೆದು ಬೇರೆ ಪಕ್ಷ ಸೇರದೇ ಇದ್ದರೂ ಸದಸ್ಯತ್ವ ರದ್ದಾಗುವುದು. ಪಕ್ಷದಿಂದ ಅಧ್ಯಕ್ಷರು ಕೊಕ್ ಕೊಟ್ಟರೆ ಮಾತ್ರ ನಿರುಮ್ಮಳವಾಗಿ ಇರಬಹುದು. - ಆಡಳಿತ ಪಕ್ಡದ ಸರಕಾರದ ನೀತಿಯ ವಿರುದ್ಧ ಶಾಸಕರು ಮಾತಾಡುವುದು, ಸರಕಾರದ ನೀತಿಯಿಂದ ಜನರಿಗೆ ಅನ್ಯಾಯವಾಗಿದೆ ಎಂದು ನಾಯಕರು ಮಂತ್ರಿ, ಅಧಿಕಾರಿಗಳ ಮುಂದೆ ಹೇಳುವುದು, ಮುಖ್ಯಮಂತ್ರಿಗೆ ಬೆಂಬಲ ಹಿಂಪಡೆಯುವುದು ಇವೆಲ್ಲವೂ ಸದಸ್ಯತ್ವದ ರದ್ದತಿಗೆ ಕಾರಣಗಳು ಎಂದು ಸೈಬರ್ ಮುತ್ಸದ್ದಿ ಹಾಗೂ ಟೀವಿ ಹೋರಾಟಗಾರ ಅರುಣ ಜೇಟ್ಲಿ (ಸೆಲಿನಾ ಜೇಟ್ಲಿಗೆ ಸಂಬಂಧ ಇಲ್ಲ!) ಅವರು ವಾದ ಮಂಡಿಸುತ್ತಿದ್ದಾರೆ. (ಮೊಂಡ ವಾದಕ್ಕೂ, ವಾದ ಮಂಡಿಸುವುದಕ್ಕೂ ಅರ್ಧ ಅಕ್ಷರ ವ್ಯತ್ಯಾಸ ಅಲ್ಲವೇ?)

೧೬. ಪಕ್ಷೇತರ ಸದಸ್ಯರು ಚುನಾಯಿತರಾಗಿ ಆರು ತಿಂಗಳ ಒಳಗೆ ಯಾವುದಾದರೂ ಪಕ್ಷ ಸೇರಿದರೆ ಈ ಕಾನೂನು ಜಾರಿಯಾಗದು. ಬಿ.ಎಸ್.ವೈ ಅವರ ಸರಕಾರದಲ್ಲಿ ಮಂತ್ರಿಯಾಗಿದ್ದ ಐದು ಜನ ಪಕ್ಷೇತರರು ಈ ರೀತಿ ಯಾವುದೇ ಪಕ್ಷ ಸೇರಿರಲಿಲ್ಲ.

೧೭. ಪಕ್ಷೇತರರು ಯಾವುದೇ ಸದಸ್ಯನಿಗೆ "ನೀನು ಮುಖ್ಯಮಂತ್ರಿಯಾಗು. ನಿನ್ನ ಮೆರವಣಿಗೆಯಲ್ಲಿ ನಾನು ಡಾನ್ಸ್ ಮಾಡುತ್ತೇನೆ" ಎಂದು ಹೇಳಬಹುದು. ಅದನ್ನು ತಡೆಯಲು ಯಾವ ಕಾನೂನಿನಲ್ಲಿಯೂ ಅವಕಾಶ ಇಲ್ಲ.

೧೮.ರದ್ದತಿ ಆಗಲಾರದ ಸನ್ನಿವೇಶಗಳು ಎಂದರೆ: ೧)ಶಾಸಕಾಂಗ ಪಕ್ಷದ ೬೬ % ಜನ ಹೊರ ಹೋಗಿ ಪಕ್ಷ ಒಡೆಯುವುದು. ೨)ಹಾಗೆಯೇ ೬೬% ಸದಸ್ಯರು ಹೊರಹೋಗಿ ಇನ್ನೊಂದು ಪಕ್ಷದ ಜತೆ ಸೇರಿ ವಿಲೀನ ವಾಗಬಹುದು. ಇದು ೨೦೦೩ ರ ತಿದ್ದುಪಡಿಯಲ್ಲಿ ಬದಲಾಯಿತು.

೧೯. ಒಂದು ಪಕ್ಷದಿಂದ ಆರಿಸಿ ಬಂದವರು ಬೇರೆ ಪಕ್ಷ ಸೇರಿ ರಾಜೀನಾಮೆ ಕೊಟ್ಟು ಮತ್ತೆ ಹೊಸ ಪಕ್ಷದ ಚಿನ್ಹೆ, ಹಮ್ಮು, ಹೊಗಳಿಕೆ, ಹಾಡು, ಹಣ, ಇತ್ಯಾದಿಗಳನ್ನು ಬಳಸಿ ಆರಿಸಿ ಬರುವುದಕ್ಕೆ ಆಪರೇಷನ್ ಕಮಲ ಎಂದು ಹೆಸರು. ಸಿಟಿ ರವಿಯವರು ಉಪಯೋಗಿಸಿದ ಹಕಾರದ ಶಬ್ದವನ್ನು ಇಲ್ಲಿ ಉಪಯೋಗಿಸಲಾಗಿಲ್ಲ. ಕರ್ನಾಟಕಕ್ಕೆ ಇಂಥ ಸರ್ಜರಿ ಹೊಸದೆಂದು ಕಂಡರೂ ಬಿಜೆಪಿಯವರು ಗೋವಾದಲ್ಲಿ ಕೆಲವು ವರ್ಷಗಳ ಹಿಂದೆಯೇ ಉಪಯೋಗಿಸಿದ್ದರು. ಗೋವಾದಲ್ಲಿಯೂ ಪೋಸ್ಟ್ ಆಪರೇಟಿವ್ ಕಾಂಪ್ಲಿಕೇಷನ್ ಗಳು ಉಂಟಾಗಿದ್ದವು. ಕರ್ನಾಟಕದಲ್ಲಿಯೂ ಆಗುತ್ತವೆ.

೨೦. ಆಪರೇಷನ್ ಕಮಲವನ್ನು ತಡೆಯಲು ಪಕ್ಷಾಂತರ ನಿಷೇಧದ ಕಾನೂನಿನಲ್ಲಿ ಅವಕಾಶಗಳಿಲ್ಲ.

೨೧. ಆಡಳಿತ ಪಕ್ಷದ ಯಾವುದೇ ಸದಸ್ಯ ಯಾವತ್ತಾದರೂ ಮುಖ್ಯಮಂತ್ರಿಗೆ ಬೆಂಬಲ ವಾಪಸ್ ಪಡೆಯಬಹುದು. ಆಟ ಗೂಟ ಜೈ ಅಂತ ಸ್ಟಂಪು ಕಿತ್ತಿಕೊಂಡು ಹೋಗಬಹುದು. ಹಾಗೆ ಮಾಡಬೇಡಿ ಎಂದು ಹೇಳುವ ಅಧಿಕಾರ ಒಬ್ಬ ಸದಸ್ಯನಿಗೆ ಮಾತ್ರ ಇದೆ. ಅವರ ಹೆಸರು ಚೀಫ್ ವಿಪ್. ಅವರು ಪಕ್ಷದ ನಿರ್ಧಾರಗಳನ್ನು ಶಾಸಕಾಂಗ ಪಕ್ಷಕ್ಕೆ ಹಾಗೂ ಸದನಕ್ಕೆ ತಿಳಿಸುವ ಜವಾಬ್ದಾರಿ ಇದೆ.

೨೨. ಈ ವಿಪ್ ನ ಮನೆಯಲ್ಲಿ ಸಿಲಿಂಡರ್ ಖಾಲಿ ಆಗಿ, ಪಕ್ಷದ ಸದಸ್ಯರೊಬ್ಬರು ಅದನ್ನು ತುಂಬಿಸಿಕೊಂಡು ಬರದೇ ಹೋದರೆ ಅವರು ಅವರ ವಿರುದ್ಧ ವಿಪ್ ನೀಡಬಹುದು. ‘ಸದನದಲ್ಲಿ ಚರ್ಚೆಗೆ ಬಂದಿರುವ ವಿಧೇಯಕ, ವಿಶ್ವಾಸಮತ ಮಂಡನೆ ನಿರ್ಣಯ ಇತ್ಯಾದಿಗಳ ಬಗ್ಗೆ ನಮ್ಮ ಪಕ್ಷದ ವಿಚಾರ ಈ ರೀತಿ ಇದೆ. ಅದರ ಪ್ರಕಾರ ನೀವು ಈ ರೀತಿ ಸದನದಲ್ಲಿ ಮತ ನೀಡಬೇಕು' ಎಂದು ಅವರು ಗರ್ಜಿಸುವುದಕ್ಕೆ ವಿಪ್ ಎಂದು ಹೆಸರು.

೨೩. ಹೆಸರಿಗೆ ತಕ್ಕಂತೆ ವಿಪ್ಪಿನ ಕೆಲಸ ಚಾಟಿ ಏಟು ಹೊಡೆಯುವುದು. ಪಕ್ಷದ ಸದಸ್ಯರು ಹಾಗು ಮುಖ್ಯಮಂತ್ರಿಗೆ ಬೆಂಬಲ ನೀಡಿದ ಪಕ್ಷೇತರರಿಗೂ ಚಾಟಿ ಏಟು ಕೊಡಬಹುದು ಎಂದು ಸುಪ್ರೀಂಕೋರ್ಟ್ ಮಾಯಾವತಿ ಸರಕಾರಕ್ಕೆ ಸಂಬಂಧಪಟ್ಟ ಒಂದು ಕೇಸಿನಲ್ಲಿ ತೀರ್ಪು ನೀಡಿದೆ. ಒಂದು ಪಕ್ಷಕ್ಕೆ ಒಂದು ಸಾರಿ ಬೆಂಬಲ ನೀಡುತ್ತೇನೆ ಎಂದು ಘೋಷಿಸಿದ ಪಕ್ಷೇತರರು ಕೊನೆಯವರೆಗೂ ಅದಕ್ಕೇ ಬೆಂಬಲ ನೀಡಬೇಕು ಎಂದು ಸಹ ಆ ತೀರ್ಪಿನಲ್ಲಿ ದಾಖಲಾಗಿದೆ.

೨೪. ಇದನ್ನು ಪಾಲಿಸದ ಪಕ್ಷದ, ಅಥವಾ ಪಕ್ಷಕ್ಕೆ ಬೆಂಬಲ ನೀಡಿದ ಪಕ್ಷೇತರ ಶಾಸಕರ ಮೇಲೆ ಶಿಸ್ತು ಕ್ರಮ ಕೈಕೊಳ್ಳಿ ಎಂದು ವಿಪ್ ಸಾಹೇಬರು ಸ್ಪೀಕರ್ ಸಾಹೇಬರಿಗೆ ದೂರಬಹುದು. ಅವರು ಅದನ್ನು ಕೇಳಬಹುದು, ಕೇಳಿದರೂ ಕೇಳದಂತೆ ಇರಲೂಬಹುದು.
ವಿಪ್ಪಿನ ಮಾತನ್ನು ಸ್ಪೀಕರ್ ಸಾಹೇಬರು ಸೀರಿಯಸ್ಸಾಗಿ ಪರಿಗಣಿಸಿದರೆ ಸದಸ್ಯರ ೧> ನಿರ್ದಿಷ್ಟ ಅವಧಿಗೆ ಅಮಾನತು ಮಾಡಬಹುದು, ೨> ಸದಸ್ಯತ್ವ ರದ್ದು ಮಾಡಬಹುದು, ೩> ಹೋಗಲಿ ಬಿಡು ಅಂತ ಬಿಟ್ಟು ಬಿಟ್ಟು ಅವರ ಜತೆ ಇಬ್ಬರೂ ಕೂಡಿ ಥೈಲ್ಯಾಂಡ್ ಗೆ ಫ್ಯಾಮಿಲಿ ಟೂರ್ ಹೋಗಬಹುದು. ಇವೆಲ್ಲ ಮಾಡುವ ಮೊದಲು ನೋಟೀಸ್ ನೀಡಬೇಕು. ಅದಕ್ಕೆ, ಅದರ ಉತ್ತರ ಪಡೆಯಲಿಕ್ಕೆ ಕಾನೂನಿನಲ್ಲಿ ಕಾಲಾವಧಿ ಇಲ್ಲ. ರಾಜ್ಯ ವಿಧಾನಸಭೆ ಮಾಡಿದ ನಿಯಮಗಳಲ್ಲಿ ಎಳು ದಿನ ಅಂತ ಇದೆ. (ಧರ್ಮಸಿಂಗ್ ಸಾಹೇಬರ ಕಾದಲ್ಲಿಯ ಒಂದು ಪ್ರಕರಣವನ್ನು ಸ್ಪೀಕರ್ ೨೨ ತಿಂಗಳ ಮುಂದೂಡಿದರು. ಆ ನಂತರ ಚುನಾವಣೆ ಬಂತು. ಸ್ಪೀಕರ್ ಅವರ ಅಧಿಕಾರವನ್ನು ಮತದಾರರು ಹೈಜಾಕ್ ಮಾಡಿದರು!)

೨೫. ಸಂವಿಧಾನದ ಪ್ರಕಾರ ಸದಸ್ಯತ್ವ ರದ್ದಾಗುವುದು ಚುನಾವಣಾ ಸಂಬಂಧಿ ಕಾಯಿದೆಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅವರ ಸದಸ್ಯತ್ವ ರದ್ದುಗೊಳಿಸಲು ಚುನಾವಣಾ ಆಯೋಗ ರಾಜ್ಯಪಾಲರಿಗೆ ಸಲಹೆ ನೀಡಿದಾಗ ಮಾತ್ರ. ಅಂಥ ಸನ್ನಿವೇಶವೇನೂ ಈಗ ಸೃಷ್ಟಿಯಾಗಿಲ್ಲ.

೨೬. ಶಾಸಕರ ಸದಸ್ಯತ್ವ ರದ್ದಾಗಬೇಕೇ ಬೇಡವೇ ಎಂದು ನಿರ್ಧರಿಸುವ ಅಂತಿಮ ಅಧಿಕಾರ ಇರುವುದು ಸ್ಪೀಕರ್ ಅವರಿಗೆ. ಅವರ ವಿರುದ್ಧ ದೂರು ಸಲ್ಲಿಸಲು ನ್ಯಾಯಾಲಯಕ್ಕೆ ಹೋಗಲು ಅವಕಾಶ ಇಲ್ಲ. ಅವರ ನಿರ್ಧಾರ ಸಂವಿಧಾನದ ಆಶಯದ ಪ್ರಕಾರ ಇತ್ತೋ ಇಲ್ಲವೋ ಎಂದು ನ್ಯಾಯಾಲಯದ ಅಭಿಪ್ರಾಯ ಕೇಳಬಹುದಷ್ಟೆ. (ಈ ಭಾಗ ಅಸ್ಪಷ್ಟವಾಗಿದೆ ಎಂದು ಸುಪ್ರೀಂಕೋಟ್ ತೀರ್ಪು ನೀಡಿದ್ದರಿಂದ ಇದನ್ನು ಕಾನೂನಿನಿಂದ ಕೈಬಿಡಲಾಗಿದೆ )

೨೭. ಆದರೆ ವಿಪ್ ಉಲ್ಲಂಘನೆಯಾಗಿದೆಯೇ ಎಂದು ನಿರ್ಧಾರವಾಗುವುದು ಸದನದಲ್ಲಿ ಆ ಸದಸ್ಯನ ನಡುವಳಿಕೆಯ ಆಧಾರದ ಮೇಲೆಯೆ. ಸದನದಲ್ಲಿ ಅಧಿವೇಶನ ನಡೆಯುವ ಮೊದಲೇ ವಿಪ್ ಉಲ್ಲಂಘನೆ ಆಗಿದೆಯೋ ಇಲ್ಲವೋ ಎಂಬ ನಿರ್ಧಾರಕ್ಕೆ ಸ್ಪೀಕರ್ ಗಳು ಬಂದಿದ್ದು ಅಪರೂಪ. ಆದರೆ ವಿಪ್ ಉಲ್ಲಂಘನೆಗಾಗಿ ಶಾಸಕರ ಸದಸ್ಯತ್ವವನ್ನು ಅನೂರ್ಜಿತಗೊಳಿಸಲಾಗಿದೆ ಎಂದು ಸ್ಪೀಕರ್ ಬೋಪಯ್ಯನವರೇನೂ ಹೇಳಿಲ್ಲ. ಶಿಸ್ತು ಮೀರಿದ ಶಾಸಕರು ಮುಂದಿನ ಆರು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಮಾಡುತ್ತೇನೆ ಎಂದು ಮು.ಮ ಅವರು ಕೆಲವು ದಿನಗಳ ಹಿಂದೆ ಧಮಕಿ ಹಾಕಿದ್ದನ್ನು ಇಲ್ಲಿ ನೆನೆಯಬಹುದು.

೨೮. ಹೀಗಾಗಿ ಬೋಪಯ್ಯನವರು ಈ ೧೬ ಜನ ಶಾಸಕರ ಸದಸ್ಯತ್ವವನ್ನು ಯಾಕೆ ರದ್ದು ಮಾಡಿದರು ಎನ್ನುವುದು ಸ್ಪಷ್ಟವಾಗಿಲ್ಲ.

೨೯. ಸದನದ ಒಳಗೆ ಬಿಳೀ ಬಟ್ಟೆ ಹಾಕಿದ ಪೋಲಿಸರಿಗೆ ಮಾರ್ಷಲ್ ಎಂದು ಹೆಸರು. ಖಾಕಿ ಹಾಕಿಕೊಂಡ ಪೋಲಿಸರು ವಿಧಾನಸೌಧದ ಒಳಗೆ ಬರಬಾರದು ಎಂಬ ಕಾನೂನು ಇಲ್ಲ. ಸಂಪ್ರದಾಯ ಇದೆ.

೩೦. ಇನ್ನು ಸದಸ್ಯತ್ವ ರದ್ದತಿ ಶಿಸ್ತು ಕ್ರಮ ಎದುರಿಸುತ್ತಿರುವ ಶಾಸಕರು ಸದನದ ಒಳಗೆ ಬರುವಂತಿಲ್ಲ. ಅವರು ಬಂದರೆ ಅವರನ್ನು ಸ್ಪೀಕರ್ ಅವರು ಹೊರಹೋಗಲು ಹೇಳಬಹುದು. ಕೇಳದಿದ್ದರೆ ಮಾರ್ಷಲ್ ಗಳಿಗೆ ಹೇಳಿ ಹೊರ ಹಾಕಿಸಬಹುದು. ಮಾರ್ಷಲ್ ಗಳಿಗೇ ಹೊಡೆಯುವ ಶಾಸಕರು ಸಂವಿಧಾನ ರಚನೆಯ ಸಮಯದಲ್ಲಿ ಇನ್ನೂ ಹುಟ್ಟಿದ್ದಿಲ್ಲವಾದ್ದರಿಂದ ಅದರ ಬಗ್ಗೆ ಸಂವಿಧಾನ ರಚನಾ ಸಮಿತಿ ಏನೂ ಹೇಳಿಲ್ಲ.

೩೧. ಸದಸ್ಯರಲ್ಲದವರು ಸದನಕ್ಕೆ ಬಂದು ಹೊರಗೆ ಹೋಗದೇ ಅಂಗಿ ಹರಿದುಕೊಂಡು ಹಟ ಮಾಡಿದರೆ (ಅಕ್ಷರಶಃ) ಸದನವು ಸುವ್ಯವಸ್ಥಿತವಾಗಿಲ್ಲ ಎಂದು ಸ್ಪೀಕರ್ ಸಾಹೇಬರು ತೀರ್ಪು ನೀಡಬಹುದು. ಅದರಂತೆ ಸಭೆ ಬರಖಾಸ್ತು ಮಾಡಬಹುದು. ವ್ಯವಸ್ಥಿತವಾಗಿದೆ ಎಂದು ಅವರಿಗೆ ಅನ್ನಿಸಿದರೆ ಸಭೆ ನಡೆಸಬಹುದು. ಸದನ ವ್ಯವಸ್ಥಿತವಾಗಿರಲಿಲ್ಲ ಎಂದು ಸದಸ್ಯರು ಆರೋಪ ಮಾಡಬಹುದು. ರಾಜ್ಯಪಾಲರಿಗೆ ಸ್ಪೀಕರ್ ಅವರು ಹೊಡೆದಾಟ ಬಡಿದಾಟದ ನಡುವೆಯೂ ಸಭೆ ನಡೆಸಿದ್ದಾರೆ ಎಂದು ದೂರು ನೀಡಬಹುದು.

೩೨. ಸಭೆ ನಡೆಸಲು ಬೇಕಾದ ಕನಿಷ್ಠ ಸದಸ್ಯರ ಸಂಖ್ಯೆ ೨೩. (ಶೇಕಡಾ ಹತ್ತು.) ಆಡಳಿತ ಪಕ್ಷದವರು ಇಷ್ಟಿರಬೇಕು, ವಿರೋಧ ಪಕ್ಷದವರು ಇಷ್ಟಿರಬೇಕು ಎಂಬ ನಿಯಮ ಇಲ್ಲ.

೩೩. ಸದನದಲ್ಲಿನ ಎಲ್ಲ ಮತದಾನಗಳೂ ಧ್ವನಿ ಮತದಿಂದಲೇ ಮೊದಲ ಬಾರಿಗೆ ನಿರ್ಧಾರ ವಾಗುತ್ತವೆ. ಯಾವ ಸದಸ್ಯರಾದರೂ ಅದಕ್ಕೆ ವಿರೋಧ ಮಾಡಿದಾಗ ಮಾತ್ರ ತಲೆ ಎಣಿಸುವ, ಹೆಡ್ ಕೌಂಟ್, ಅಥವಾ ಪೇಪರ್ ಬ್ಯಾಲಟ್ ಉಪಯೋಗವಾಗುತ್ತದೆ. ಧ್ವನಿ ಮತಕ್ಕೆ ವಿರೋಧ ಬರದೇ ಇದ್ದಲ್ಲಿ ತಲೆ ಎಣಿಕೆ ಅಗತ್ಯ ಇಲ್ಲ.
ಇಂದಿನ ಶಾಸನ ಸಭೆಯನ್ನು ಸುವ್ಯವಸ್ಥೆಯ ಆಧಾರದ ಮೇಲೆ ಟೀಕಿಸಬಹುದು. ಕೋರಂ ಆಧಾರದ ಮೇಲೆ ಅಲ್ಲ. ಕೋರಂ ಎಂದರೆ ಸಭೆ ನಡೆಸಲು ಕನಿಷ್ಟ ಎಷ್ಟು ಜನ ಸದಸ್ಯರು ಇರಬೇಕು ಎಂಬ ಪ್ರಶ್ನೆಗೆ ಉತ್ತರ.

೩೪. ಇಂದಿನ ಶಾಸನ ಸಭೆಯನ್ನು ಸುವ್ಯವಸ್ಥೆಯ ಆಧಾರದ ಮೇಲೆ ಟೀಕಿಸಬಹುದು. ಕೋರಂ ಆಧಾರದ ಮೇಲೆ ಅಲ್ಲ.

೩೫. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಬೋಪಯ್ಯನವರು ಸದಸ್ಯರನ್ನು ಅನೂರ್ಜಿತಗೊಳಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಅಭಿಪ್ರಾಯ ನೀಡಬಹುದು.

೩೬. ಇದೆಲ್ಲ ಆಗುತ್ತಿದ್ದಂತೆ ಯಡ್ಯೂರಪ್ಪ ಅವರು ಇನ್ನೊಂದು ಬಿಳಿ ಸಫಾರಿ ಹೊಲಿಸಿಕೊಂಡು ಮಿಂಚಬಹುದು. ಅಥವಾ ಸಿದ್ರಾಮನ ಹುಂಡಿ ಸಿದ್ರಾಮಯ್ಯನವರು ಹಸಿರು ಟವೆಲು ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸಬಹುದು.

೩೭. ಅಥವಾ ಇರುವ ಒಬ್ಬ ಮಗ, ಒಬ್ಬಳೇ ಮಗಳನ್ನು ಅಮೇರಿಕೆಗೆ ಮದುವೆ ಮಾಡಿಕೊಟ್ಟು ಸ್ವಿಜರ್ ಲ್ಯಾಂಡಿಗೆ ಟೂರ್ ಹೋದ ಐ.ಎ.ಎಸ್ ಅಧಿಕಾರಿಗಳು ತಮ್ಮ ಹಳೆಯ ಸೂಟುಗಳನ್ನು ರಾಜ್ಯಪಾಲರ ಸಲಹೆಗಾರರು ಎಂದು ಮರಳಿ ಬಂದು ನಮ್ಮ ಜೀವ ತಿನ್ನಬಹುದು.

೩೮. ಅಥವಾ ನಮ್ಮ ಪ್ರಭುಗಳು ಸರಕಾರದ ಅಕಾಲಿಕ ಮರಣವನ್ನು ಘೋಷಿಸಿ ಬೆಲೆಯೇರಿಕೆಯೇ ಇಳಿಯದ ನಮ್ಮ ಗಂಟಲೊಳಗೆ ಇನ್ನೊಂದು ಚುನಾವಣೆಯನ್ನು ತುರುಕಬಹುದು.

ಅಷ್ಟಕ್ಕೂ ಡೆಮಾಕ್ರಸಿ ಎಂದರೆ ಏನು? ಇದು ಮುಖ್ಯ ಪ್ರಶ್ನೆಯೇ? ಅಥವಾ ಇದಕ್ಕೆ ಉತ್ತರ ಯಾವ ನನ್ನ ಮಗನಿಗೆ ಬೇಕಾಗಿದೆ?

ಇಷ್ಟೆಲ್ಲಾ ಬರೆದು ಮುಗಿಸುವ ಹೊತ್ತಿಗೆ ನನಗೊಂದು ಫೋನ್ ಬಂತು. ಆ ಕೆಂಡಸಂಪಿಗೆಯಲ್ಲಿ ನೀವು ಬರೀ ಶ್ರೀರಾಮುಲು ಅವರ ಬಗ್ಗೆ ಮಾತ್ರವೇ ಬರೀತೀರಿ ನಮ್ಮ ಬಗ್ಗೆ ಯಾಕೆ ಬರೆಯೋದಿಲ್ಲ ಅಂತ ನನ್ನ ಜತೆ ಜಗಳವಾಡಿದವರು ಗೂಳಿಹಟ್ಟಿ ಶೇಖರ್. ಟೀವಿಯಲ್ಲಿ ನಾನು ಶರ್ಟ್ ತೆಗೆದದ್ದು ನೋಡಿದ ಸಲ್ಮಾನ್ ಖಾನ್ ಅವರು ನನ್ನನ್ನು ದಬಾಂಗ್-೩ ಚಿತ್ರದಲ್ಲಿ ನನಗೆ ಅವಕಾಶ ನೀಡಿದ್ದಾರೆ. ಹೇಗೂ ನಮಗೆ ಮುಂದಿನ ಚುನಾವಣೆಯ ವಿಚಾರ ಇಲ್ಲ. ನಾನು ಬಾಂಬೆಗೆ ಹೋಗೋಕಿಂತ ಮುಂಚೆ ಬನ್ನಿ ಇಂಟರ್‌ವ್ಯೂ ಮಾಡಿ, ಅಂದರು. ಆ ಪರಮ ದಯಾಳುವಾದ ಕರುಣಾಮಯ ಭಗವಂತನ ದಯೆ ಇದ್ದರೆ ಅದೂ ಆದೀತು ಎಂದುಕೊಂಡೆ.
Print Close

Democracy for Dummies-2

ಬಡಪಾಯಿಗಳಿಗೆ ಡೆಮೋಕ್ರಸಿ: ಹೃಷಿಕೇಶ್ ಪಂಚಾಯಿತಿ ಪಾಠ


ಬಡಪಾಯಿಗಳಿಗೆ ಡೆಮೋಕ್ರಸಿ: ಹೃಷಿಕೇಶ್ ಪಂಚಾಯಿತಿ ಪಾಠ
By ಹೃಷಿಕೇಶ್ ಬಹದ್ದೂರ್ ದೇಸಾಯಿ

ರಾಜ್ಯದ ೩೦ ಪಂಚಾಯಿತಿಗಳಲ್ಲಿ ಬಿಜೆಪಿ ೧೨ ಸ್ಥಾನ ಗೆದ್ದಿತು, ಕಾಂಗ್ರೆಸ್, ಜೆಡಿಎಸ್ ನಾಲ್ಕು ನಾಲ್ಕು ಗೆದ್ದವು, ಇನ್ನುಳಿದ ೧0 ಅತಂತ್ರ ಅಂತ ಕೆಲವರು ಮೊನ್ನೆ ಸುದ್ದಿ ಬರೆದಿದ್ದಾರೆ. ನಿನ್ನೆಯಿಂದ ಅನೇಕರು ಓದುತ್ತಲೇ ಇದ್ದಾರೆ. ಎಲ್ಲಾ ಕಡೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಬಂದು ಪಂಚಾಯಿತಿ ಸಭೆಗಳು ಆರಂಭವಾಗುವವರೆಗೆ ಇಂಥ ಸುದ್ದಿ ಓದಲೇಬೇಕಾದ ಅನಿವಾರ್ಯತೆ ಮತದಾರರೆಂಬ ನಿತ್ಯ ನಾರಕಿಗಳಿಗೆ ಇದೆ.

ಹಂಗೆಲ್ಲಾ ಅಂದರೇನು? ಇದರ ಅರ್ಥ ಏನು? ಈ ಜನವರಿ ೪ ನಾಲ್ಕರ ಚುನಾವಣೆ ಫಲಿತಾಂಶದ ಹಕೀಕತ್ತಾದರೂ ಏನು? ಇದು ಬೇಕಿತ್ತೇ?

ನಿಮ್ಮೊಡನಿದ್ದೂ ನಿಮ್ಮಂತಿರದ ಬಾಳು
“ಇದರ ಸೀದಾ ಸಾದಾ ಅರ್ಥ ಏನೆಂದರೆ, ರಾಜ್ಯದ ಜಿಲ್ಲಾ ಪಂಚಾಯಿತಿಗಳ ಪೈಕಿ ೪೦ ಶೇಕಡಾ ಸಂಸ್ಥೆಗಳಲ್ಲಿ ಬಹುಮತ ಪಡೆದ ಬಿಜೆಪಿ ಹಾಗೂ ಅದರ ಕಮಾಂಡರ್ ಆದ ಯಡಿಯೂರಪ್ಪ ಅವರು ಗೆದ್ದಂತೆ” ಅಂತ ಮುಖ್ಯಮಂತ್ರಿಗಳ ರೇಸ್ ಕೋಸ್ ನಿವಾಸದ ಸುತ್ತಮುತ್ತ ತಿರುಗಾಡುತ್ತಿರುವ ಅವರ ಹಿಂಬಾಲಕರು ಹೇಳುತ್ತಿದ್ದಾರಂತೆ. ಹೇಳಿಕೊಂಡು ಮತ್ತೆ ತಿರುಗಾಡುತ್ತಿದ್ದಾರಂತೆ.

ಅಡ್ಡ ವೈಸರ್ ಗಳು
ಇನ್ನು ಕೆಲವರು “ಇದಕ್ಕೆ ಸಾಧನೆ ಅಂತಾರೆಯೇ? ಇದು ಕಂಪ್ಲೀಟ್ ಫೇಲ್ಯುರ್. ನಾನು ಮುಖ್ಯಮಂತ್ರಿಯಾಗಿದ್ದರೆ ತೋರಿಸುತ್ತಿದ್ದೆ. ನೂರಕ್ಕೆ ನೂರು ಕಡೆ ನಮ್ಮವರು ಬಂದು ವಿರೋಧ ಪಕ್ಷ ನಿರ್ನಾಮ ಮಾಡುತ್ತಿದ್ದೆ !@#$,” ಅಂತ ಹೇಳುತ್ತಿದ್ದಾರಂತೆ. ಇಂಥ ಕುಹಕಿಗಳಲ್ಲಿ ‘ಅವರೊಡನಿದ್ದೂ ಅವರೊಡನಿರದಿರುವ ಕೆಲವರು’ ಇದ್ದಾರೆ ಅಂತ ಮುಖ್ಯಮಂತ್ರಿಗಳ ಅಡ್ಡ ಅಡ್ಡ ಅಡ್ವೈಸರ್ ಗಳು ಅವರ ಮಾರ್ನಿಂಗ್ ವಾಕ್ ನಲ್ಲಿ ಹೇಳುತ್ತಿದ್ದಾರಂತೆ.

ಹಾಗಾದರೆ ಪಂಚಾಯಿತಿ ಚುನಾವಣೆಗಳಲ್ಲಿ ಏನಾಯ್ತು?
ರಾಜ್ಯದ ಜನ ಬಿಜೆಪಿ ಸರಕಾರ ದ ಹಗರಣಗಳನ್ನು, ಮುಖ್ಯಮಂತ್ರಿಗಳೂ ಸೇರಿದಂತೆ ಮಂತ್ರಿಗಳ ವಿರುದ್ಧದ ಭ್ರಷ್ಟಾಚಾರದ, ಸ್ವಜನ ಪಕ್ಷಪಾತದ, ವೈಯಕ್ತಿಕ ದುರ್ನಡತೆಯ ಆರೋಪಗಳೆಲ್ಲವನ್ನೂ ಮರೆತರೆ? ಎಲ್ಲಕ್ಕಿಂತ ಮುಖ್ಯವಾಗಿ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡಕರಿ ಅವರೇ ‘ಅನೈತಿಕ’ ಎಂದು ಒಪ್ಪಿಕೊಂಡ ಡಿನೋಟಿಫಿಕೇಷನ್ನುಗಳನ್ನು ಕ್ಷಮಿಸಿದರೇ?

ಅಥವಾ “ಈ ಎರಡೂವರೆ ವರ್ಷದಲ್ಲಿ ನೀವು ಮಾಡಿದ್ದೆಲ್ಲವನ್ನೂ ನಾವು ಒಪ್ಪಿಕೊಂಡಿಲ್ಲ. ಇದು ಮೊದಲ ಎಚ್ಚರಿಕೆ. ನಿಮ್ಮನ್ನು ನೀವು ತಿದ್ದಿಕೊಳ್ಳಲು ನಿಮಗೆ ಒಂದು ಅವಕಾಶ ಕೊಟ್ಟಿದ್ದೇವೆ. ಇದೇ ಲಾಸ್ಟ್. ಇನ್ನು ಮುಂದೆ ನೀವು ತಿದ್ದಿಕೊಳ್ಳದಿದ್ದರೆ ಇನ್ನು ಎರಡೂವರೆ ವರ್ಷದ ನಂತರ ನಿಮಗೆ ತಿದ್ದಿಕೊಳ್ಳಲು ಅವಕಾಶ ಸಿಗುವುದಿಲ್ಲ. ಆಗ ನಾವೆಲ್ಲ ಸೇರಿ ಹೊಸ ತಪ್ಪು ಮಾಡಲು ಬೇರೆ ಪಕ್ಷಕ್ಕೆ ಅವಕಾಶ ಕೊಡುತ್ತೇವೆ” ಎಂದು ಹಳ್ಳಿ ಜನರೆಲ್ಲ ಸೇರಿ ಸರಕಾರಕ್ಕೆ ಧಮಕಿ ಕೊಟ್ಟಿದ್ದಾರೆಯೇ?

ಇವರೆಡೂ ಅಲ್ಲ.

ಸರಕಾರದ ತಪ್ಪು ಒಪ್ಪುಗಳನ್ನು ಜನ ಮರೆತಿಲ್ಲ, ಕ್ಷಮಿಸಿಲ್ಲ. ರಾಜ್ಯದ ಆಡಳಿತವೇ ಬೇರೆ, ಪಂಚಾಯಿತಿ ಚುನಾವಣೆಯೇ ಬೇರೆ. ಇದೇ ಪ್ರಜಾಪ್ರಭುತ್ವದ ಮಜಾ.

ಚಹಾ ಅಂಗಡಿಯ ಮೆನುನಲ್ಲಿ ಏನಿದೆ?
ಪಂಚಾಯಿತಿ ಚುನಾವಣೆಗಳಲ್ಲಿ ಇಂಥ ದೊಡ್ಡ ದೊಡ್ಡ ವಿಷಯಗಳೆಲ್ಲ್ಲ ಚರ್ಚೆಯ ವಿಷಯಗಳೇ ಅಲ್ಲ. ಬೇರುಮಟ್ಟದ ರಾಜಕೀಯದಲ್ಲಿ ಅಪಾರ ಅನುಭವ ಇರುವ ಯಡಿಯೂರಪ್ಪ ಅವರಿಗೆ ಇದು ಚೆನ್ನಾಗಿ ಗೊತ್ತು.

ಅದಕ್ಕೇ ಅವರು ‘ನಾನು ತಪ್ಪು ಮಾಡಿದ್ದರೆ ಪಂಚಾಯಿತಿ ಚುನಾವಣೆಗಳಲ್ಲಿ ಜನ ತೀರ್ಪು ಕೊಡುತ್ತಾರೆ’ ಅಂತ ಹೇಳಿದ್ದು. ರಾಜ್ಯ ಮಟ್ಟದ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳು ಪಂಚಾಯಿತಿ ಚುನಾವಣೆಗೆ ಮುಂಚೆ ಊರ ಮುಂದಿನ ಚಹಾ ಅಂಗಡಿಯಲ್ಲಿ ಚರ್ಚೆಗೆ ಬರುವುದೇ ಇಲ್ಲ, ಮತದಾರನ ಆಯ್ಕೆಯನ್ನು ಅವು ನಿರ್ಧರಿಸುವುದಿಲ್ಲ. ಚುನಾವಣೆ ಸಮಯದಲ್ಲಿ ಸುಮ್ಮನೇ ಹಳ್ಳಿಗಳ ಕಡೆ ಪಿಕ್ ನಿಕ್ ಗೆ ಹೋದವರಿಗೇ ಇದು ಗೊತ್ತಾಗುವಾಗ ರಾಜಕೀಯವನ್ನೇ ಉಂಡು ತಿಂದು ಉಸಿರಾಡುವ ಯಡಿಯೂರಪ್ಪ ಅವರಿಗೆ ಗೊತ್ತಿಲ್ಲವೇ?

ಕಪ್ಪು ಬಿಳುಪಿನ ಪೋಸ್ಟ್ ಮಾರ್ಟಮ್
ಈ ಗಹನವಾದ ವಿಚಾರವನ್ನು ತಿಳಿಯುವ ಮುನ್ನ ಒಂದು ಕತೆ ಕೇಳೋಣ. ಮೊನ್ನೆಯ ಚುನಾವಣೆ ಪ್ರಚಾರ ನೋಡಲು ನಾವು ಹೋದಾಗ ಹಿಂದೆ ಎರಡು ಸಾರಿ ಜಿಲ್ಲಾ ಪಂಚಾಯಿತಿ ಚುನಾವಣೆ ಗೆದ್ದು, ಗ್ರಾಮೀಣ ಜನರ, ಹಿಂದುಳಿದವರ ನಾಯಕ ಅಂತ ಅನ್ನಿಸಿಕೊಂಡ ಅಮೃತ್ ಚಿಮ್ಕೋಡ್ ಅವರು ಸಿಕ್ಕರು. ಅವರು ಅವರ ಮನೆಯವರ ಪರವಾಗಿ ಪ್ರಚಾರ ನಡೆಸಿದ್ದರು. ಹಳ್ಳಿಯ ಮುದುಕಿಯೊಬ್ಬಳು ಅವರನ್ನು “ಅಯ್ಯೋ ನೀನೆಷ್ಟು ಕರ್ರಗಿದ್ದೀ, ನಿಮ್ಮ ಮೇಡಂ ಅವರು ಎಷ್ಟು ಬೆಳ್ಳಗಿದ್ದಾರೆ” ಅಂದಳು. “ಅಯ್ಯೋ ಏನು ಮಾಡೋದು ಎವ್ವಾ, ರಾಧಾ ಕ್ಯೋಂ ಗೋರಿ, ಮೈ ಕ್ಯೋಂ ಕಾಲಾ?” ಅಂತ ನಕ್ಕರು. ಆ ಮನೆಯಲ್ಲಿದ್ದ ಎಲ್ಲರನ್ನೂ ನಗಿಸಿದರು. (ರಾಧಾ ಯಾಕೆ ಬೆಳ್ಳಗಿದ್ದಾಳೆ ನಾನೇಕೆ ಕಪ್ಪು ಎನ್ನುವುದೊಂದು ಮೀರಾ ಭಜನೆ). ನಂತರ ಅಮೃತ್ ಈಚೆಗೆ ಬಂದು ನಕ್ಕರು. “ನಮ್ಮ ಸಾಹೇಬರು ನಾಮಿನೇಷನ್ ಹಾಕಿದಾಗಲೇ ಗೆದ್ದು ಬಿಟ್ಟರು” ಅಂತ ಅವರ ಹಿಂಬಾಲಕರೊಬ್ಬರು ಹೇಳಿದರು. ಸಾಹೇಬರ ಹೆಂಡತಿ ನಾಮಿನೇಷನ್ ಹಾಕಿದ್ದರೂ ಕೂಡ ಸಾಹೇಬರು ಹಾಕಿದಂತೆ ಅಂತ ಅವರು ಮಾತಾಡುತ್ತಾರೆ.

ಕುಯ್ಯುವ, ಹೊಲಿಯುವ ಕಾಂಟ್ರ್ಯಾಕ್ಟ್
ನೀವು ಈ ಜನರಿಗೆ ಏನು ಮಾಡಿದ್ದೀರಿ ಅಂತ ನಾವು ಕೇಳಿದಾಗ ಅವರು ಹೇಳಲು ಶುರು ಮಾಡಿದರು. “ಸಾರ್ ನಾನು ನನ್ನ ಕ್ಷೇತ್ರದ ಪೋಸ್ಟ ಮಾರ್ಟಮ್ ಗಳಿಗೆ ಗುತ್ತಿಗೆದಾರ. ಅದರಲ್ಲೂ ಕ್ಲಾಸ್ ಒನ್ ಕಾಂಟ್ರಾಕ್ಟರ್. ಈ ಹಳ್ಳಿಗಳಲ್ಲಿ ಯಾರಿಗಾದರೂ ಆರಾಮ ಇಲ್ಲದೇ ಜಿಲ್ಲಾಸ್ಪತ್ರೆಗೆ ಹೋಗಿ ಸತ್ತರೆ, ಅಲ್ಲಿ ಅವರಿಗೆ ಪೋಸ್ಟ ಮಾರ್ಟಮ್ ಮಾಡಬೇಕು. ಅದನ್ನು ಮಾಡಲು ಡೆಡ್ ಬಾಡಿಯನ್ನು ಹೆಣದ ಮನೆಗೆ ಒಯ್ಯಬೇಕು. ಅಲ್ಲಿಗೆ ಒಯ್ಯುವವರಿಗೆ ಲಂಚ ಕೊಡಬೇಕು. ನಂತರ ಅದನ್ನು ಕೊಯ್ಯುವವರು, ಹೊಲಿಯುವವರು ಸಿಗಬೇಕು. ಅವರಿಗೆ ಕುಡಿಸಬೇಕು. ನಂತರ ಜಿಲ್ಲಾ ಸರ್ಜನ್ನರು ಅವನ ಮರಣ ಶಾಸನಕ್ಕೆ ಸಹಿ ಹಾಕಬೇಕು. ಅಲ್ಲಿ ಅವರಿಗಾಗಿ ಕಾಲು ಬಿದ್ದು, ಲಂಚ ಕೊಟ್ಟು ಕಾಯಬೇಕು. ಇದನ್ನೆಲ್ಲ ಹಳ್ಳಿ ಯ ಜನ ಮಾಡಲಾರರು. ಇಂಥ ಕೆಲಸಕ್ಕೆ ಅವರಿಗೆ ನಾನು ಬೇಕು. ಇಂಥ ಫೋನ್ ನನಗೆ ವಾರಕ್ಕೆ ಒಂದಾದರೂ ಬರುತ್ತದೆ, ಅಂತ ಅವರು ಹೇಳಿದರು. ಅಂದರೆ ಇವರನ್ನು ಎರಡು ಸಾರಿ ಗೆಲ್ಲಿಸಿದವರು ಜೀವಂತ ಮತದಾರರಲ್ಲ. ಸತ್ತು ಹೋದವರು!

ಮತದಾರರೆಂಬ ವಿಕಲಚೇತನರು
ಪಂಚಾಯಿತಿಗಳಲ್ಲಿ ಚರ್ಚೆಗೆ ಬರುವ ವಿಷಯಗಳು ಇವು. ಡಿಸಿ ಆಫೀಸಿನವರೇ ನೀಡಿದ ರೇಷನ್ ಕಾರ್ಡನ್ನು ಡಿಸಿ ಆಫೀಸಿನವರೇ ರದ್ದು ಮಾಡಿದ್ದು. ಜಾತಿ, ಗಳಿಕೆ, ವಿಳಾಸ ಪ್ರಮಾಣ ಪತ್ರಗಳನ್ನು ಕೊಡಲು ಕಳೆದ ವರ್ಷ ೧೦೦ ರೂಪಾಯಿ ಕೇಳಿದ ತಲಾಠಿ ಈ ವರ್ಷ ೨೦೦ ರೂಪಾಯಿ ಕೇಳಿದ್ದು, ಅಂಗವಿಕಲರು, (ವಿಕಲಚೇತನರು ಎನ್ನುವುದು ತಪ್ಪು ಪದ ಬಳಕೆಯಂತೆ) ವಿಧವೆಯರು ಹಾಗೂ ನೆಲೆ ಇಲ್ಲದ ವಯಸ್ಸಾದವರಿಗೆ ಸಿಗಬೇಕಾದ ಮಾಸಾಶನಗಳು ಜಿಲ್ಲಾ ಖಜಾನೆಯಿಂದ ಬಿಡುಗಡೆಯಾದರೂ ಹಳ್ಳಿಯವರೆಗೂ ಬರಲಾರದ್ದು,

ಹಾವು ಕಡಿದು ಸತ್ತ ರೈತ ನ ಕುಟುಂಬಕ್ಕೆ ಐದು ವರ್ಷದ ಹಿಂದೆ ಬರಬೇಕಾದ ಹತ್ತು ಸಾವಿರ ರೂಪಾಯಿ ಬಂತೋ ಇಲ್ಲವೋ ಗೊತ್ತಾಗಲಾರದ್ದು, ಮಾರಾಟ ಮಾಡಿದ ಹೊಲದ ಮಾಲೀಕರ ಹೆಸರನ್ನು ಪಹಣಿ ಪತ್ರದಲ್ಲಿ ಬದಲಾಯಿಸಲು ತಹಶೀಲ್ದಾರ್ ಕಚೇರಿಗೆ ಕಳೆದ ಮೂರು ವರ್ಷದಲ್ಲಿ ೮೬ ಸಾರಿ ಹೋಗಿಬಂದರೂ ಆಗದೇ ಇರೋದು. ವರ್ಷಾನುಗಟ್ಟಲೇ ಡಾಕ್ಟರು ಇಲ್ಲದೇ ಇರುವ ಸರಕಾರಿ ಆಸ್ಪತ್ರೆಯಲ್ಲಿ ನರ್ಸು ಕೂಡ ಇಲ್ಲದೇ ಇರುವುದು, ಇಂಥವೆಲ್ಲ.

ಒಬ್ಬ ಯಶಸ್ವೀ ಜಿಲ್ಲಾ ಪಂಚಾಯಿತಿ ಸದಸ್ಯ ಇದನ್ನೆಲ್ಲಾ ಮಾಡಿಸುತ್ತಾನೆ. ಮತದಾರನ ಕೈಹಿಡಿದುಕೊಂಡು ಟೇಬಲ್ ಟೇಬಲ್ ಓಡಾಡುತ್ತಾನೆ. ಮತದಾರರ ಖರ್ಚು ಕಮ್ಮಿ ಮಾಡಿಸುತ್ತಾನೆ. ಸರಕಾರಿ ಕಚೇರಿಗಳಲ್ಲಿ ಅವರ ಮೇಲೆ ಬೀಳುವ ಅಧಿಕಾರಿಗಳು ಹಾಗೂ ದಲಾಲರ ಕ್ರೂರ ದೃಷ್ಟಿಯನ್ನು ಸ್ವಲ್ಪ ಹೊತ್ತಿನ ಮಟ್ಟಿಗೆ ತಪ್ಪಿಸುತ್ತಾನೆ.
ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆಯುವ ಸಂಸ್ಕೃತಿ ಇನ್ನೂ ನಮ್ಮಲ್ಲಿ ಬಂದಿಲ್ಲ. ಜನರ ಕುಂದುಕೊರತೆಗಳು ತಂತಾನೆ ಪರಿಹಾರ ಆಗುವ ಮಟ್ಟಿಗೆ ನಮ್ಮ ವ್ಯವಸ್ಥೆ ನಮ್ಮಲ್ಲಿ ಬೆಳೆದಿಲ್ಲವಾದ್ದರಿಂದ ಇಂಥ ವಿಷಯಗಳು ನಮ್ಮ ದೇಶದಲ್ಲಿ ಇನ್ನೂ ಚುನಾವಣೆಗಳನ್ನು ನಿರ್ಧರಿಸುತ್ತವೆ.

ಯಾರಿಗೂ ಬೇಡವಾದ ಸರಕಾರದ ಷೇರು
ಹಾಗಂತ ನಗರಗಳಲ್ಲಿ ಸರಕಾರಿ ವ್ಯವಸ್ಥೆ ಸುಧಾರಿಸಿದೆ ಅಂತಲ್ಲ. ಅಲ್ಲಿ ನಮ್ಮ ದಿನ ನಿತ್ಯಕ್ಕೆ ಬೇಕಾದ ವಸ್ತು, ಹಾಗೂ ಸೇವೆಗಳನ್ನು ನೀಡಲು ಖಾಸಗಿ ಸಂಸ್ಥೆಗಳು ಇರುತ್ತವೆ.
ಉದಾಹರಣೆಗೆ ದೆಹಲಿ ಯ ಪ್ರತಿಷ್ಠಿತ ಬಡಾವಣೆಗಳಲ್ಲಿ ಈಗ ನೀವು ಹಣ ಕೊಟ್ಟರೆ ಖಾಸಗಿ ಕಂಪನಿಗಳಿಂದ ನೀರು, ವಿದ್ಯುತ್, ಅಡುಗೆ ಅನಿಲ, ಫೋನು, ಮುಂತಾದವುಗಳನ್ನು ಪಡೆಯಬಹುದು. ಇನ್ನು ನಗರಗಳಲ್ಲಿರುವವರು ಬಾಡಿಗೆ ಮನೆ, ಕೆಲಸ, ಮಕ್ಕಳಿಗೆ ಸ್ಕೂಲು ಇವೆಲ್ಲಕ್ಕಾಗಿ ಸರಕಾರವನ್ನು ಅವಲಂಬಿಸುವುದನ್ನು ಬಿಟ್ಟು ಎಷ್ಟು ವರ್ಷಗಳಾದವು ಎನ್ನುವುದು ಮರೆತು ಹೋಗುವಷ್ಟು ವರ್ಷಗಳಾದವು. ನಮಗೆ ಸೇವೆ ನೀಡುವ ಕಂಪನಿ ಹೇಗೆ ನಡೆಯುತ್ತದೆ ಎಂಬುದು ನನಗೆ ತಿಳಿಯಬೇಕು ಎಂದು ಅದರ ಷೇರು ಖರೀದಿಸುವ ನಮ್ಮ ಜನ ನಮ್ಮನ್ನಾಳುವ ವರನ್ನು ಆರಿಸಲು ಮತಹಾಕುವುದಿಲ್ಲ.

ಇಂಡಿಯಾ ಸೋಲುತ್ತಿದ್ದರೂ ಸಚಿನ್ ಸೆಂಚುರಿ ಹೊಡೆಯುವುದು ಯಾಕೆ?
ಎಲ್ಲಕ್ಕಿಂತ ಮುಖ್ಯವಾಗಿ ನಗರಗಳಲ್ಲಿ ಹಳ್ಳಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಉಳ್ಳವರು ಇದ್ದಾರೆ. ಉಳ್ಳವರಿಗೆ ಚುನಾವಣೆ ದಿನ ಇಂಡಿಯಾ ಆಸ್ಟ್ರೇಲಿಯಾ ಮ್ಯಾಚ್ ನೋಡಬೇಕಾಗಿರುತ್ತದೆ. ಏನೂ ಇಲ್ಲದವರಿಗೆ ಅಭ್ಯರ್ಥಿ ನೀಡುವ ಹಣ ಹಾಗೂ ಇದ್ದಿದ್ದರಲ್ಲೇ ಹೈಕ್ವಾಲಿಟಿ ಇರುವ ಹೆಂಡ ಸಿಗುತ್ತದೆ. ಆದರೆ ಸಚಿನ್ ಸೆಂಚುರಿ ಹೊಡೆದು ಇಂಡಿಯಾ ಸೋತಮೇಲೆ, ಚಿಯರ್ ಗರ್ಲುಗಳ ಮೇಕಪ್ ಎಲ್ಲ ಬೆವರಿನಲ್ಲಿ ಹರಿದು ಹೋದಮೇಲೆ ನಮ್ಮವರು ‘ದಿನದಿಂದ ದಿನಕ್ಕೆ ಹದಗೆಡುತ್ತಿರುವ ಈ ಹೊಲಸು ರಾಜಕೀಯ’ದ ಬಗ್ಗೆ ಮಾತಾಡುತ್ತಾರೆ. “ ಚುನಾವಣೆಗಳಲ್ಲಿ ಜಾತಿ, ಹಣ, ಹೆಂಡ ಎಲ್ಲಾ ಬ್ಯಾನ್ ಮಾಡಬೇಕು. ಆ ಟೀ ಎನ್ ಶೇಷನ್ ರಾಷ್ಟ್ರಪತಿ ಆಗಿದ್ದರೆ ಇದನ್ನೆಲ್ಲ ಮಾಡುತ್ತಿದ್ದ. ಅವನನ್ನು ಎಲ್ಲರೂ ಸೇರಿ ಸೋಲಿಸಿಬಿಟ್ಟರು ~!@#*” ಅಂತ ಮನೆಯಲ್ಲಿ ನ ಸಣ್ಣ ಮಕ್ಕಳಿಗೂ ಕೂಡ ಕೇಳುವಂತೆ ಹೇಳಿ ಹೆಂಡತಿ ಯೊಂದಿಗೆ ಸಾಸ್ ಬಹೂ ನೋಡಲು ಕೂಡುತ್ತಾರೆ. ‘ಪ್ರಜಾಪ್ರಭುತ್ವ ವನ್ನು ಜೀವಂತವಾಗಿಡಲು ನಮಗಿರುವ ಕನಿಷ್ಟ ಜವಾಬ್ದಾರಿ ಮತಹಾಕುವುದು’ ಎನ್ನುವ ಟಾಟಾ ಟೀ ಜಾಹೀರಾತಿಗೆ ಟೀವಿ ಮ್ಯೂಟ್ ಮಾಡುತ್ತಾರೆ. ಒಂದು ಕ್ಷಣದ ಪಾಪಪ್ರಜ್ಞೆಯಿಂದ ಮುಕ್ತರಾಗುತ್ತಾರೆ. ರಾಜಕೀಯ ಕೆಟ್ಟು ಹೋಗಿರುವುದರಿಂದ ತಾವು ಓಟು ಹಾಕುವುದು ನಿಲ್ಲಿಸಿಲ್ಲ. ತಾವು ಓಟು ಹಾಕುವುದು ನಿಲ್ಲಿಸಿದ್ದರಿಂದ ಅದು ಕೆಟ್ಟು ಹೋಗಿದೆ ಅನ್ನುವುದು ಅವರಿಗೆ ಹೊಳೆಯುವುದಿಲ್ಲ. ಯಾಕೆಂದರೆ ಟೀ ಎನ್ ಸೀತಾರಾಮ ಅವರು ಅದನ್ನು ಇನ್ನೂ ತೋರಿಸಿಲ್ಲ! ಟೀಮಿನಲ್ಲಿನ ಇತರರು ಆಡದೇ ಇಂಡಿಯಾ ಸೋಲುತ್ತಲೇ ಹೋದರೂ ಸಚಿನ್ ಸೆಂಚುರಿ ಹೊಡೆಯುವದನ್ನು ನಿಲ್ಲಿಸುವುದಿಲ್ಲವಲ್ಲ, ಯಾಕೆ ಅಂತ ಅವರು ಒಮ್ಮೆಯೂ ತಲೆ ಕೆಡಿಸಿಕೊಂಡಿಲ್ಲ.

ಸೊಫಿಸ್ಟಿಕೇಟೆಡ್ ಮತದಾರರ ಹುಂಬ ಆಲೋಚನೆಗಳು
ಇನ್ನು ಚುನಾವಣೆಗಳಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ನಿಜ. ಈ ದೇಶದಲ್ಲಿ ಎಲ್ಲಿಯವರೆಗೂ ಜಾತಿ ಆಧಾರಿತ ಭೇದಭಾವ ಇರುತ್ತದೋ, ಎಲ್ಲಿಯವರೆಗೆ ಕೆಲ ಜಾತಿಗಳಿಗೆ ಎಲ್ಲ ರಾಜಕೀಯ ಅಧಿಕಾರ ಸಿಕ್ಕು ಕೆಲ ಜಾತಿಗಳಿಗೆ ಏನೂ ಸಿಗುವುದೇ ಇಲ್ಲವೋ ಅಲ್ಲಿಯವರೆಗೆ ಚುನಾವಣೆ ಗಳಲ್ಲಿ ಜಾತಿ ಇರುತ್ತದೆ. ಅದಕ್ಕೇ ಮೇಲು ಜಾತಿಯ ಅಭ್ಯರ್ಥಿಗಳು ಕೆಳಜಾತಿಗಳ ಮತದಾರರನ್ನೂ, ಕೆಲ ಜಾತಿಯ ಅಭ್ಯರ್ಥಿಗಳು ಮೇಲು ಜಾತಿಗ ಳ ಮತದಾರರನ್ನೂ ಓಲೈಸುತ್ತಾ ನಡೆಯುತ್ತಾರೆ. ಹೊರಗಿನವರಿಗೆ ಇದು ವಿಚಿತ್ರವಾಗಿ, ಅಸಹ್ಯವಾಗಿ ಕಂಡರೂ ಈ ವ್ಯವಸ್ಥೆಯ ಒಳಗೇ ಜೀವನ ತೇಯಬೇಕಾದವರಿಗೆ ಇದು ಅನಿವಾರ್ಯ. ನಮ್ಮ ಜಾತಿಯವರು ಏನು ತಪ್ಪು ಮಾಡಿದರೂ ಪರವಾಗಿಲ್ಲ, ಅಧಿಕಾರಕ್ಕೆ ಬರಲಿ, ಅವರೇ ಮುಂದುವರೆಯಲಿ. ಇತರ ಜಾತಿಯವರು ಎಷ್ಟು ಒಳ್ಳಯೆವರಾಗಿದ್ದು, ಜನರ ಕೆಲಸ ಮಾಡಿದರೂ ಸರಿ ಅವರಿಗೊಂದು ಚಾನ್ಸ್ ಕೊಡೋದು ಬೇಡ ಎನ್ನುವ ವಿಚಾರ ಬಹಳ ಮತದಾರರ ಮನಸ್ಸಿನಲ್ಲಿ ಇದೆ. ಛೀ, ಇದೆಲ್ಲಾ ಹೊಲಸು ಎನ್ನುವ, ಜೀವನ ದಲ್ಲಿ ಒಮ್ಮೆಯೂ ಮತದಾನ ಯಂತ್ರ ನೋಡದ ಅನೇಕ ಸೊಫಿಸ್ಟಿಕೇಟೆಡ್ ನಾಗರಿಕರಲ್ಲಿಯೂ ಕೂಡ ಈ ಭಾವನೆ ಇದೆ. ಅವರು ಇದನ್ನು ಮುಕ್ತವಾಗಿ ಒಪ್ಪುವುದಿಲ್ಲ ಎನ್ನುವುದು ಅವರ ಸೊಫಿಸ್ಟಿಕೇಷನ್.

ಮತ ಹಾಕದೇ ಸೋತವರು
ಇದು ತಪ್ಪಬೇಕಾದರೆ, ಜನರ ಕೆಲಸ ಮಾಡಿದವರು, ಮಾಡುವಂಥವರು ಮುಂದೆ ಬರಲಿ, ಬೇರೆ ನೆವ ಹೇಳಿ ಮತ ಕೇಳುವವರು ಮನೆಯಲ್ಲಿ ಕೂಡಲಿ ಎನ್ನುವುದು ಆಗಬೇಕಾದರೆ, ಹೆಚ್ಚು ಜನ ಓಟು ಹಾಕಬೇಕು. ಉದಾಹರಣೆಗೆ ರಾಜ್ಯದ ಒಂದು ಮತ ಕ್ಷೇತ್ರದ ಮತದಾರರದ ಸಂಖ್ಯೆ ಸರಿ ಸುಮಾರು ೩೦,೦೦೦. ಇದರಲ್ಲಿ ಕಾಲು ಭಾಗ ಕ್ಕಿಂತ ಕಮ್ಮಿ ಮತ ಪಡೆದವರು ಗೆದ್ದಿದ್ದಾರೆ. ಯಾಕೆಂದರೆ ಅರ್ಧ ಕ್ಕಿಂತ ಹೆಚ್ಚು ಜನ ಮತಗಟ್ಟೆಗಳ ಕಡೆಗೇ ಹೋಗಿಲ್ಲ. ಗೆದ್ದ ಅನೇಕ ಅಭ್ಯರ್ಥಿಗಳು ತಮ್ಮ ಪ್ರತಿಸ್ಪರ್ಧಿಗಿಂತ ಕೇವಲ ನೂರಿನ್ನೂರು ಮತಗಳ ಅಂತರ ದಿಂದ ಮುಂದಿದ್ದವರು. ಮತದಾನ ಹೆಚ್ಚಾಗಿದ್ದರೆ ಗೆದ್ದವರ ಗೆಲುವು ಇಷ್ಟು ಸರಳವಂತೂ ಆಗಿರುತ್ತಿದ್ದಿಲ್ಲ. ಸ್ಪರ್ಧೆ ಹೆಚ್ಚು ಆರೋಗ್ಯಕರವಾಗಿರುತ್ತಿತ್ತು. ಚುನಾವಣೆ ರಸಹೀನ ವಾಗಿರುತ್ತಿರಲಿಲ್ಲ. ಒಳ್ಳೆಯ ಅಭ್ಯರ್ಥಿಗಳು ಗೆದ್ದು ಬರುತ್ತಿದ್ದರೋ ಇಲ್ಲವೋ, ಬರುವ ಸಾಧ್ಯತೆಯಂತೂ ಹೆಚ್ಚಿರುತ್ತಿತ್ತು. ನಮ್ಮ ಜನ ಬೇಕಾದವರನ್ನು ಗೆಲ್ಲಿಸಲು ಮತ ಹಾಕುವುದು ಹಾಗಿರಲಿ, ಬೇಡವಾದವರನ್ನು ಸೋಲಿಸಲು ಮತ ಹಾಕಿದರೆ ಸಾಕಿತ್ತು. ಅದೂ ಆಗಿಲ್ಲ.

ಆ ಗತ್ತು ಆಗಿತ್ತು, ಈಗಿಲ್ಲ
ಆದರೆ ಪಂಚಾಯಿತಿ ಚುನಾವಣೆ ಘೋಷಣೆ ಮಾಡಿದ ತಕ್ಷಣ ಯಡಿಯೂರಪ್ಪ ಅವರಿಗೆ ಇದ್ದ ಆತ್ಮವಿಶ್ವಾಸ, ಗತ್ತು ಈಗ ಇಲ್ಲ. ಯಾಕಿರಬಹುದು? ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು ಹೀಗೆ: “ನಾವು ೩೦ ರಲ್ಲಿ ೨೦ ಜಿಲ್ಲಾ ಪಂಚಾಯಿತಿ ಗೆಲ್ಲುತ್ತೇವೆ. ೧೭೬ ತಾಲೂಕು ಪಂಚಾಯಿತಿಗಳಲ್ಲಿ ೧೦೦ಕ್ಕೂ ಹೆಚ್ಚರಲ್ಲಿ ನಮ್ಮ ಪಕ್ಷದ ಅಧ್ಯಕ್ಷರು ಇರುತ್ತಾರೆ”. ಇದು ಆಗಲಿಲ್ಲ. ಏನು ತಪ್ಪಾಯಿತು?

ಚುನಾವಣೆಯೊಂದಿಗೆ ರಾಯರ ಪ್ರಣಯ
ಮೊದಲನೇಯ ಸಾಧ್ಯತೆ ಇದು. ಚುನಾವಣೆ ಯಲ್ಲಿ ಚರ್ಚೆಗೆ ತಕ್ಕ ವಿಷಯ ಅಂತ ಯಾವುದೂ ಇರಲಾರದ್ದರಿಂದ ಜನರಲ್ಲಿ ಈ ರಾಜಕೀಯ ಆಯ್ಕೆಯ ಆಟದಲ್ಲಿ ಆಸಕ್ತಿ ಇರಲಿಲ್ಲ. ಕೇಂದ್ರದಲ್ಲಿ ರಾಜಕೀಯ ಅಸ್ಥಿರತೆ ಹೆಚ್ಚಿ ಸರಕಾರಗಳು ಶಿವರಾಜ ಪಾಟೀಲರ ಶರ್ಟಿನಂತೆ ಬದಲಾಗುತ್ತಿದ್ದಾಗ ಒಂದು ಜೋಕ್ ಇತ್ತು. ‘ಈಗ ಚುನಾವಣೆಯಾದರೆ ಯಾರಿಗೆ ಲಾಭ? ಪ್ರಣಯ ರಾಯ್ ಗೆ ಮಾತ್ರ. ಯಾಕೆಂದರೆ ಅವರು ಗಂಟೆಗಟ್ಟಲೇ ಚುನಾವಣಾ ವಿಶ್ಲೇಷಣೆ ಮಾಡುತ್ತಾರೆ, ಜನ ಕೆಲಸ ಬಿಟ್ಟು ನೋಡುತ್ತಾರೆ, ಅದರಿಂದ ಅವರಿಗೆ ಜಾಹೀರಾತಿನಲ್ಲಿ ಹಣ ದೊರೆಯುತ್ತದೆ! ಆಗ ಅದು ಬೇರೆ ಯಾರಿಗೂ ಬೇಕಾಗಿರಲಿಲ್ಲ. ಈಗ ಕೂಡ ಚುನಾವಣೆಯಲ್ಲಿ ಆಸಕ್ತಿ ಇದ್ದದ್ದು ಪತ್ರಿಕೆ, ಟೀವಿಗಳಿಗೆ ಮಾತ್ರ.

ಕಣ್ಣೀರಿನ ಲಗೋರಿ
ಎರಡನೆಯ ಸಾಧ್ಯತೆ ಇದು. ‘ಗೌಡರು ಹಾಗೂ ಅವರ ಮಕ್ಕಳು ನಾನು ಬಾಲು ಹಾಕಿದಾಗ ಸಿಕ್ಸು ಹೊಡೆದರು, ನನ್ನ ಪಾಳಿ ಬಂದಾಗ ಆಟ ಗೂಟ ಜೈ ಅಂತ ಸ್ಟಂಪು ಕಿತ್ತಿ ಕೊಂಡು ಓಡಿಹೋದರು’ ಅಂತ ಯಡಿಯೂರಪ್ಪ ನವರು ಕಣ್ಣೀರು ಸುರಿಸಿಕೊಂಡು ಜನರ ಬಳಿಗೆ ಬಂದಾಗ ಅಯ್ಯೋ ಪಾಪ ಎಂದ ಜನ ಈಗ ಹಾಗನ್ನುತ್ತಿಲ್ಲ. ಜನರಿಗೆ ತಮ್ಮ ಗೋಳನ್ನು ಕೇಳಿ ಕಣ್ಣೀರು ಒರೆಸುವವರು ಬೇಕಾಗಿದ್ದಾರೆ. ಇತರರ ಕಣ್ಣೀರು ಅವರ ಭಾವನೆಗಳನ್ನು ಹಿಂದಿನಂತೆ ಜಾಗೃತ ಗೊಳಿಸುತ್ತಿಲ್ಲ. ಇದರ ಉದಾಹರಣೆಗಳು ಶಿವವೊಗ್ಗ, ಚಿತ್ರದುರ್ಗ, ಕೋಲಾರ ಹಾಗೂ ಇನ್ನು ಕೆಲವು ಜಿಲ್ಲೆಗಳು.

ಆಗ ನಾನು ಔಟ್, ಈಗ ನೀನು ಔಟ್
ಮೂರನೇಯ ಸಾಧ್ಯತೆ ಇದು. ತಮ್ಮ ತಮ್ಮ ಜಿಲ್ಲೆಯ ಚುನಾವಣೆಗಳನ್ನು ಕೆಲವು ಎಮ್ಮೆಲ್ಲೆಗಳು ಗಂಭೀರವಾಗಿ ತೆಗೆದುಕೊಂಡಿದ್ದು. ಇದರಿಂದ ಕೆಲವು ಕಡೆ ಕೆಲವು ಜನ ಗೆದ್ದಿದ್ದಾರೆ, ಕೆಲವರನ್ನು ಸೋಲಿಸಲಾಗಿದೆ. ಯಡಿಯೂರಪ್ಪ ಅವರ ಸರಕಾರದ ಉಳಿವಿನ ಮಹಾನಾಟಕದಲ್ಲಿ ಸದನದಿಂದ ಹೊರನಿಲ್ಲಬೇಕಾದ ೧೬ ಜನ ಬಿಜೆಪಿ ವಿರುದ್ಧ ದ ಹೋರಾಟವನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಂಡಿದ್ದಿರಬಹುದು. ಇದು ಆಡಳಿತ ಪಕ್ಷದ ಪ್ರಭಾವವನ್ನು ಆ ಕ್ಷೇತ್ರಗಳಲ್ಲಿ ಕುಗ್ಗಿಸಿದೆ. ಇದಕ್ಕೆ ಉದಾಹರಣೆಗಳು ರಾಯಚೂರು, ಕೊಪ್ಪಳ, ಕಾರವಾರ ಮುಂತಾದವು.

ಇನ್ನು ಸ್ವಲ್ಪ ಕಡೆಗಳಲ್ಲಿ ವಿರೋಧ ಪಕ್ಷದವರು ಕೆಲಸ ಮಾಡಿದಂತೆ ಕಾಣುತ್ತದೆ. ಜನರಲ್ಲಿ ಇರಬಹುದಾದ ಅಸಮಾಧಾನಕ್ಕೆ ಗಾಳಿ ಹಾಕಿ, ಆಡಳಿತ ಪಕ್ಷ ದ ಅಭ್ಯರ್ಥಿಗೆ ಪರ‍್ಯಾಯವಾಗಬಹುದಾದ ಅಭ್ಯರ್ಥಿಯನ್ನು ಹುಡುಕಿ, ಮತದಾರರು ಮತಗಟ್ಟೆಗೆ ಬರುವಂತೆ ಪುಸಲಾಯಿಸಲು ಓಡಾಡಿದ ವಿರೋಧ ಪಕ್ಷದ ನಾಯಕರ ಜಿಲ್ಲೆ, ಕ್ಷೇತ್ರಗಳಲ್ಲಿ ಆಡಳಿತ ಪಕ್ಷ ಕ್ಕೆ ಜನವರಿಯ ಚಳಿಯಲ್ಲೂ ಬೆವರು ಒಡೆದಿದೆ. ಲೆಕ್ಕಾಚಾರ ತಪ್ಪಾಗಿದೆ. ಇದಕ್ಕೆ ಉದಾಹರಣೆಗಳು ಗುಲ್ಬರ್ಗಾ, ಬಳ್ಳಾರಿ, ಚಿಕ್ಕಬಳ್ಳಾಪುರ ಇರಬಹುದು. ಆದರೆ ಇಂಥವು ಕಮ್ಮಿ.

ಯಮುನೆಯೋ, ಕೃಷ್ಣೆಯೋ ಕಾವೇರಿಯೋ?
ಇಷ್ಟೆಲ್ಲಾ ಆದ ನಂತರ ಯಡಿಯೂರಪ್ಪ ಅವರು ಇಲ್ಲೇ ಇರುತ್ತಾರೋ ಅಥವಾ ದಿನಾ ಬೆಳಿಗ್ಗೆ ದೆಹಲಿ ಯ ಜಮುನಾ ನದಿ ನೀರು ಕುಡಿಯು ವ ತಮ್ಮ ಆಸೆ ಯನ್ನು ಪೂರೈಸಿಕೊಳ್ಳುತ್ತಾರೋ? ಪ್ರಶ್ನೆ ಕಠಿಣ. ಆದರೆ ಉತ್ತರ ಸರಳ. ಅವರು ಸೋತು ಹೋಗಿ, ಬೇರೆ ದಾರಿ ಇಲ್ಲದೇ ರಾಜ್ಯಸಭೆ ಸದಸ್ಯನಾಗಿ ಈ ವಯಸ್ಸಿನಲ್ಲಿ ಹಿಂದಿ ಕಲಿಯುವ ಪರಿಸ್ಥಿತಿ ಅವರಿಗೆ ಬರಲಿಲ್ಲ. ಇನ್ನು ಭಾರಿ ಜಯ ಸಾಧಿಸಿ, ವಿರೋಧಿಗಳ ಬಾಯಿಮುಚ್ಚಿಸಿ, ಪತ್ರಿಕೆಗಳಿಗೆ ಮೌನ ವೃತದ ದೀಕ್ಷೆ ಕೊಟ್ಟು, ‘ನನ್ನ ಇನ್ನಿಂಗ್ಸ್ ಆಗಿದೆ, ಇನ್ನು ಯುವಕರ ಆಟ’ ಅಂತ ಇನ್ನೊಬ್ಬ ನಾಯಕರನ್ನು ಆಡಲು ಬಿಡುವಷ್ಟು ದೊಡ್ಡ ಯಶಸ್ಸೂ ಅವರ ಕೈ ಸೇರಲಿಲ್ಲ.

ಬೆಂಗಳೂರಿನಲ್ಲಿ ತಿರುವಳ್ಳುವರ್ ಮೂರ್ತಿ ಕೂಡಿಸಿ, ಚೆನ್ನೈನಲ್ಲಿ ಸರ್ವಜ್ಙನನ್ನು ನಿಲ್ಲಲು ಬಿಟ್ಟು ಕಾವೇರಿ ಕಿರಿಕಿರಿ ತಪ್ಪಿಸಿಕೊಂಡ ಅವರು, ನಮ್ಮ ಪಾಲಿನ ಕೃಷ್ಣೆಯ ನೀರನ್ನು ಪೂರಾ ಬಳಸಿಕೊಳ್ಳಲು ಡ್ಯಾಮ್ ಕಟ್ಟಿ, ಕಾಲುವೆ ಅಗೆಯುವ ತಯ್ಯಾರಿಯಲ್ಲಿ ಸಫಾರಿ ತೆಗೆದು ಇಡುವುದು ಒಳಿತು. ಮುಂದಿನ ಮೂರು ವರ್ಷದ ಬೇಸಿಗೆಗಳಲ್ಲಿ ಅವರು ಜಮುನಾ ನದಿ ನೀರಿನ ರುಚಿ ನೋಡುವ ಸಾಧ್ಯತೆ ಕಡಿಮೆ.

ಎಲ್ಲಾ ಸರಿ, ಆದರೆ ಈ ಪಂಚಾಯಿತಿ ಎಂದರೇನು? ಈ ಪಂಚಾಯಿತಿ ಗಳಿಂದ ನನಗೇನಾದರೂ ಒಳ್ಳೆಯದಾಗುತ್ತದೆಯೇ? ಇದರಿಂದ ಯಾರಿಗಾದರೂ ಏನಾದರೂ ಒಳ್ಳೆಯದಾಗುತ್ತದೆಯೇ? ಈ ವಿಚಾರಗಳನ್ನು ಆಮೇಲೆ ನೋಡೋಣ.
ಈಗ ಇಲ್ಲಿಗೆ ಮುಗಿಯಿತು.
Print Close